ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ಬುಧವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಎರಡೂ ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ನಾಲ್ವರು ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿ ಪರಾರಿಯಾಗಿ ದ್ದಾರೆ.
ಘಟನೆ ಬಗ್ಗೆ ಸತೀಶ್ ರೆಡ್ಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಭದ್ರತಾ ಸಿಬ್ಬಂದಿ ಮನೆ ಎದುರಿನ ಪ್ರವೇಶ ದ್ವಾರದ ಬಳಿ ಇದ್ದರು. ಆದರೆ, ಹಿಂದಿನ ದ್ವಾರದಿಂದ ಬಂದಿರುವ ಕಿಡಿಗೇಡಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇದ್ದು, ಆರೋಪಿಗಳ ಮುಖ ಸ್ಪಷ್ಟವಾಗಿ ಸೆರೆಯಾಗಿಲ್ಲ’ ಎಂದು ಡಿಸಿಪಿ ಜೋಷಿ ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಹೊಂಗಸಂದ್ರದ ಮನೆಗೆ ಭೇಟಿ ನೀಡಿ, ಪರಿಶೀಲಿಸಿ, ಮಾಹಿತಿ ಪಡೆದಿದ್ದಾರೆ. ಈಗಾಗಲೇ ಪೊಲೀಸ್ ತನಿಖೆ ಕೂಡ ಚುರುಕುಗೊಂಡಿದೆ. ಬೊಮ್ಮನಹಳ್ಳಿ, ಸುದ್ದಗುಂಟೆ ಪಾಳ್ಯ, ತಿಲಕ್ ನಗರ ಮೂರು ಠಾಣೆಗಳ ಇನ್ಸ್ ಪೆಕ್ಟರ್ ಗಳು ತನಿಖೆ ನಡೆಸುತ್ತಿದ್ದಾರೆ.