ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕಾಂಗ್ರೆಸ್ನ ಹರಿಪ್ರಸಾದ್, ಇಬ್ರಾಹಿಂ ನಡುವೆ ಪೈಪೋಟಿ
ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಸೂಕ್ತ ಸ್ಥಾನಮಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಕ್ಷದ ವಿರುದ್ಧ ಮುನಿಸಿಕೊಂಡು, ಜೆಡಿಎಸ್ನತ್ತ ಮುಖಮಾಡಿರುವ ಸಿ.ಎಂ. ಇಬ್ರಾಹಿಂ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನಮಾನ ನೀಡುವ ಮೂಲಕ, ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಎಸ್.ಆರ್. ಪಾಟೀಲ್ ಅವರು ಜ.೫ಕ್ಕೆ ನಿವೃತ್ತರಾಗಲಿದ್ದಾರೆ. ಡಿ.10ಕ್ಕೆ ಮುಕ್ತಾಯ ಗೊಂಡಿರುವ ವಿಧಾನ ಪರಿಷತ್ ಚುನಾವಣೆ ಯಲ್ಲಿಯೂ ಸ್ಪರ್ಧಿಸಲು ಟಿಕೆಟ್ ನೀಡದೇ ಇರುವುದರಿಂದ, ಪ್ರತಿಪಕ್ಷ ಸ್ಥಾನ ಖಾಲಿಯಾಗ ಲಿದೆ. ಹೀಗಾಗಿ ಇದೀಗ ಈ ಸ್ಥಾನವನ್ನು ಇಬ್ರಾಹಿಂ ಅವರಿಗೆ ನೀಡಿ ಬಂಡಾಯದ ಬೇಗುದಿ ತಣಿಸಲು ತೆರೆಮರೆಯಲ್ಲಿ ಸಿದ್ಧತೆ ಆರಂಭವಾಗಿದೆ.
ಒಂದು ವೇಳೆ ಪ್ರತಿಪಕ್ಷ ಸ್ಥಾನ ನೀಡದಿದ್ದರೆ, ಇಬ್ರಾಹಿಂ ಅವರು ಜೆಡಿಎಸ್ಗೆ ಹೋಗುವ ಸಾಧ್ಯತೆಯಿದೆ. ಈಗಾಗಲೇ ಈ ಸಂಬಂಧ ಹಲವು ಸುತ್ತಿನ ಮಾತುಗಳು ನಡೆದಿವೆ. ಒಂದು ವೇಳೆ ಅವರು ಜೆಡಿಎಸ್ಗೆ ಹೋದರೆ, ಕಾಂಗ್ರೆಸ್ನ ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಜತೆಗೆ, ಅಲ್ಪಸಂಖ್ಯಾತ ನಾಯಕನಿಗೆ ಸ್ಥಾನಮಾನ ನೀಡಲಿಲ್ಲ ಎನ್ನುವ ಕಪ್ಪು ಚುಕ್ಕೆಯೂ ಬರಲಿದೆ. ಹೀಗಾಗಿ ಅವರಿಗೆ ಪರಿಷತ್ ಪ್ರತಿಪಕ್ಷ ಸ್ಥಾನ ನೀಡಲು ನಾಯಕರು ಒಂದು ಹಂತಕ್ಕೆ ಸಮ್ಮತ್ತಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಈ ಸಂಬಂಧ ಇಬ್ರಾಹಿಂ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಇದೇ ವಿಷಯವಾಗಿ ಭಾನುವಾರ ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದ್ದರಿಂದ ಜ.೫ಕ್ಕೆ ತೆರವಾಗಲಿರುವ ಪರಿಷತ್ ಪ್ರತಿಪಕ್ಷ ಸ್ಥಾನ ಇಬ್ರಾಹಿಂಗೆ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಸಿದ್ದು ಜತೆ ಚರ್ಚೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಸಿ.ಎಂ. ಇಬ್ರಾಹಿಂ ಅವರಿಗೆ ಸ್ಥಾನ ನೀಡುವ ಭರವಸೆಯನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಚರ್ಚೆಯಲ್ಲಿ ತಮ್ಮನ್ನು ಪಕ್ಷ ನಿರ್ಲಕ್ಷ್ಯ ಮಾಡಿದೆ. ಆದ್ದರಿಂದ ಪಕ್ಷವನ್ನು ತೊರೆಯುವ ಮಾತನ್ನು ಇಬ್ರಾಹಿಂ ಆಡಿದ್ದಾರೆ. ಆದರೆ ಪ್ರತಿಪಕ್ಷ ಸ್ಥಾನವನ್ನು ಕೊಡಿಸುವ ಭರವಸೆಯನ್ನು ಸಿದ್ದ ರಾಮಯ್ಯ ಅವರು ನೀಡಿದ್ದಾರೆ ಎನ್ನಲಾಗಿದೆ.
ಸದ್ಯ ಪರಿಷತ್ ಪ್ರತಿಪಕ್ಷ ಸ್ಥಾನದ ರೇಸ್ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿದ್ದಾರೆ. ಅವರೊಂದಿಗೆ ದಲಿತ ಕೋಟಾದಲ್ಲಿ ಆರ್.ಬಿ. ತಿಮ್ಮಾಪುರ ಅವರಿದ್ದಾರೆ. ಆದರೆ ಪಕ್ಷದ ವರಿಷ್ಠರು ಹರಿಪ್ರಸಾದ್ ಅವರ ಮೇಲೆ ಈ ಮೊದಲಿನ ವಿಶ್ವಾಸ ಹಾಗೂ ಆತ್ಮೀಯತೆ ಹೊಂದಿಲ್ಲ. ಆದ್ದರಿಂದ ಈ ಸ್ಥಾನ ಇಬ್ರಾಹಿಂ ಅವರಿಗೆ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಇಬ್ರಾಹಿಂ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಅನಿವಾರ್ಯ
ಈಗಾಗಲೇ ಕಾಂಗ್ರೆಸ್ನಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಸಿ.ಎಂ ಇಬ್ರಾಹಿಂ ಅವರೊಂದಿಗೆ ಅಲ್ಪಸಂಖ್ಯಾತ ಮತಗಳು ಇವೆ. ಒಂದು ವೇಳೆ ಅವರು ಕಾಂಗ್ರೆಸ್ನಿಂದ ಜೆಡಿಎಸ್ಗೆ ಹಾರಿದರೆ, ಆ ಮತಗಳು ಅವರೊಂದಿಗೆ ಹೋಗುವ ಸಾಧ್ಯತೆಗಳಿವೆ. ಅದಕ್ಕಾಗಿ ಕಾಂಗ್ರೆಸ್ನಲ್ಲಿಯೇ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಅದಕ್ಕಾಗಿ ಇದೀಗ ಪ್ರತಿ ಪಕ್ಷ ನಾಯಕ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇಬ್ರಾಹಿಂ ಏಕೆ ಸೂಕ್ತ?
ಅಲ್ಪಸಂಖ್ಯಾತರ ನಾಯಕನೊಬ್ಬ ಜೆಡಿಎಸ್ಗೆ ಹೋಗುವುದನ್ನು ತಡೆಯಬಹುದು.
ಪರಿಷತ್ನಲ್ಲಿ ಮಾತಿನ ಮೂಲಕವೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾತುಗಾರಿಕೆ
ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡಲಾಗಿದೆ ಎನ್ನುವ ಹೆಚ್ಚುಗಾರಿಗೆ ಸರಕಾರಕ್ಕೆ
ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡಿದ್ದೇವೆ ಎಂದು ಅಲ್ಪಸಂಖ್ಯಾತರ ವೋಟ್ ಕೇಳುವುದು ಸುಲಭ
ಇಬ್ರಾಹಿಂ ಮಾತಿನ ಕಲೆಯಿಂದ, ಪಕ್ಷದ ರ್ಯಾಲಿಗಳಲ್ಲಿ ಸಹಾಯ.