ಕೊಪ್ಪಳ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಸಿಎಂ ವಿರುದ್ದ ಹೇಳಿಕೆ ಕೊಟ್ಟಿದ್ದು ತಪ್ಪು, ಅದು ಅಶಿಸ್ತು ಆಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಶಾಸಕ ಯತ್ನಾಳ ಅವರು ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದಿನ ಮೂರು ವರ್ಷಗಳ ನಂತರ ಮತ್ತೆ ಚುನಾವಣೆ ಆಗುತ್ತೆ. ಹೈಕಮಾಂಡ್ ಸಿಎಂ ಯಾರು ಎಂದು ನಿರ್ಧಾರ ಮಾಡಲಿದೆ ಎಂದರು.
ಯತ್ನಾಳ ಅವರು ಒಬ್ಬ ಶಾಸಕರಾಗಿ, ಸಿಎಂ ವಿರುದ್ದ ಹಾಗೂ ವರಿಷ್ಠರ ವಿರುದ್ದ ಮಾತನಾಡುವುದು ಸರಿಯಲ್ಲ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಸಿಎಂ ಸ್ಥಾನ ಎನ್ನುವ ಮಾತಿಲ್ಲ. ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಯತ್ನಾಳ ಭಾಷಣ ಮಾಡಿ ದ್ದಾರೆ, ಅಂತ ನಾನು ಮಾತನಾಡಲು ಆಗಲ್ಲ. ಅದು ಅಶಿಸ್ತು ಆಗುತ್ತೆ. ಸಿಎಂ ವಿರುದ್ದ ಹೇಳಿಕೆ ಕೊಡುವುದು ತಪ್ಪಾಗುತ್ತದೆ ಎಂದರು.
ಇನ್ನು ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ವಿರುದ್ದ ಸಿಎಂಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಂದಕರು ಇರಬೇಕು ಹಂದಿಯಂಗೆ ಎನ್ನುವ ಮಾತಿನಂತೆ ಕೃಷಿ ಇಲಾಖೆಯಲ್ಲಿ ನನ್ನ ವಿರುದ್ದ ದೂರು ನೀಡಿದ ಬಗ್ಗೆ ಕೇಳಿ ಬಂದಿದೆ. ಕೃಷಿ ಇಲಾಖೆಯು ಜಿಡ್ಡು ಹಿಡಿದು ಹೋಗಿತ್ತು.ನಾನು ಅದನ್ನು ಸರಿಪಡಿಸಿದ್ದೇನೆ. ಇದು ಕೆಲವರಿಗೆ ಹಿಡಿಸಿದಂತೆ ಕಾಣಿಸಿಲ್ಲ ಹಾಗಾಗಿ ಅನಾಮಧೇಯ ಪತ್ರ ಬರೆದು ಹೆದರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇಂತಹದ್ದಕ್ಕೆ ನಾನು ಹೆದರಲ್ಲ. ನಾನು ಹಾಗೂ ಸರ್ಕಾರ ದಕ್ಷತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಒಂದು ವೇಳೆ ನನ್ನ ಮೇಲೆ ಆಪಾದನೆ ಮಾಡುವವರು ಬಂದು ಹೇಳಲಿ. ಅದು ತನಿಖೆಯಾಗಲಿ. ಅದು ಸುಳ್ಳು ಎಂದಾದರೆ, ಅಂತಹ ವಿಷಯದ ಬಗ್ಗೆ ಸುಳ್ಳು ಪ್ರಚಾರ ಮಾಡಿದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆನು ಎಂದರು.