Saturday, 27th April 2024

ಕೃಷ್ಣಾವತಾರದ ಶುಭ ಗಳಿಗೆ

ಜನ್ಮಾಷ್ಟಮಿ ವಿಶೇಷ ಬರಹ

ಇಂದಿನ ಆಧುನಿಕ ಯುಗದಲ್ಲೂ ಎಲ್ಲರ ಗಮನ ಸೆಳೆಯುತ್ತಿರುವ ಶ್ರೀ ಕೃಷ್ಣ, ಆ ಮಟ್ಟಿಗೆ ಸರ್ವಾಂತರ್ಯಾಮಿ. ಸಾರಥಿಯ ಸ್ಥಾನದಲ್ಲಿ ಕುಳಿತು ಮಹಾಭಾರತ ಯುದ್ಧವನ್ನು ನಡೆಸಿದ ಸವ್ಯಸಾಚಿ, ಸತ್ಯಪಕ್ಷಪಾತಿ. ಅವತಾರ ಪುರುಷ ಕೃಷ್ಣ ಜನಿಸಿದ ದಿನವೇ, ಮಾವ ಕಂಸನ ಕತ್ತಿಯಲುಗಿನ ಹೊಡೆತವನ್ನು ತಪ್ಪಿಸಿಕೊಂಡದ್ದಾದರೂ ಹೇಗೆ?

ಡಾ. ಗಣಪತಿ ಆರ್ ಭಟ್

ಕೊಳಲು, ನವಿಲುಗರಿ, ತುಂಟಲೀಲೆ ಹೀಗೆ ಕೃಷ್ಣನ ವ್ಯಕ್ತಿತ್ವವೇ ಬಹು ಆಕರ್ಷಕ. ಪ್ರತಿವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿಯನ್ನು ಎಡೆ ಆಚರಿಸಲಾಗುತ್ತದೆ. ಅಂದು ಶ್ರೀಮನ್ನಾರಾಯಣನ ದಶಾವತಾರಗಳ ಪೈಕಿ ಪರಿಪೂರ್ಣ ಅವತಾರವೆಂದೇ ಕರೆಯಲ್ಪಡುವ ಕೃಷ್ಣಾ ವತಾರವು ಈ ಭೂಮಿಯ ಮೇಲಾದ ದಿನ. ಭೂಲೋಕದಲ್ಲಿ ದುಷ್ಟರ ಉಪಟಳ ಹೆಚ್ಚಿದಾಗ, ಸಜ್ಜನರಿಗೆ ತೊಂದರೆಯಾದಾಗಲೆಲ್ಲ ಭಗವದವತಾರವಾಗುವುದು ವಾಡಿಕೆ.

ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷಣೆಯೇ ಭಗವದವತರಣದ ಉದ್ದೇಶ. ಕೃಷ್ಣಾವ ತಾರಕ್ಕೂ ಕೂಡ ಅಂಥಹದ್ದೇ ಹಿನ್ನಲೆಯಿತ್ತು. ಕೃಷ್ಣ ಹುಟ್ಟಿzಲ್ಲಿ? ಹುಟ್ಟಿನ ಹಿನ್ನೆಲೆಯೇನು? ಹುಟ್ಟಿದ ಆ ಘಳಿಗೆ ಹೇಗಿತ್ತು? ಇವೆಲ್ಲವನ್ನು ಭಾಗವತ ಪುರಾಣದ ದಶಮ ಸ್ಕಂಧವು ರೋಚಕವಾಗಿ ನಮಗೆ ತಿಳಿಸುತ್ತದೆ.

ಕೊಲೆಗಾರ ಮಾವ
ವಸುದೇವ-ದೇವಕಿಯರ ವಿವಾಹವಾದಾಗ ಕಂಸನು ಪ್ರೀತಿಯಿಂದ ನವ ವಧೂ-ವರರನ್ನು ಮೆರವಣಿಗೆಯಲ್ಲಿ ಕರೆದು ಕೊಂಡು
ಹೋದ. ದೇವಕಿಯ ಎಂಟನೇ ಗರ್ಭದಲ್ಲಿ ಜನಿಸುವ ಶಿಶುವಿನಿಂದಲೇ ಆತನಿಗೆ ಮೃತ್ಯು ಸಂಭವಿಸುವುದೆಂದು ಆಕಾಶ ಭಾಷಿತವಾ
ದಾಗ ಕಂಸನಲ್ಲಿದ್ದ ಸಹೋದರಿಯ ಬಗೆಗಿನ ಪ್ರೇಮವು ಒಮ್ಮೆಲೆ ದ್ವೇಷವಾಗಿ ಮಾರ್ಪಾಡಾಯಿತು. ಅಲ್ಲಿಯೇ ದೇವಕಿ ಯನ್ನು ಕೊಲ್ಲಲು ಮುಂದಾದ ಕಂಸನನ್ನು ವಸುದೇವನು ತಡೆದನು. ಮಗು ವಿನಿಂದ ಮಾತ್ರ ಕಂಟಕವಿರುವುದರಿಂದ, ತಮಗೆ ಜನಿಸುವ ಮಕ್ಕಳನ್ನೆಲ್ಲ ಆತನಿಗೆ ಒಪ್ಪಿಸುವೆವೆಂದು ಭರವಸೆ ಕೊಟ್ಟು ಅವರು ತಮ್ಮ ಅರಮನೆಗೆ ಹಿಂದುರುಗಿದರು.

ಹೀಗೆ ಭಗವಂತನ ಅವತರಣಕ್ಕೆ ಎದುರಾದ ಮೊದಲ ವಿಘ್ನ ನಿವಾರಣೆಯಾದರೂ ಮುಂದೆ ಮತ್ತೆ ನಾರದ ಮುನಿಗಳು ಕಂಸನಿಗೆ ದೇವತೆಗಳ ಹುನ್ನಾರವನ್ನು ತಿಳಿಸಿ ವಸುದೇವ ದೇವಕಿಯರಿಂದ ಅಪಾಯವಿರು ವುದಾಗಿ ಆತನಿಗೆ ತಿಳಿಸಿದರು. ಹಾಗಾಗಿ ಕಂಸನು ವಸುದೇವ- ದೇವಕಿಯರ ಕೈ-ಕಾಲುಗಳಿಗೆ ಸಂಕೋಲೆಗಳನ್ನು ತೊಡಿಸಿ ಸೆರೆಮನೆ ಯಲ್ಲಿರಿಸಿದ. ಮೊದಲ ಆರು ಮಕ್ಕಳನ್ನು ಅತ್ಯಂತ ಹೀನಾಯವಾಗಿ ಕೊಂದು ಹಾಕಿದ ಕಂಸನ ಪಾಪದ ಕೊಡ ತುಂಬುತ್ತಲಿತ್ತು. ಏಳನೇ ಗರ್ಭದಲ್ಲಿ ಆದಿಶೇಷನು ಆವಿರ್ಭವಿಸಿದಾಗ ಭಗವಂತನ ಅಪ್ಪಣೆಯ ಮೇರೆಗೆ ಮಾಯಾದೇವಿಯು ಆ ಶಿಶುವನ್ನು ದೇವಕಿಯ ಗರ್ಭದಿಂದ ಸೆಳೆದು ಕಂಸನಿಗೆ ಗೊತ್ತಾಗದ ಹಾಗೆ ನಂದಗೋಕುಲದಲ್ಲಿದ್ದ ರೋಹಿಣಿಯ ಹೊಟ್ಟೆಯಲ್ಲಿರಿಸಿದಳು. ಹೀಗೆ ಬದುಕುಳಿದವನೇ ಬಲರಾಮ.

ಕೃಷ್ಣಾವತರಣದ ಮೊದಲ ಹೆಜ್ಜೆ
ಭಗವಾನ್ ಶ್ರೀಹರಿಯು ಮೊದಲಿಗೆ ತೇಜೋರೂಪದಲ್ಲಿ ವಾಸುದೇವನ ಹೃದಯದೊಳಕ್ಕೆ ಪ್ರವೇಶಿಸಿ ನಂತರ ದೇವಕಿಯ
ಗರ್ಭವನ್ನು ಪ್ರವೇಶಿಸಿದನು. ಭಗವಂತನೇ ಆಕೆಯ ಗರ್ಭದೊಳ ಪ್ರವೇಶಿಸಿದುದರಿಂದ ಸಹಜವಾಗಿಯೇ ಆಕೆ ಇನ್ನಷ್ಟು
ರೂಪವತಿಯೆನಿಸಿದಳು. ಕಂಸನ ಕಳವಳಕ್ಕೆ ಇದು ಕಾರಣವಾಯಿತು. ವಿಷ್ಣುವಿನ ಮೇಲೆ ಅನುಮಾನ ಪಡುತ್ತಾ, ಆತನನ್ನೆ ಚಿಂತಿಸುತ್ತಾ ಕಂಸನ ಜಗತ್ತೆಲ್ಲ ವಿಷ್ಣುಮಯವಾಯಿತು.

ದೇವಕಿಯ ಗರ್ಭದಲಿ ಶ್ರೀಹರಿಯು ದಿನದಿಂದ ದಿನಕ್ಕೆ ಬೆಳೆಯಲಾರಂಭಿಸಿದ. ಕೃಷ್ಣಾವತರಣದ ಘಳಿಗೆ ಬಂದೇ ಬಿಟ್ಟಿತು.
ಕೃಷ್ಣನ ರೂಪದಲ್ಲಿ ಶ್ರೀಮನ್ನಾರಾಯಣನು ಜಗದೊದ್ಧಾರಕನಾಗಿ ಜನಿಸುವ ಹೊತ್ತಿನಲ್ಲಿ ಗ್ರಹ ನಕ್ಷತ್ರಗಳು ತಮ್ಮಷ್ಟಕ್ಕೆ
ಶುಭಸ್ಥಾನವನ್ನು ಅಲಂಕರಿಸಿದವು. ಸೋದರಮಾವನ ಸಾವನ್ನು ಸಾರುವ ರೋಹಿಣಿ ನಕ್ಷತ್ರವು ಕೃಷ್ಣನ ಜನ್ಮಕಾಲದಲ್ಲಿ
ಸನ್ನಿಹಿತವಾಯಿತು.

ದಿಕ್ಕುಗಳೆಲ್ಲ ಪ್ರಶಾಂತವಾದವು. ಕಾನನದ ಗಿಡ-ಮರಗಳು ಹೂ-ಹಣ್ಣುಗಳಿಂದ ತುಂಬಿದವು. ಪರಿಶುದ್ಧವಾದ ಗಾಳಿಯು
ಸುಗಂಧಭರಿತವಾಗಿ, ಸುಖ ಸ್ಪರ್ಶವಾಗಿ ಬೀಸತೊಡಗಿತು. ಹೋಮಕ್ಕಾಗಿ ಹೊತ್ತಿಸಿಟ್ಟ ಬೆಂಕಿಯು ಮಂದವಾಗಿ ಉರಿಯಲಾ ರಂಭಿಸಿತು. ಕೃಷ್ಣನು ಜನಿಸುವ ಸಮಯಕ್ಕೆ ಸ್ವರ್ಗದಲ್ಲಿ ದುಂದುಭಿಗಳು ಮೊಳಗಿದವು. ಕಿನ್ನರರು, ಗಂಧರ್ವರೂ ಹಾಡಿದರು.

ಕತ್ತಲೆಯು ದಟ್ಟವಾಗಿ ಆವರಿಸಿದ್ದ ಆ ರಾತ್ರಿಯಲ್ಲಿ ಪೂರ್ವದಿಕ್ಕಿನಲ್ಲಿ ಚಂದ್ರ ಉದಯಿಸುವ ಹಾಗೆ ದೇವಸ್ವರೂಪಿಣಿಯಾದ ದೇವಕಿಯಲ್ಲಿ ಕೃಷ್ಣನು ಜನಿಸಿದನು.

ತಂದೆ ವಸುದೇವನು ಆ ಮಗುವನ್ನು ವಿಸ್ಮಯದಿಂದ ನೋಡಿದನು:
ತಮದ್ಭುತಂ ಬಾಲಕಮಂಬುಜೇಕ್ಷಣಂ
ಚತುರ್ಭುಜಂ ಶಂಖಗದಾರ್ಯುದಾಯುಧಮ್|
ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ
ಪೀತಾಂಬರಂ ಸಾಂದ್ರಪಯೋದಸೌಭಗಮ್
||ಭಾ.೧೦.೩.೯||

ಪದ್ಮನೇತ್ರನಾದ ಆ ಬಾಲಕನು ಚತುರ್ಭುಜವನ್ನು ಹೊಂದಿ ಶಂಖ, ಗದೆ, ಚಕ್ರಗಳನ್ನು ಆಯುಧವನ್ನಾಗಿ ಹಿಡಿದು ಕೊಂಡಿ ದ್ದನು. ಎದೆಯಲ್ಲಿ ಶ್ರೀವತ್ಸ ಲಾಂಛನವಿತ್ತು. ಕೊರಳಲ್ಲಿ ಕೌಸ್ತುಭಮಣಿ ಶೋಭಿಸುತ್ತಿತ್ತು. ಸಾಂದ್ರಮೋಡದ ಶ್ಯಾಮಲ ಕಾಂತಿಯು ಮೈಮಾಟದಲ್ಲಿತ್ತು.

ವೈಢೂರ್ಯಗಳಿಂದ ಶೋಭಿತ ಕಿರೀಟ, ಉಡಿದಾರ, ಕೇಯೂರ, ಕಂಕಣ ಇತ್ಯಾದಿಗಳಿಂದ ಸುಶೋಭಿತನಾದ ಆ ಮಗು
ವನ್ನು ಕಂಡು ತಂದೆ ವಸುದೇವನಿಗೆ ಬಹಳ ಆನಂದವಾಯಿತು. ಭಗವಾನ್ ವಿಷ್ಣುವೇ ಅವತರಿಸಿದ್ದೇನೆಂದು ತಿಳಿದು ವಸುದೇವನು ಆ ಬಾಲಕನಿಗೆ ಕೈ ಮುಗಿದು, ಸ್ತುತಿಸಿ, ನರರೂಪದಲ್ಲಿರುವ ರಾಕ್ಷಸರಿಂದಾಗುತ್ತಿರುವ ಅನ್ಯಾಯವನ್ನು ಹೇಳಿಕೊಂಡ.

ತಾಯಿ ದೇವಕಿಗೂ ಆ ಮಗುವಿನ ಮುಖ ನೋಡುತ್ತಲೇ ಕಂಸನ ಬಗ್ಗೆ ಇರುವ ಭಯವನ್ನು ತೋಡಿಕೊಂಡಳು. ಹೀಗೆ ಭಯವಿಹ್ವಲರಾಗಿದ್ದ ತಂದೆ ತಾಯಿಯರನ್ನು ಸಮಾಧಾನಪಡಿಸುತ್ತಾ ಭಗವಂತನು, ಶಿಶುವಿನ ರೂಪ ತಾಳಿ ತಂದೆಯ
ಸಹಾಯವನ್ನು ಪಡೆದು ನಂದಗೋಕುಲಕ್ಕೆ ಹೊರಡಲು ಅಣಿಯಾದನು. ನಂದಗೋಕುಲದಲ್ಲಿ ವಿಷ್ಣುಮಾಯೆಯು ಅದಾಗಲೆ
ಹೆಣ್ಣುಶಿಶುವಿನ ರೂಪದಲ್ಲಿ ನಂದಪತ್ನಿಯಾದ ಯಶೋದೆಯಲ್ಲಿ ಜನಿಸಿದ್ದಳು. ತನ್ನನ್ನು ಅಲ್ಲಿರಿಸಿ, ಅವಳನ್ನು ಮಥುರೆಗೆ
ಕರೆದುಕೊಂಡು ಬರಬೇಕೆಂದು ವಿಜ್ಞಾಪಿಸಿದ.

ಭಗವಂತನ ಕೃಪೆಯಿದ್ದರೆ ಯಾವುದು ಅಸಾಧ್ಯ? ವಸುದೇವ ಆ ಶಿಶುವನ್ನು ಎತ್ತಿಕೊಳ್ಳುತ್ತಿದ್ದಂತೆ ಸೆರೆಮನೆಯ ಬಾಗಿಲುಗಳು ತಾನಾಗಿಯೇ ತೆರೆದುಕೊಂಡವು. ಹೊರಗಡೆಗೆ ಮಳೆ ಸುರಿಯುತ್ತಿತ್ತು. ಆದಿಶೇಷನು ಕೊಡೆಯಂತೆ ಹೆಡೆ ಮಾಡಿ ಶಿಶುವನ್ನು ಮಳೆಯಿಂದ ರಕ್ಷಿಸಿದ. ಯಮುನೆಯು ದಾರಿ ಮಾಡಿಕೊಟ್ಟಿತು. ಸುರಕ್ಷಿತವಾಗಿ ಶಿಶುವನ್ನು ಯಶೋಧೆಯ ಮಡಿಲಲ್ಲಿ ಬಿಟ್ಟು ಅಲ್ಲಿದ್ದ ಹೆಣ್ಣು ಶಿಶುವನ್ನು ವಸುದೇವನು ಮಥುರೆಗೆ ತಂದ. ಹೀಗೆ ದುಷ್ಟರ ಕೈಗೆ ಸಿಗದಂತೆ ತನ್ನನ್ನು ತಾನೇ ಪಾರುಮಾಡಿಕೊಂಡು ಒಂದಿಷ್ಟು ದಿನ ಸುರಕ್ಷಿತವಾಗಿ ಬೆಳೆದು ಕ್ರಮೇಣ ಭೂಮಿಗೊದಗಿದ ಆಪತ್ತನ್ನು ಬಗೆಹರಿಸುವ ಉಪಾಯ ಭಗವಂತನದಾಗಿತ್ತು.

ಕೃಷ್ಣ ಜನಿಸಿದ ಶುಭ ಸಂದರ್ಭವು ಈ ಭೂಮಿಗೆ ಹೊಸ ಹೊಳಪನ್ನು ನೀಡಿದ್ದು ಸುಳ್ಳಲ್ಲ. ಕಂಸನ ದೌರ್ಜನ್ಯದಿಂದ
ಹತಾಶರಾಗಿದ್ದ ವಸುದೇವ ದೇವಕಿಯರ ಮುಖದಲ್ಲಿ ಕೃಷ್ಣನ ಜನನವು ಆಶಾಕಿರಣವನ್ನು ಮೂಡಿಸಿದರೆ ಕಂಸನ ಎದೆಯಲ್ಲಿ
ನಡುಕ ಹುಟ್ಟಿಸಿತ್ತು. ದುಷ್ಟರನ್ನು ಶಿಕ್ಷಿಸಿ ಭೂದೇವಿಯ ಭಾರವನ್ನು ಹಗುರ ಮಾಡುವ, ಶಿಷ್ಟರನ್ನು ರಕ್ಷಿಸುವ ತನ್ನ
ಅವತಾರದ ಉದ್ದೇಶವನ್ನು ಭಗವಂತ ಚಾಚೂತಪ್ಪದೆ ಮಾಡಿ ಮುಗಿಸಿದ.

ಸೆರೆಮನೆಯ ಕತ್ತಲಲ್ಲಿ ಜನಿಸಿದ ಕೃಷ್ಣನು ಲೋಕಕ್ಕೆ ಬೆಳಕು ನೀಡುತ್ತಾನೆ. ಸೆರೆಮನೆಯಲ್ಲಿ ಜನಿಸಿದರೂ ಭಕ್ತರನ್ನು ಭವಬಂಧನದಿಂದ ಪಾರುಮಾಡುತ್ತಾನೆ. ಮಹಾತ್ಮರ ಜನನವು ಎಷ್ಟು ಅರ್ಥಪೂರ್ಣವಾಗಿರುವುದು ಎಂಬುದಕ್ಕೆ ಕೃಷ್ಣನೇ ಉದಾಹರಣೆ.

ಯುದ್ಧಭೂಮಿಯಲ್ಲಿ ಸೃಜಿಸಿದ ಕಾವ್ಯ
ಕೃಷ್ಣನು ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡ ಬಗೆಯೇ ವಿಶಿಷ್ಟ. ತಾನು ಅರ್ಜುನನ ಸಾರಥಿಯಾಗಿ, ಸೂಕ್ತ ಸಲಹೆ
ನೀಡುತ್ತಾ ಮುನ್ನಡೆಸುತ್ತೇನೆ ಹೊರತು ಆಯುಧವನ್ನು ಎತ್ತುವುದಿಲ್ಲ ಎನ್ನುವ ಕೃಷ್ಣ, ಅದಕ್ಕೆ ಬದ್ದನಾಗಿರುತ್ತಾನೆ. ಕೃಷ್ಣನ ಬಳಿ ಸಶಕ್ತ ಚಕ್ರವಿದ್ದರೂ, ಅದನ್ನು ಆತ ಮಹಾಭಾರತ ಯುದ್ಧದಲ್ಲಿ ಪ್ರಯೋಗಿಸದೇ ಇರುವುದು ಕುತೂಹಲಕಾರಿ. ಕೃಷ್ಣನ ಜತೆ ಯುದ್ಧಭೂಮಿಗೆ ಬಂದ ಅರ್ಜುನನಿಗೆ ಒಮ್ಮೆಗೇ ಕಕ್ಕಾಬಿಕ್ಕಿಗಾಗುತ್ತದೆ!

ಏಕೆಂದರೆ ತನ್ನ  ಎದುರು ಆಯುಧಗಳನ್ನು ಹಿಡಿದವರೆಲ್ಲರೂ ಸಮೀಪದ ಬಂಧುಗಳು! ತನಗೆ ರಾಜ್ಯವೂ ಬೇಡ, ಯುದ್ಧವೂ ಬೇಡ ಎಂದು ಅರ್ಜುನನು ಗಾಂಢೀವವನ್ನು ಕೆಳಗಿಡುತ್ತಾನೆ. ಆಗ ಕೃಷ್ಣನು ಅರ್ಜುನನಿಗೆ ಬೋಧಿಸುವ ವಿಚಾರಗಳೇ
ಭಗವದ್ಗೀತೆಯಾಗಿ ರೂಪುಗೊಳ್ಳುತ್ತದೆ. ಯುದ್ಧಭೂಮಿಯಲ್ಲಿ ರೂಪುಗೊಂಡ ಈ ಕಾವ್ಯವು ಭಾರತದಲ್ಲಿ ಇಂದಿಗೂ ಎನಿಸಿದೆ!

ಕೃಷ್ಣಾವತರಣಕ್ಕೆ ಕಾರಣ
ಹಿಂದೆ ದುಷ್ಟ ಸ್ವಭಾವದ ರಾಕ್ಷಸರು ಕ್ಷತ್ರಿಯ ರೂಪದಲ್ಲಿ ಹುಟ್ಟಿ ಭೂಲೋಕಕ್ಕೆ ಕಂಟಕಪ್ರಾಯರಾಗಿದ್ದರು. ಆ ಪಾಪಿಗಳ ಭಾರವನ್ನು ಹೋರಲಾಗದ ಭೂದೇವಿಯು ತನ್ನ ದುಃಖವನ್ನು ಬ್ರಹ್ಮನ ಬಳಿ ತೋಡಿಕೊಂಡಳು. ಬ್ರಹ್ಮನು ಭೂದೇವಿಯ ವಿಷಯದಲ್ಲಿ ಕರುಣಾಮಯಿಯಾದರೂ ಆತನೇ ಖುದ್ದಾಗಿ ಏನನ್ನೂ ಮಾಡುವಂತಿರಲಿಲ್ಲ. ಅಷ್ಟರೊ ಳಗೆ ಈ ವಿಷಯ ತಿಳಿದಿದ್ದ ಮಹಾವಿಷ್ಣುವು ಹೊಸದೊಂದು ಅವತಾರವನೆತ್ತಿ ಭೂಮಿಗೆ ಬರಲು ನಿರ್ಧರಿಸಿಯಾಗಿತ್ತು.

ಆ ಅವತಾರವೇ ಕೃಷ್ಣನದು. ದೇವತೆಗಳೆಲ್ಲ ಅದೇ ವಂಶದಲ್ಲಿ ಮಾನವರೂಪದಲ್ಲಿ ಜನ್ಮತಾಳುವುದು, ಆದಿಶೇಷನು ಭಗವಂತನ ಅಣ್ಣ(ಬಲರಾಮ)ನಾಗಿ, ಋಷಿಗಳು ನಂದಗೋಕುಲದ ಗೋವುಗಳಾಗಿ, ವಿಷ್ಣುವಿನ ಮಾಯೆಯು ಹೆಣ್ಣಾಗಿ ಜನಿಸುವುದು ನಿರ್ಧಾರವಾಯಿತು.

ವಸುದೇವ ದೇವಕಿ
ಯಯಾತಿಯ ಮಗನಾದ ಯದುವಿನಿಂದ ಆರಂಭವಾದ ವಂಶವೇ ಯದುವಂಶ. ಆ ವಂಶದ ವಸುದೇವ ಹಾಗೂ ದೇವಕಿ ದಂಪತಿ ವಿಷ್ಣುವಿನ ಭಕ್ತರಾಗಿದ್ದರು. ಇಬ್ಬರೂ ತಮ್ಮ ಪೂರ್ವಜನ್ಮಗಳಲ್ಲಿ ಒಮ್ಮೆ ಸುತಪ-ಪೃಶ್ನಿ ಎಂಬ ದಂಪತಿ ಯಾಗಿ ವಿಷ್ಣುವಿನ ಅವತಾರವಾದ ಪೃಶ್ನಿಗರ್ಭನಿಗೆ ಜನ್ಮ ನೀಡಿದ್ದರು. ಮತ್ತೊಂದು ಜನ್ಮದಲ್ಲಿ ಕಶ್ಯಪ ಅದಿತಿಯರಾಗಿ ವಾಮನರೂಪಿ ವಿಷ್ಣುವಿಗೆ ಜನ್ಮ ಕೊಟ್ಟಿ ದ್ದರು. ಅದೇ ದಂಪತಿ ವಸುದೇವ-ದೇವಕಿಯರಾಗಿ ಶ್ರೀಕೃಷ್ಣನಿಗೆ ಜನ್ಮ ನೀಡಿದ್ದು ವಿಶೇಷ. ವಸುದೇವನ ಪೂರ್ವ ಜರಿಗೆ ಬಹಳ ಹಿಂದೆಯೇ ರಾಜ್ಯಭಾರ ಕೈ ತಪ್ಪಿ ಹೋಗಿತ್ತು. ದೇವಕಿಯ ತಂದೆ ದೇವುಕ. ಆತನ ಸಹೋದರ ಉಗ್ರಸೇನನು
ಮಥುರಾನಗರಿಯನ್ನು ಆಳುತ್ತಿದ್ದ. ಆತನ ಮಗನೇ ಕಂಸ. ದೇವಕಿಗೆ ಕಂಸನು ಮಲಸಹೋದರನಾಗಬೇಕು. ದಾಯಾದಿಗಳಾದರೂ ಅವರ ನಡುವೆ ಪ್ರೀತಿಯಿತ್ತು.

error: Content is protected !!