ಬೆಂಗಳೂರು: ಗಣೇಶ ಚತುರ್ಥಿ ಆರಂಭದ ಮೂರು ದಿನಗಳ ಮುಂಚಿತವಾಗಿ ಸೆ.೭ರಿಂದ ಸುಮಾರು 17,200ಕ್ಕೂ ಅಧಿಕ ಬಿಬಿಎಂಪಿ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 18,500ಕ್ಕೂ ಅಧಿಕ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 1,300 ಮಂದಿ ಮಾತ್ರ ಖಾಯಂ ಹೊಂದಿದ ಪೌರ ಕಾರ್ಮಿಕರಿದ್ದಾರೆ. ಉಳಿದ 17,200ಕ್ಕೂ ಅಧಿಕ ಪೌರ ಕಾರ್ಮಿಕರು 8 ವಲಯಗಳಲ್ಲಿ ನೇರ ವೇತನ ಪಾವತಿ ಅಡಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.
ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ತೀರ್ಮಾನಿಸಿದ್ದಾರೆ. ನಗರದ ಹತ್ತಾರು ಮಾರುಕಟ್ಟೆಗಳು, ಹೋಟೆಲ್-ರೆಸ್ಟೋ ರೆಂಟ್ಗಲು ಹಾಗೂ 25 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಕಸ ಹಾಗೆಯೇ ಉಳಿಯಲಿದೆ. ನಗರದಲ್ಲಿ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಗಿಂತ ಪೌರ ಕಾರ್ಮಿಕರು ಪ್ರಮುಖವಾಗಿದ್ದಾರೆ. ಕಾಯಂ ನೇಮಕಾತಿ, ಆರೋಗ್ಯ ಕಾರ್ಡ್ ಸೌಲಭ್ಯ ಮತ್ತು ಗುಣಮಟ್ಟದ ಸಮವಸ ವಿತರಣೆ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದರೂ ಕಿವಿಗೊಡುತ್ತಿಲ್ಲ.
ಹೀಗಾಗಿ ನಾಳೆ ಆರ್.ಸುಬ್ಬಣ್ಣ ವೃತ್ತ ಮತ್ತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ತಲಾ 300 ಮಂದಿ ಮುಷ್ಕರ ಆರಂಭಿಸಲಿದ್ದೇವೆ. ಉಳಿದ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡದೆ ವಾಡ್ರ್ಗಳಲ್ಲಿ ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲಿದ್ದಾರೆ ಎಂದು ಬೆಂಗಳೂರು ನಗರ ನೇರಪಾವತಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್. ಮುತ್ಯಾಲ ತಿಳಿಸಿದ್ದಾರೆ.
ಪೌರ ಕಾರ್ಮಿಕರ ಬೇಡಿಕೆಗಳು ಹೀಗಿದೆ.
* ನೇರ ವೇತನ ಪೌರ ಕಾರ್ಮಿಕರನ್ನು ಹಂತ- ಹಂತವಾಗಿ ಕಾಯಂ ನೇಮಕ.
* ಆರೋಗ್ಯ ಸುರಕ್ಷತೆಗಾಗಿ ಹೆಲ್ತ್ಕಾರ್ಡ್ ಸೌಲಭ್ಯ.
* 60 ವರ್ಷ ಮೇಲ್ಪಟ್ಟು ನಿವೃತ್ತಿ ಹೊಂದಿದವರಿಗೆ ಪಿಂಚಣಿ.
* ಪ್ರಸ್ತುತ ನೀಡಿರುವ ಬಟ್ಟೆಗಳು ಕಳಪೆಯಾಗಿದ್ದು, ಕನಿಷ್ಠ 4 ಜೊತೆ ಖಾಕಿ ಸಮವಸ್ತ್ರ ಕೊಡಿ.
* ವಾರದಲ್ಲಿ ಒಂದು ದಿನ ಬಣ್ಣದ ಬಟ್ಟೆ ಧರಿಸಲು ಅವಕಾಶ.
* ಇಎಸ್ಐ ಮತ್ತು ಪಿಎಫ್ ಪಾವತಿಗೆ ಸಮರ್ಪಕ ವ್ಯವಸ್ಥೆ.
* ಮಾಸಿಕ 2 ಜೊತೆ ಸುರಕ್ಷತಾ ಸಾಮಗ್ರಿ ವಿತರಣೆ.