ಉಡುಪಿ: ರಂಗಕರ್ಮಿ, ಲೇಖಕ, ಉಪನ್ಯಾಸಕರಾಗಿದ್ದ ಉದ್ಯಾವರ ಮಾಧವ ಆಚಾರ್ಯ (80) ಸೋಮವಾರ ಮಣಿಪಾಲ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.
1941ರ ಫೆ 25ರಂದು ಜನಿಸಿದ ಮಾಧವ ಆಚಾರ್ಯ ಅವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದರು. ಉಡುಪಿಯ ಕಲ್ಯಾಣಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಮಾಧವ ಆಚಾರ್ಯ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ 3 ದಶಕಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
‘ಬಾಗಿದ ಮರ’, ‘ಭಾಗದೊಡ್ಡಮ್ಮನ ಕಥೆ’ ಮುಂತಾದ ಕಥಾ ಸಂಕಲನಗಳು, ‘ರಂಗಸ್ಥಳದ ಕನವರಿಕೆಗಳು’ ಮುಂತಾದ ಕವನ ಸಂಕಲನಗಳು, ‘ಕೃಷ್ಣನ ಸೋಲು’, ‘ಗೋಡೆ’, ‘ಗಾಂಧಾರಿ’, ‘ರಾಧೆ ಎಂಬ ಗಾಥೆ’ ಮುಂತಾದ ನಾಟಕಗಳನ್ನು ಉದ್ಯಾವರ ಮಾಧವ ಆಚಾರ್ಯರು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದರು.
ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ರಂಗವಿಶಾರದ ಬಿರುದು ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಉದ್ಯಾವರ ಮಾಧವ ಆಚಾರ್ಯ ಪಾತ್ರರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.