Sunday, 19th May 2024

ಪಂಚ ರಾಜ್ಯಗಳ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ: ಯು.ಪಿಗೆ ಶೋಭಾ ಕರಂದ್ಲಾಜೆ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಉಸ್ತುವಾರಿಗಳ ಹೆಸರನ್ನು ಬಿಜೆಪಿ, ಬುಧವಾರ ಪ್ರಕಟಿಸಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್ ಸೇರಿದಂತೆ 8 ಕೇಂದ್ರ ಸಚಿವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡ ಲಾಗಿದೆ. ಪ್ರಧಾನ್, ಮುಖ್ಯ ಉಸ್ತುವಾರಿಯಾಗಿದ್ದು, ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಸರೋಜ್ ಪಾಂಡೆ, ಶೋಭಾ ಕರಂದ್ಲಾಜೆ, ಕ್ಯಾಪ್ಟನ್ ಅಭಿಮನ್ಯು, ಅನ್ನಪೂರ್ಣ ದೇವಿ ಮತ್ತು ವಿವೇಕ್ ಠಾಕೂರ್ ಅವರಿಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.

ಪಂಜಾಬ್ ಜವಾಬ್ದಾರಿಯನ್ನು ಕ್ಯಾಬಿನೆಟ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ನೀಡ ಲಾಗಿದೆ. ಪಂಜಾಬಿನಲ್ಲಿ, ಶೇಖಾವತ್ ಜೊತೆ ಹರ್ದೀಪ್ ಪುರಿ, ಮೀನಾಕ್ಷಿ ಲೇಖಿ, ವಿನೋದ್ ಚಾವ್ಡಾ ಇರಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರಾಖಂಡದ ಮುಖ್ಯ ಉಸ್ತುವಾರಿ ವಹಿಸಲಿದ್ದಾರೆ. ಲಾಕೆಟ್ ಚಟರ್ಜಿ ಮತ್ತು ಸರ್ದಾರ್ ಆರ್ ಪಿ ಸಿಂಗ್ ಅವರು ಸಹ ಪ್ರಭಾರಿ ಪಾತ್ರ ವಹಿಸಲಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೋವಾ ಉಸ್ತುವಾರಿ ವಹಿಸಿಕೊಂಡರೆ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮಣಿಪುರದ ಉಸ್ತುವಾರಿ ಹೊರಲಿದ್ದಾರೆ.

ಚುನಾವಣಾ ಆಯೋಗವು 2022 ರ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!