ಬೆಂಗಳೂರು : ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನಿವಾಸದ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ರಾತ್ರೋ ರಾತ್ರಿ ಬೆಂಕಿ ಇಟ್ಟ ಪ್ರಕರಣದಲ್ಲಿ, ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಇವರನ್ನು ನ್ಯಾಯಾಂಗ ವಶಕ್ಕೂ ನೀಡಲಾಗಿತ್ತು.
ಕಳೆದ ವಾರ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆಯ ಮುಂದೆ ನಿಲ್ಲಿಸಿದ್ದ 2 ಕಾರುಗಳಿಗೆ ದುಷ್ಕರ್ಮಿಗಳು ರಾತ್ರಿ ವೇಳೆ ಬೆಂಕಿ ಹಚ್ಚಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವೂ ಆರೋಪಿಗಳ ಪತ್ತೆಗಾಗಿ ಸೂಚಿಸಿತ್ತು.
ಮೂರು ಠಾಣೆಗಳ ಪೊಲೀಸರು ಸಿಸಿಟಿವಿ ವೀಡಿಯೋ ದೃಶ್ಯಾವಳಿ ಆಧರಿಸಿ ಸಾಗರ್ ತಾಪ, ಶ್ರೀಧರ್ ಮತ್ತು ನವೀನ್ ಎಂಬುವರನ್ನು ಬಂಧಿಸಿದ್ದರು.
ಮೂವರು ಆರೋಪಿಗಳನ್ನು ನ್ಯಾಯಪೀಠವು, ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ನ್ಯಾಯಪೀಠಕ್ಕೆ ಮಾಡಿದ ಮನವಿಯನ್ನು ಪುರಸ್ಕರಿಸಿ, ಸಾಗರ್ ತಾಪ, ಶ್ರೀಧರ್ ಹಾಗೂ ನವೀನ್ ಅವರನ್ನು 14 ದಿನ ಪೊಲೀಸ್ ವಶಕ್ಕೆ ನೀಡಿದೆ.