ʻಟೀಮ್ ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲʼ: ಪಾಕಿಸ್ತಾನ ತಂಡದ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
Shoaib Akhtar on Pakistan team: ಭಾರತ ವಿರುದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಪಾಕಿಸ್ತಾನ ತಂಡದ ವಿರುದ್ಧ ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ಪಾಕಿಸ್ತಾನ ತಂಡಕ್ಕೆ ಬುದ್ದಿ ಇಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ತಂಡವನ್ನು ಟೀಕಿಸಿದ ಶೋಯೆಬ್ ಅಖ್ತರ್.

ದುಬೈ: ಭಾರತದ ವಿರುದ್ದ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡದ ವಿರುದ್ದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ದುಬೈ ಪಿಚ್ ನಿಧಾನಗತಿಯಿಂದ ಕೂಡಿದ್ದು, ಫಾಸ್ಟ್ ಬೌಲರ್ಗಳಿಗೆ ನೆರವು ನೀಡುತ್ತಿತ್ತು. ಆದರೂ ಭಾರತ ತಂಡದ ವಿರುದ್ದ ಇನ್ನೂ 45 ಎಸೆತ ಬಾಕಿ ಇರುವಾಗಲೇ 6 ವಿಕೆಟ್ ಸೋಲು ಅನುಭವಿಸಿದ್ದಕ್ಕೆ ಫಾಸ್ಟ್ ಬೌಲಿಂಗ್ ದಿಗ್ಗಜ ಶೋಯೆಬ್ ಅಖ್ತರ್, ಪಾಕಿಸ್ತಾನ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಪಾಕಿಸ್ತಾನ ತಂಡದ ಪ್ಲೇಯಿಂಗ್ XIನಲ್ಲಿ ಪೂರ್ಣ ಪ್ರಮಾಣ ಸ್ಪಿನ್ನರ್ಗೆ ಅವಕಾಶ ನೀಡಬೇಕಾಗಿತ್ತೆಂದು ಹೇಳಿದ್ದಾರೆ. ಆದರೆ, ಪಾಕಿಸ್ತಾನ ತಂಡದ ಟೀಮ್ ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲ ಎಂದು ಅವರು ಆರೋಪ ಮಾಡಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನ ತಂಡದ ಪ್ಲೇಯಿಂಗ್ XIನಲ್ಲಿ ಶಾಹೀನ್ ಶಾ ಅಫ್ರಿದಿ ದುಬಾರಿಯಾದರೂ ಎರಡು ವಿಕೆಟ್ ಕಿತ್ತಿದ್ದರೆ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಸಲ್ಮಾನ್ ಅಘಾ, ಅಬ್ರಾರ್ ಅಹ್ಮದ್ ಮತ್ತು ಖುಷ್ದಿಲ್ ಶಾ ಸ್ಪಿನ್ ಆಲ್ರೌಂಡರ್ಗಳಾಗಿದ್ದಾರೆ.
IND vs PAK: ಕೊಹ್ಲಿ ಶತಕ ವೈಭವ; ಪಾಕ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಪಾಕಿಸ್ತಾನ ಟೀಮ್ ಮ್ಯಾನೇಜ್ಮೆಂಟ್ಗೆ ಬುದ್ದಿ ಇಲ್ಲ
"ಭಾರತದ ವಿರುದ್ಧ ಪಾಕಿಸ್ತಾನ ಸೋತಿದೆ ಹಾಗೂ ಇದರಿಂದ ನನಗೆ ಯಾವುದೇ ನಿರಾಶೆಯಾಗಿಲ್ಲ. ಏಕೆಂದರೆ ಪಾಕಿಸ್ತಾನ ಸೋಲುವ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ನೀವು ಏಕೆ ಐವರು ಪೂರ್ಣ ಪ್ರಮಾಣದ ಬೌಲರ್ಗಳನ್ನು ಆಡಿಸಿಲ್ಲ, ಇದು ಪಂದ್ಯದಲ್ಲಿ ನಡೆಯಬೇಕಿತ್ತು. ವಿಶ್ವದ ಬೇರೆ ತಂಡಗಳು ಐವರು ಅತ್ಯುತ್ತಮ ಬೌಲರ್ಗಳನ್ನು ಆಡಿಸುತ್ತಿವೆ, ಆದರೆ ನೀವು ಮಾತ್ರ ಆಲ್ರೌಂಡರ್ಗಳನ್ನು ಆಡಿಸುತ್ತಿದ್ದೀರಿ. ನೀವು ಯಾವುದರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. ಇದು ಬುದ್ಧಿಹೀನ ಮತ್ತು ತಿಳುವಳಿಕೆಯಿಲ್ಲದ ನಿರ್ವಹಣೆ ಎಂದು ನಾನು ಭಾವಿಸುತ್ತೇನೆ. ನನಗೆ ತುಂಬಾ ನಿರಾಶೆಯಾಗಿದೆ. ಮಕ್ಕಳಿಗೆ ನಾನು ಏನೆಂದು ಹೇಳಲಿ? ಅವರ ನಿರ್ವಹಣೆಯ ರೀತಿ ಕೆಟ್ಟದಾಗಿದೆ," ಎಂದು ತಾವು ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
I'm not disappointed at all. pic.twitter.com/Hmc38V03KJ
— Shoaib Akhtar (@shoaib100mph) February 23, 2025
"ಉದ್ದೇಶ ತುಂಬಾ ವಿಭಿನ್ನವಾಗಿದೆ. ಅವರಿಗೆ ಯಾವುದೇ ರೀತಿಯ ಕೌಶಲ ಇಲ್ಲವೆಂದು ತಿಳಿಯುತ್ತಿದೆ. ಅವರಿಗೆ ನಿರ್ವಹಣೆ ಮಾಡಬಲ್ಲ ಕೌಶಲ ಅಥವಾ ಅವರಲ್ಲಿ ಯಾವುದೇ ರೀತಿಯ ನಿರ್ವಹಣೆ ಇಲ್ಲವೆಂದು ನನಗೆ ತಿಳಿಯುತ್ತಿದೆ. ಟೂರ್ನಿಗೆ ಸುಮ್ಮನೆ ಹೋಗಿ ಆಡುವುದು ಎಂದು ಅವರು ಅರಿತುಕೊಂಡಿದ್ದಾರೆ. ತಂಡದಲ್ಲಿರುವ ಯಾರೊಬ್ಬರಿಗೂ ಏನೂ ಗೊತ್ತಿಲ್ಲ," ಎಂದು ಅವರು ಆರೋಪ ಮಾಡಿದ್ದಾರೆ.
India win the match by six wickets.#PAKvIND | #ChampionsTrophy pic.twitter.com/woTMIH4M8n
— Pakistan Cricket (@TheRealPCB) February 23, 2025
ಭಾರತ ತಂಡದಲ್ಲಿ ಬಲಿಷ್ಠ ಸ್ಪಿನ್ ಪಡೆ ಇದೆ: ಅಖ್ತರ್
"ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ ಹೆಚ್ಚಿನ ಸಂಖ್ಯೆಯ ಸ್ಪಿನ್ನರ್ಗಳನ್ನು ಹೊಂದಿದೆ. ಕುಲ್ದೀಪ್ ಯಾದವ್ ಜೊತೆಗೆ ಭಾರತ ತಂಡದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಇದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಡವಾಗಿ ಭಾರತ ತಂಡಕ್ಕೆ ವರುಣ್ಗೆ ಅವಕಾಶ ನೀಡಲಾಗಿತ್ತು. ಕನಿಷ್ಠ ಆರು ಮಂದಿ ಬೌಲರ್ಗಳೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಯಾವುದೇ ದಿನ 10 ಓವರ್ಗಳನ್ನು ಬೌಲ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಇದೇ ಅಂಶವನ್ನು ನಾವು ಪಾಕಿಸ್ತಾನ ತಂಡಕ್ಕೆ ಹೇಳಲು ಸಾಧ್ಯವಿಲ್ಲ," ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ತಂಡದ ಫಾಸ್ಟ್ ಬೌಲರ್ಗಳಾದ ಹ್ಯಾರಿಸ್ ರೌಫ್, ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರು ಒಟ್ಟು 163 ರನ್ಗಳನ್ನು ನೀಡಿದ್ದಾರೆ. ಭಾರತದ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲು ಅನುಭವಿಸಿದ ಬಳಿಕ, ಐವರು ವಿಶೇಷ ಬೌಲರ್ಗಳನ್ನು ಆಡಿಸದ ಪಾಕ್ ನಾಯಕ ಮೊಹಮ್ಮದ್ ರಿಝ್ವಾನ್ ಅವರನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದರು.