Lakshmiputhra Movie: 'ಉಪಾಧ್ಯಕ್ಷ' ಚಿಕ್ಕಣ್ಣ ಈಗ 'ಲಕ್ಷ್ಮೀಪುತ್ರ'; ಸೆಟ್ಟೇರಿತು ಹೊಸ ಚಿತ್ರ
ಸ್ಯಾಂಡಲ್ವುಡ್ನಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಇದೀಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಎ.ಪಿ. ಅರ್ಜುನ್ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿತ್ತಿರುವ ʼಲಕ್ಷ್ಮೀಪುತ್ರʼ ಚಿತ್ರದಲ್ಲಿ ಇವರು ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಮುಹೂರ್ತ ನೆರವೇರಿದೆ.

ʼಲಕ್ಷ್ಮೀಪುತ್ರʼ ಚಿತ್ರದ ಮುಹೂರ್ತ ನೆರವೇರಿತು.

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ(Chikkanna) ಕಳೆದ ವರ್ಷ ತೆರೆಕಂಡ 'ಉಪಾಧ್ಯಕ್ಷ' (Upadhyaksha) ಚಿತ್ರದ ಮೂಲಕ ನಾಯಕನ ಪಾತ್ರದಲ್ಲಿ ಗಮನ ಸೆಳೆದರು. ಇದೀಗ ಅವರು ಮತ್ತೊಂದು ಸಿನಿಮಾಕ್ಕೆ ಹೋರೋ ಆಗಿ ಆಯ್ಕೆಯಾಗಿದ್ದಾರೆ. ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ʼಲಕ್ಷ್ಮೀಪುತ್ರʼ(Lakshmiputhra Movie). ಎ.ಪಿ.ಅರ್ಜುನ್ ತಮ್ಮದೇ ನಿರ್ಮಾಣ ಸಂಸ್ಥೆ ಎ.ಪಿ. ಅರ್ಜುನ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ನಾಗರಬಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ನೆರವೇರಿತು. ಅರ್ಜುನ್ ಗೂರೂಜಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
ಬಳಿಕ ನಗರದ ಟಾಪಿಕ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಎ.ಪಿ. ಅರ್ಜುನ್ ಅವರು, ʼʼಲಕ್ಷ್ಮೀಪುತ್ರʼ ಕೊರೋನಾ ಸಮಯದಲ್ಲಿ ಮಾಡಿದ ಕಥೆ. ತಾಯಿ-ಮಗನ ಸಂಬಂಧದ ಕಥೆ ಇದು. ಪ್ರತಿಯೊಬ್ಬರೂ ನೋಡಬೇಕಾದ ಎಮೋಷನ್ ಕಥೆ ಚಿತ್ರದಲ್ಲಿದೆ. ಕೊರೋನಾ ಸಮಯದಲ್ಲಿ ಭಾವನೆ-ಸಂಬಂಧ ಇಟ್ಕೊಂಡು ಬರೆದ ಈ ಕಥೆಯನ್ನು ಒಮ್ಮೆ ಚಿಕ್ಕಣ್ಣ ಸಿಕ್ಕಾಗ ಹೇಳಿದ್ದೆ. ಅವ್ರು ಒಪ್ಪಿಕೊಂಡ್ರು. ಹೀಗೆ ಶುರುವಾಗಿದ್ದು ʼಲಕ್ಷ್ಮೀಪುತ್ರʼ. ಚಿತ್ರಕ್ಕೆ ನಿರ್ಮಾಪಕಿ ನನ್ನ ಪತ್ನಿ. ಕೋ ಪ್ರೊಡ್ಯೂಸರ್ ರವಿ ಕಿರಣ್. ನನ್ನ ಗೆಳೆಯ ವಿಜಯ್ ಸ್ವಾಮಿ ಚಿತ್ರದ ನಿರ್ದೇಶಕರುʼʼ ಎಂದು ಮಾಹಿತಿ ನೀಡಿದರು.
ನಟ ಚಿಕ್ಕಣ್ಣ ಮಾತನಾಡಿ, ʼʼಕಳೆದ ವರ್ಷದ ಜನವರಿಯಲ್ಲಿ ʼಉಪಾಧ್ಯಕ್ಷʼ ರಿಲೀಸ್ ಆಗಿತ್ತು. ಈ ವರ್ಷದ ಜನವರಿಯಲ್ಲಿ ʼಲಕ್ಷ್ಮೀಪುತ್ರʼ ಮುಹೂರ್ತ ಆಗಿದೆ. ಒಂದು ವರ್ಷವಾಯ್ತು ಒಂದು ಚಿತ್ರದಿಂದ ಇನ್ನೊಂದು ಚಿತ್ರ ಶುರುವಾಗಲು. ʼಉಪಾಧ್ಯಕ್ಷʼ ರಿಲೀಸ್ ಆದಾಗ ಥಿಯೇಟರ್ ಭೇಟಿಗೆಂದು ಇಡೀ ಕರ್ನಾಟಕ ಸುತ್ತಿದ ಆ ಸಮಯದಲ್ಲಿ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಸಿನಿಮಾ ನೋಡಲು ಬಂದಿದ್ದರು. ಆಗ ಅಂದುಕೊಂಡಿದ್ದು ನನ್ನ ನೋಡಲು ಫ್ಯಾಮಿಲಿ ಬರುತ್ತದೆ. ಹೀಗಾಗಿ ಒಳ್ಳೆ ಫ್ಯಾಮಿಲಿ ಕಥೆಯ ಹುಡುಕಾಟದಲ್ಲಿ ಸಿಕ್ಕಿದ್ದು ʼಲಕ್ಷ್ಮೀಪುತ್ರʼ. ಯೂತ್ಸ್ ಹಾಗೂ ಇಡೀ ಕುಟುಂಬ ನೋಡುವ ಸಿನಿಮಾ ಇದು. ಚಿತ್ರದಲ್ಲಿ ಒಂದು ಮೆಸೇಜ್ ಇದೆʼʼ ಎಂದು ಹೇಳಿದರು.
ಸಚಿವ ಸಂತೋಷ್ ಲಾಡ್ ಅರ್ಪಿಸುತ್ತಿರುವ ʼಲಕ್ಷ್ಮೀಪುತ್ರʼ ಚಿತ್ರಕ್ಕೆ ಎ.ಪಿ.ಅರ್ಜುನ್ ಕಥೆಯ ಜತೆಗೆ ಸಾಹಿತ್ಯ ಬರೆದಿದ್ದಾರೆ. ಇವರದ್ದೇ ಗರಡಿಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್.ಸ್ವಾಮಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: #Paaru Parvathy Movie: ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ ಅಭಿನಯದ ‘#ಪಾರು ಪಾರ್ವತಿʼ ಚಿತ್ರದ ಟ್ರೈಲರ್ಗೆ ಅಭಿಮಾನಿಗಳು ಫಿದಾ
ಗಿರೀಶ್ ಆರ್. ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿರುವ 'ಲಕ್ಷ್ಮೀಪುತ್ರ'ನಿಗೆ ಡಾ.ಕೆ.ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಎ.ಪಿ. ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದರೆ, ರಾಜೇಶ್ ರಾವ್ ಸಹ ನಿರ್ದೇಶನ ಮಾಡುತ್ತಿದ್ದಾರೆ. ಎ.ಪಿ. ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಾಣ ಮಾಡುತ್ತಿದ್ದು, ರವಿ ಕಿರಣ್ ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಡುತ್ತಿದ್ದಾರೆ. ಚಿತ್ರದಲ್ಲಿ ತಾರಾ, ಧರ್ಮಣ್ಣ ಕಡೂರ್ ಹಾಗೂ ಕುರಿ ಪ್ರತಾಪ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.