ಬೆಳಗಾವಿ :
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನ ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ 95ವರ್ಷ ವಯಸ್ಸಿನ ವಯೋವೃದ್ಧೆ ಸಿದ್ಧವ್ವ ಮೇತ್ರಿ(95)ಇವತ್ತು ಕೊನೆಯುಸಿರೆಳೆದಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ, ಇವತ್ತು ಬೆಳಿಗ್ಗೆ ತಮ್ಮ ನಿವಾಸ ಕಂಗ್ರಾಳಿ ಗಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದ ಸಿದ್ಧವ್ವ,ಊಟದ ವ್ಯವಸ್ಥೆ ಮಾಡಿದ್ದರು. ಇದರಿಂದ ತೀವ್ರ ಸಂತೋಷಗೊಂಡ ಅಂಬೇಡ್ಕರ್ ಅವರು, ನಿಮ್ಮಂತ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಬೆಳೆಯಬೇಕೆಂದು ಸಲಹೆ ನೀಡಿದ್ದರು. ಇದರಿಂದ ತೀವ್ರ ಪ್ರಭಾವಿತಳಾಗಿದ್ದ ಸಿದ್ಧವ್ವ, ಜೀವಿತ ಅವಧಿಯಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಇವತ್ತು ಬೆಳಿಗ್ಗೆ 11ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.