ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ನನಗೆ ಬಿಗ್ಬಾಸ್ ಸೀಸನ್ 6ಕ್ಕೆ ಆಹ್ವಾನ ಕೊಟ್ಟಿದ್ದರೂ ಹೋಗಲು ಆಗಿರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸೋಮವಾರ ಹೇಳಿದ್ದಾರೆ.
ಈಗ ಕೆಲವು ಸ್ನೇಹಿತರು ಹೋಗ್ತೀರಾ ಎಂದು ಹೇಳುತ್ತಿದ್ದಾರೆ. ನನಗೂ ಹೋಗಲು ಆಸೆ ಇತ್ತು. ನನಗೆ ಒಂದು ವೇದಿಕೆ ಸಿಕ್ಕಿದಂತಾ ಗುತ್ತದೆ ಎಂದು ಯೋಚನೆ ಮಾಡಿದ್ದೆ. ಚುನಾವಣೆಗಳು ಬಂದಿವೆ, ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ವಿಶೇಷ ಆಹ್ವಾನಿತರಾಗಿ ಬನ್ನಿ ಎಂದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು ಎಂದರು.
ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು-ಮಕ್ಕಳು, ಹೆಣ್ಣು-ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಿಸಬಹುದು. ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ಬಾಸ್ ಮನೆಗೆ ಹೋಗುತ್ತೇನೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಸ್ಫರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೆಹಲಿ ವರಿಷ್ಠರು, ರಾಜ್ಯದ ವರಿಷ್ಠರು ಮತ್ತು ಸಿಎಂ ಗಮನಕ್ಕೆ ತಂದಿದ್ದೇನೆ. ಸುಪ್ರೀಂಕೋರ್ಟ್ ಶಾಪ ವಿಮೋಚನೆ ಆಗಬೇಕಾದರೆ ನಾನು ಚುನಾವಣೆ ಮೂಲಕವೇ ಬರಬೇಕು. ಧರ್ಮೇಗೌಡರಿಂದ ಖಾಲಿಯಾದ ಸ್ಥಾನದ ಮೂಲಕ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಬಂದರೆ ಶಾಪ ವಿಮೋಚನೆ ಆಗುತ್ತದೆ ಎಂದಿದ್ದಾರೆ.