ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Narendra Modi: ಜಂಗಲ್‌ರಾಜ್‌ನ ಜನರು ಕುಂಭಮೇಳವನ್ನು ಅವಮಾನಿಸುತ್ತಿದ್ದಾರೆ; ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಮೋದಿ ಗುಡುಗು

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ದ ಬಗ್ಗೆ 'ಅರ್ಥಹೀನ' ಹೇಳಿಕೆ ನೀಡಿದ್ದಕ್ಕಾಗಿ ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ವಿರುದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ''ಜಂಗಲ್‌ರಾಜ್‌ನಲ್ಲಿ ಭಾಗಿಯಾಗಿರುವ ಜನರಿಗೆ ಹಿಂದೂ ನಂಬಿಕೆಯ ಬಗ್ಗೆ ದ್ವೇಷವಿದೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಪ್ರಧಾನಿ ಮೋದಿ ಗುಡುಗು

Profile Ramesh B Feb 24, 2025 6:30 PM

ಪಾಟ್ನಾ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh Mela)ದ ಬಗ್ಗೆ 'ಅರ್ಥಹೀನ' ಹೇಳಿಕೆ ನೀಡಿದ್ದಕ್ಕಾಗಿ ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ವಿರುದ್ಧ ಸೋಮವಾರ (ಫೆ. 24) ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ''ಜಂಗಲ್‌ರಾಜ್‌ನಲ್ಲಿ ಭಾಗಿಯಾಗಿರುವ ಜನರಿಗೆ ಹಿಂದೂ ನಂಬಿಕೆಯ ಬಗ್ಗೆ ದ್ವೇಷವಿದೆʼʼ ಎಂದು ಹೇಳಿದರು. ಬಿಹಾರದ ಭಾಗಲ್ಪರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. "ಇದೀಗ ಏಕತೆಯ ಸಾಕ್ಷಿಯಾಗಿ ಮಹಾ ಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಭಾರತದ ಭವ್ಯ ಪರಂಪರೆಯನ್ನು ಸಂರಕ್ಷಿಸಲು ಮತ್ತು ಭವ್ಯ ಭವಿಷ್ಯವನ್ನು ನಿರ್ಮಿಸಲು ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿದೆ. ಆದರೆ ಜಂಗಲ್‌ರಾಜ್ ಅನ್ನು ಬೆಂಬಲಿಸುವ ಈ ಜನರು ನಮ್ಮ ಪರಂಪರೆ ಮತ್ತು ನಂಬಿಕೆಯನ್ನು ದ್ವೇಷಿಸುತ್ತಾರೆ" ಎಂದು ಕಿಡಿಕಾರಿದರು.

ಇತ್ತೀಚೆಗೆ ಲಾಲು ಪ್ರಸಾದ್‌ ಯಾದವ್‌ ಮಹಾ ಕುಂಭಮೇಳ ಅರ್ಥಹೀನ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಮಹಾ ಕುಂಭಮೇಳದಲ್ಲಿ ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಇದರ ಹೊರತಾಗಿಯೂ ಆರ್‌ಜೆಡಿ ನಮ್ಮ ನಂಬಿಕೆಯನ್ನು ಅವಮಾನಿಸುತ್ತಿದೆ ಎಂದು ಹೇಳಿದರು.



"ಕುಂಭಮೇಳ ಭಾರತದ ನಂಬಿಕೆ, ಏಕತೆ ಮತ್ತು ಸಾಮರಸ್ಯದ ಅತಿದೊಡ್ಡ ಹಬ್ಬ. ಯುರೋಪಿನ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಜನರು ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೂ ಜಂಗಲ್‌ರಾಜ್ ಅನ್ನು ಬೆಂಬಲಿಸುವವರು ಈ ಪವಿತ್ರ ಧಾರ್ಮಿಕ ಕಾರ್ಯವನ್ನು ಅವಮಾನಿಸುತ್ತಿದ್ದಾರೆ" ಎಂದು ಅವರು ಹೇಳಿದರು.

"ರಾಮ ಮಂದಿರ ನಿರ್ಮಾಣದಿಂದ ಅಸಮಧಾನಕ್ಕೊಳಗಾಗಿರುವ ಅದೇ ಜನರು ಮಹಾ ಕುಂಭಮೇಳವನ್ನು ಟೀಕಿಸುತ್ತಿದ್ದಾರೆ. ಮಹಾ ಕುಂಭಮೇಳವನ್ನು ಅಗೌರವಿಸುವವರನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸುವುದಿಲ್ಲ" ಎಂದು ಮೋದಿ ತಿಳಿಸಿದರು.

ʼʼಕಾಂಗ್ರೆಸ್ ಮತ್ತು ಜಂಗಲ್‌ರಾಜ್ ಜನರು ಬಿಹಾರವನ್ನು ಹಿಂದಕ್ಕೆ ತಳ್ಳಿದರು. ಆದರೆ ಈಗ ಎನ್‌ಡಿಎ ಸರ್ಕಾರದ ನೇತೃತ್ವದಲ್ಲಿ ಬಿಹಾರವು ಮತ್ತೆ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ. ಭಾಗಲ್ಪುರವು ಈ ಹಿಂದೆ ಜಾಗತಿಕ ಜ್ಞಾನದ ಕೇಂದ್ರವಾಗಿತ್ತುʼʼ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Delhi Stampede: ಒಂದೇ ಹೆಸರಲ್ಲಿ ಎರಡು ರೈಲು; ದೆಹಲಿ ಕಾಲ್ತುಳಿತಕ್ಕೆ ಇದೇ ಕಾರಣವಾಯ್ತಾ?

ಲಾಲು ಪ್ರಸಾದ್‌ ಯಾದವ್‌ ಹೇಳಿದ್ದೇನು?

ಇತ್ತೀಚೆಗೆ ದಿಲ್ಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂದು ಹೇಳಿದ್ದ ಲಾಲು ಪ್ರಸಾದ್‌ ಯಾದವ್‌, ಮಹಾ ಕುಂಭಮೇಳ ಅರ್ಥಹೀನ ಎಂದು ಕರೆದಿದ್ದರು. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಬಮೇಳಕ್ಕೆ ಕೋಟ್ಯಂತರ ಮಂದಿ ಹೋಗುವ ಕುರಿತು ಪ್ರತಿಕ್ರಿಯಿಸಿದ ಲಾಲು, ʼʼಮಹಾ ಕುಂಭಮೇಳಕ್ಕೆ ಯಾವುದೇ ಅರ್ಥವಿಲ್ಲ. ಅದು ಅರ್ಥಹೀನʼʼ ಎಂದು ತಿಳಿಸಿದ್ದರು.

ಫೆ. 15ರ ರಾತ್ರಿ ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.