Pavagada News: ತಿರುಮಣಿ ಸೋಲಾರ್ ಪಾರ್ಕ್ನಲ್ಲಿ ಬಂಡೆ ಸ್ಫೋಟದ ವೇಳೆ ಕಾರ್ಮಿಕ ಸಾವು, ಮತ್ತೊಬ್ಬ ಗಂಭೀರ
Pavagada News: ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಬಂಡೆ ಸ್ಫೋಟ ಮಾಡುವಾಗ ಅವಘಢ ಸಂಭವಿಸಿದೆ. ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸಮೀಪ ಸೋಲಾರ್ ಪಾರ್ಕ್ನಲ್ಲಿ (Pavagada Solar Park) ಬಂಡೆ ಸ್ಫೋಟದ ವೇಳೆ ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ರಾಯಚೂರು ಮೂಲದ ಬಸವರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಚ್ಚಮ್ಮನಹಳ್ಳಿಯ ಶಿವಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ:
KSPDCL ನಿಂದ 1002 ಎಕರೆ ಪ್ರದೇಶವನ್ನು ಸೋಲಾರ್ ಪಾರ್ಕ್ ನಿರ್ಮಾಣಕ್ಕೆ JSW ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಪಾರ್ಕ್ ನಿರ್ಮಾಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಸಮೀಪದಲ್ಲಿ ಇದ್ದ ಬಸವರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದು, ಕಾರ್ಮಿಕ ಶಿವಯ್ಯ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಿಂದ ಅಕ್ಕಪಕ್ಕದ ಜಾಗ ಹಾಗೂ ಬೆಟ್ಟಕ್ಕೂ ಬೆಂಕಿ ಹಬ್ಬಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಬಂಡೆ ಬ್ಲಾಸ್ಟ್ ಮಾಡಲು ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ KSPSCL ಎಇಇ ಮಹೇಶ್, ಗ್ರಾಮಾಂತರ ಸಿಪಿಐ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಪರಾರಿಯಾದ ದಂಪತಿ!

ಮಧುಗಿರಿ: ಸುಮಾರು 10ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮಸ್ಥರ ಹೆಸರಿನಲ್ಲಿ ಸಾಲ ಪಡೆದು ಅದನ್ನು ಮರು ಪಾವತಿಸದೇ ಹಣದ ಸಮೇತ ದಂಪತಿ ಪರಾರಿಯಾಗಿದ್ದಾರೆ ಎಂದು ಮಧುಗಿರಿ (Madhugiri News) ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ ಮತ್ತು ರತ್ನಮ್ಮ ಎಂಬುವರು ಸುಮಾರು 35 ಮಂದಿಯ ಆಧಾರ್ ಕಾರ್ಡ್, ಇತರೆ ದಾಖಲೆ ಪಡೆದಿದ್ದರು. 10 ಮೈಕ್ರೋ ಫೈನಾನ್ಸ್ ಕಂಪನಿಗಳಿಂದ 45 ರಿಂದ 50 ಲಕ್ಷದ ವರೆಗೆ ಸಾಲ ಮಂಜೂರು ಮಾಡಿಸಿದ್ದರು. ಜನರಿಗೆ ಮಂಜೂರಾದ ಸಾಲದ ಹಣ ಪಡೆದು ನಾವೇ ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಗ್ರಾಮಸ್ಥರು ಆರೋಪಿಸಿದ್ದಾರೆ.
ದಂಪತಿಗಳಿಗೆ ಮೈಕ್ರೋ ಫೈನಾನ್ಸ್ ಕಂಪನಿ ಜತೆಗೆ ಒಡನಾಟ ಇಟ್ಟುಕೊಂಡು ಪ್ರಾರಂಭದಲ್ಲಿ ಕೆಲವರಿಗೆ ಸಾಲ ಕೊಡಿಸಿದ್ದರು. ನಂತರ ಗ್ರಾಮದ 35 ಮಂದಿಗೆ ಸಾಲ ಕೊಡಿಸಿದ್ದಾರೆ. ಪ್ರತಿ ತಿಂಗಳು ನಾವೇ ಈ ಹಣವನ್ನು ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಹಣದ ಸಮೇತ 2 ತಿಂಗಳ ಹಿಂದೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರು ಪಾವತಿ ಮಾಡುವಂತೆ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿವೆ. ಫೈನಾನ್ಸ್ ಸಿಬ್ಬಂದಿ ಪ್ರತಿ ದಿನ ಮನೆಗಳ ಮುಂದೆ ಬಂದು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಹಣವನ್ನು ಪಡೆದು ದಂಪತಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಗ್ರಾಮದ ರಂಗಮ್ಮ, ಸಾವಿತ್ರಮ್ಮ, ನರಸಮ್ಮ, ಕೋಟೆಮ್ಮ ಸಿದ್ದಗಂಗಮ್ಮ, ರತ್ನಮ್ಮ, ಎಸ್.ರಂಗಮ್ಮ, ಕೋಮಲಮ್ಮ, ಲಕ್ಷ್ಮೀದೇವಮ್ಮ, ಮಂಜುಳಾ, ವೀರನಾಗಮ್ಮ, ಹನುಮಕ್ಕ, ಮಂಜುಳಮ್ಮ, ಮೇಘಾ, ಪುಟ್ಟ ತಾಯಪ್ಪ ಹಾಜರಿದ್ದರು.
ಸಾಲ ಪಡೆದು ಪರಾರಿಯಾಗಿಲ್ಲ
ನಾವು ಗ್ರಾಮಸ್ಥರ ಹೆಸರಿನಲ್ಲಿ ಯಾವುದೇ ರೀತಿಯ ಸಾಲ ಪಡೆದು ಪರಾರಿಯಾಗಿಲ್ಲ. ಯಾವುದೇ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಈ ಬಗ್ಗೆ ಸುಮ್ಮನೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದಂಪತಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | R Ashok: ಕಾಂಗ್ರೆಸ್ ಸರ್ಕಾರದಿಂದ ರೌಡಿಗಳಿಗೆ ಕೈ ತುಂಬಾ ಉದ್ಯೋಗ: ಆರ್.ಅಶೋಕ್