Bengaluru News: ಕೊರಮ, ಕೊರಚರು ಪರಿಶಿಷ್ಟರ 101 ಜಾತಿಪಟ್ಟಿಯಲ್ಲಿದ್ದು, ಸಮುದಾಯದಲ್ಲಿ ಒಡಕು ಮೂಡಿಸುವ ಪ್ರಯತ್ನ ಸಲ್ಲದು: ಅಖಿಲ ಕರ್ನಾಟಕ ಕೊರಚ ಮಹಾಸಭಾ
ಗಾಂಧಿಭವನದಲ್ಲಿ ಈ ತಿಂಗಳ 5 ರಂದು ನಡೆದ ಅಲೆಮಾರಿ ಸಭೆಯಲ್ಲಿ ಸೂಕ್ಷ್ಮ ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿದ ಕೊರಚ ಸಮುದಾಯದವರನ್ನು ಕೈಬಿಟ್ಟು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದು ಖಂಡನೀಯ. ಆದರೆ ನಂತರ ಸ್ವತಃ ಎಚ್. ಆಂಜನೇಯ ಅವರು ಎಲ್ಲರನ್ನೂ ಒಟ್ಟೂಗೂಡಿಸಿಕೊಂಡು ಸಧ್ಯದಲ್ಲಿಯೇ ಇನ್ನೊಂದು ಸಭೆ ಮಾಡಿ ಅಲೆಮಾರಿ ಅಭಿವೃದ್ಧಿ ಮತ್ತು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗಿಕರಣದ ಬಗ್ಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.


ಬೆಂಗಳೂರು: ರಾಜ್ಯ ಸರ್ಕಾರದ 101 ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಆರ್ಟಿಕಲ್ 53 ರಲ್ಲಿ ಕೊರಚ, 54 ರಲ್ಲಿ ಕೊರಮ ಸಮುದಾಯವಿದೆ. ಇವರೆಡು ಪ್ರತ್ಯೇಕ ಸಮುದಾಯಗಳಾಗಿದ್ದು, ಒಳಮೀಸಲಾತಿ ವರ್ಗಿಕರಣದ ಸಂದರ್ಭದಲ್ಲಿ ಕೊರಚ ಸಮುದಾಯದ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಅವರ ಸಲಹೆಗಳನ್ನು ಪರಿಗಣಿಸಿ ಒಳಮೀಸಲಾತಿಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಆದರ್ಶ್ ಎಲ್ಲಪ್ಪ, ಗಾಂಧಿಭವನದಲ್ಲಿ ಈ ತಿಂಗಳ 5 ರಂದು ನಡೆದ ಅಲೆಮಾರಿ ಸಭೆಯಲ್ಲಿ ಸೂಕ್ಷ್ಮ ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿದ ಕೊರಚ ಸಮುದಾಯದವರನ್ನು ಕೈಬಿಟ್ಟು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದು ಖಂಡನೀಯ. ಆದರೆ ನಂತರ ಸ್ವತಃ ಎಚ್. ಆಂಜನೇಯ ಅವರು ಎಲ್ಲರನ್ನೂ ಒಟ್ಟೂಗೂಡಿಸಿಕೊಂಡು ಸಧ್ಯದಲ್ಲಿಯೇ ಇನ್ನೊಂದು ಸಭೆ ಮಾಡಿ ಅಲೆಮಾರಿ ಅಭಿವೃದ್ಧಿ ಮತ್ತು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗಿಕರಣದ ಬಗ್ಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದ್ದು, ಇನ್ನು ಮುಂದೆ ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಮಾಜಿ ಸಚಿಚವರು ಮಾಡಬಾದು ಎಂದರು.
ಇದನ್ನೂ ಓದಿ: Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್ ವಿಕೃತಿ!
ಗಾಂಧಿ ಭವನದ ಸಭೆಯಲ್ಲಿ ಕೊರಚ ಮತ್ತು ಕೊರಮ ಸಮುದಾಯದ ನಾಯಕರನ್ನು ನಿರ್ಲಕ್ಷಿಸ ಲಾಗಿತ್ತು. ಈ ಕಾರಣದಿಂದ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಗದ್ದಲದ ನಂತರ ನನ್ನನ್ನು ವೇದಿಕೆಗೆ ಆಹ್ವಾನಿಸಿದರು. ಆದರೆ ಕಳೆದ 2016ರಲ್ಲಿ ಸಿದ್ಧರಾಮಯ್ಯ ಸರ್ಕಾರ 101 ಪ.ಜಾತಿಗಳಲ್ಲಿ 51 ಅಲೆಮಾರಿ ಜಾತಿಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿದ್ದರು. ಕೊರಚ ಮತ್ತು ಕೊರಮ ಸಮುದಾಯಗಳು ಸಹ ಈ ಪಟ್ಟಿಯಲ್ಲಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಪಟ್ಟಿ ಹೊರಗಡೆ ಬರುವುದಕ್ಕಿಂತ ಮುಂಚೆ ಕೆಲವು ಅಧಿಕಾರ ಶಾಹಿಗಳ ಕುಮ್ಮಕ್ಕಿನಿಂದ ಸ್ವಾರ್ಥಕ್ಕಾಗಿ ಅಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಈ ಕೊರಚ ಮತ್ತು ಕೊರಮ ಸಮುದಾಯ ವನ್ನು ಅಲೆಮಾರಿ ಪಟ್ಟಿಯಿಂದ ಕೈಬಿಟ್ಟು ಕೇವಲ 49 ಅಲೆಮಾರಿ ಸಮುದಾಯಗಳ ಜಾತಿ ಪಟ್ಟಿ ಘೋಷಿಸಿದ್ದರು.
ನಂತರ ಈ ಕಿಡಿಗೇಡಿತನವನ್ನು 2018ರಲ್ಲಿ ಪ್ರಿಯಾಂಕ್ಖರ್ಗೆ ಯಾವುದೇ ಸ್ವಾರ್ಥವಿಲ್ಲದೇ ಸರಿಪಡಿಸಿ ದ್ದರು. ಸಾಮಾಜಿಕ ಕಳಂಕ, ಅಪಮಾನಕ್ಕೊಳಗಾದ ಮೂಲ ಅಲೆಮಾರಿ, ಅಪರಾಧಿತ ವಿಮುಕ್ತ ಬುಡಕಟ್ಟಿನ ಕೊರಚ ಮತ್ತು ಕೊರಮ ಸಮುದಾಯವನ್ನು ಸೇರ್ಪಡೆ ಆದೇಶ ಮಾಡಿ 51 ಅಲೆಮಾರಿ ಜಾತಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿದ್ಧಾರೆ. 2022ರಲ್ಲಿ ಇದೇ ಅಭಿವೃದ್ಧಿ ಕೋಶವು ನಂತರ ನಿಗಮವಾಗಿ ಪರಿವರ್ತನೆ ಮಾಡಲಾಯಿತು ಎಂದರು.
ಪಟ್ಟಿಯಲ್ಲಿರುವ ಹಲವಾರು ಸಮುದಾಯಗಳ ಜನಸಂಖ್ಯೆ 50,000 ಸಾವಿರಕ್ಕಿಂತ ಕಡಿಮೆ ಇವೆ. ಆದರೆ ಕೊರಮ ಸಮುದಾಯ ಮಾತ್ರ 2011ರ ಜನಗಣತಿಯ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿದೆ. ಕೊರಚ ಮತ್ತು ಕೊರಮ ಸಮುದಾಯ ಈ ಪಟ್ಟಿಗೆ ಸೇರ್ಪಡೆಯಾದ ನಂತರ ಈ ಎಲ್ಲಾ ಸಮುದಾಯಗಳ ಜನಸಂಖ್ಯೆ ಸುಮಾರು 6 ಲಕ್ಷದಷ್ಟಿದೆ. ಆದರೆ ಕೆಲವು ಸಮುದಾಯದವರು 1 ವರ್ಷದಿಂದ 49 ಜಾತಿಗಳು ಮಾತ್ರ ನೈಜ ಅಲೆಮಾರಿಗಳು, ಕೊರಚ ಮತು ಕೊರಮ ಸಮುದಾಯಗಳನ್ನು ಹೊರತು ಪಡಿಸಿ ಸಂಘಟನೆ ಮಾಡಿಕೊಂಡು ರಾಜ್ಯಾದ್ಯಂತ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆದರ್ಶ್ ಯಲ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದೆ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅತಿ ಸಣ್ಣ ಸಮುದಾಯಗಳಿಗೆ ಆದ್ಯತೆ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಮುಂದಿನ ದಿನಗಳಲ್ಲಿ ಪರಿಶಿಷ್ಟಜಾತಿಯ ಸಮಸ್ತ ಅಲೆಮಾರಿ ಅಧಿಕೃತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಿ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕೃಷ್ಣಪ್ಪ, ಸಿದ್ದೇಶ್ ಮಾದಪುರ, ಲೇಶಪ್ಪ, ಸಂತೋಷ್ ಸಿ. ಸುರೇಶ್ ಎನ್, ಕುಂಸಿ ಶ್ರೀನಿವಾಸ್, ಸಂತೋಷ್ ಕುಮಾರ್ ಎಂ, ಗುಬ್ಬಿ ವಿಕಾಸ್, ಶಿವಮೂರ್ತಿ.ವಿ ಮತ್ತಿತರರು ಉಪಸ್ಥಿತರಿದ್ದರು.