MLC Rajendra: ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸಂಚು; ಸುಪಾರಿ ಕುರಿತ ಸ್ಫೋಟಕ ಆಡಿಯೊ ವೈರಲ್!
MLC Rajendra: ರಾಜೇಂದ್ರ ಹತ್ಯೆಗೆ ಸುಪಾರಿ ಬಗ್ಗೆ ವೈರಲ್ ಆಗಿರುವ ಆಡಿಯೊದಲ್ಲಿ ಮಹಿಳೆ ಮಾತನಾಡಿದ್ದಾಳೆ. ಡಿಸೆಂಬರ್ನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಈ ಆಡಿಯೊದಲ್ಲಿದೆ. ಈ ಆಡಿಯೊದಿಂದಲೇ ಕೊಲೆ ಸುಪಾರಿಯ ವಿಚಾರ ರಾಜೇಂದ್ರಗೆ ತಿಳಿದಿತ್ತು.


ತುಮಕೂರು: ಸಚಿವ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ (MLC Rajendra) ಹತ್ಯೆಗೆ ಸಂಚು ರೂಪಿಸಿದ ಸಂಬಂಧ ಇತ್ತೀಚೆಗೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅಲ್ಲದೇ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಆಡಿಯೊ ವೈರಲ್ ಆಗಿದ್ದು, ಈ ಆಡಿಯೊದಿಂದ ಕೊಲೆ ಸುಪಾರಿ ಸಂಚು ಬಯಲಾಗಿದೆ. ಈ ಆಡಿಯೊದಿಂದಲೇ ಕೊಲೆ ಸುಪಾರಿಯ ವಿಚಾರ ರಾಜೇಂದ್ರಗೆ ತಿಳಿದಿತ್ತು. ಹೀಗಾಗಿ ಆಡಿಯೊ ಇದ್ದ ಪೆನ್ಡ್ರೈವ್ ಸಮೇತ ಅವರು ದೂರು ನೀಡಿದ್ದರು.
ರಾಜೇಂದ್ರ ಹತ್ಯೆಗೆ ಸುಪಾರಿ ಬಗ್ಗೆ ವೈರಲ್ ಆಗಿರುವ ಆಡಿಯೊದಲ್ಲಿ ಮಹಿಳೆ ಮಾತನಾಡಿದ್ದಾಳೆ. ಡಿಸೆಂಬರ್ನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಈ ಆಡಿಯೊದಲ್ಲಿದೆ. ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್ ಬಗ್ಗೆ ಮಹಿಳೆ ಪುಷ್ಪ ವಿವರಿಸಿದ್ದಾಳೆ. ರಾಜೇಂದ್ರರನ್ನು ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪರಿಚಯಸ್ಥಳಾಗಿದ್ದ ಪುಷ್ಪಾಳಿಗೆ ಆರೋಪಿ ಜೈಪುರ ಸೋಮ ಹೇಳಿಕೊಂಡಿದ್ದ. ಆ ಬಳಿಕ ಸುಪಾರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹಿಳೆ ಕಲೆಹಾಕಿದ್ದಳು.
ಸೋಮನ ಜತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದ ಪುಷ್ಪ, ಬಳಿಕ ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರರಿಗೆ ತಿಳಿಸಲು ಪ್ಲ್ಯಾನ್ ಮಾಡಿದ್ದಳು. ರಾಜೇಂದ್ರಗೆ ವಿಚಾರ ಮುಟ್ಟಿಸಲು ರಾಕಿ ಎನ್ನುವ ಹುಡುಗನನ್ನು ಮಹಿಳೆ ಬಳಸಿಕೊಂಡಿದ್ದಳು. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನು ಮೊಬೈಲ್ನಲ್ಲಿ ರಾಕಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರಗೆ ಈ ಆಡಿಯೊ ತಲುಪಿತ್ತು. ಆಡಿಯೋ ಕೇಳಿ ಶಾಕ್ ಆಗಿದ್ದ ರಾಜೇಂದ್ರ, ತನ್ನ ಹತ್ಯೆಗೆ ಸಂಚು ನಡೆದಿದೆ ಎಂದು ದೂರು ದಾಖಲಿಸಿದ್ದರು.
ಇದೀಗ ಇದೇ ಆಡಿಯೋ ಬೆನ್ನತ್ತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಡಿಯೋದಲ್ಲಿ ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಹೆಸರು ಉಲ್ಲೇಖವಾಗಿದೆ. ಐವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುಷ್ಪ ಬಳಿ ಎಲ್ಲಾ ಮಾಹಿತಿ ಪಡೆದುಕೊಂಡಿದ್ದ ರಾಕಿ
ರಾಜೇಂದ್ರ ಮಗಳ ಬರ್ತ್ಡೇ ಡೆಕೋರೇಷನ್ಗೆ ಹೋಗಿದ್ದ ಜೈಪುರದ ಇಬ್ಬರು ಹುಡುಗರನ್ನು ಆರೋಪಿ ಸೋಮ ಕಳುಹಿಸಿದ್ದ ವಿಚಾರ ಆಡಿಯೊದಲ್ಲಿ ತಿಳಿದುಬಂದಿದೆ. ನವೆಂಬರ್ನಲ್ಲಿ ರಾಜೇಂದ್ರ ಹಿರಿಯ ಮಗಳ ಹುಟ್ಟುಹಬ್ಬ ನಡೆದಿತ್ತು. ಸೋಮನಿಗೆ 5 ಲಕ್ಷ ಹಣ ಬಂದಿರುವುದು ಸತ್ಯ ಎಂದು ಪುಷ್ಪ ಹೇಳಿದ್ದಾಳೆ.
ಪೊಲೀಸರು ಕರೆದುಕೊಂಡು ಹೋಗಿ ತನಿಖೆ ಮಾಡಿದರೆ ಎಲ್ಲಾ ಗೊತ್ತಾಗುತ್ತದೆ. ರಾಜೆಂದ್ರ ಅವರ ಮುಂದೆ ನಾನೇ ಹೇಳುವೆ. ನನ್ನ ಕರೆದುಕೊಂಡು ಹೋಗು ಎಂದು ರಾಕಿ ಬಳಿ ಪುಷ್ಪ ಹೇಳಿದ್ದಾಳೆ. ಇನ್ನು ಜೈಪುರದ ಮತ್ತೊಬ್ಬ ರೌಡಿಶೀಟರ್ ಪ್ರಸ್ಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿಕೆ ನೀಡಿದ್ದಾನೆ. ಇದರ ಬಗ್ಗೆ ಪ್ರಸ್ಸಿ ಅಣ್ಣನ ಬಳಿಯೂ ನಾನೆ ಹೋಗಿ ಎಲ್ಲವನ್ನೂ ಹೇಳ್ತೀನಿ ಎಂದು ಆಡಿಯೊದಲ್ಲಿ ಪುಷ್ಪ ಹೇಳಿದ್ದಾಳೆ/
ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನು ಸೋಮ ಕರೆಸಿಕೊಳ್ಳುತ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನು ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಯಾನ್ ಮಾಡಿದ್ದಾನೆ. ಅವನ್ನು ಕರೆಸಿ ನೆಟ್ವರ್ಕ್ ಇಲ್ದೇ ಇರೋ ಜಾಗದಲ್ಲಿ ಇಡೋಕೆ ಮನೆ ಮಾಡ್ತಿದ್ದಾನೆ ಎಂದು ಆಡಿಯೋದಲ್ಲಿ ಪುಷ್ಪ ಮಾಹಿತಿ ನೀಡಿದ್ದಾಳೆ.
ಇನ್ನು ಮಿನಿಸ್ಟ್ರು ಮಕ್ಕಳನ್ನು ಹೀಗೆ ಮಾಡೋದು ಅಷ್ಟು ಸುಲಭವಲ್ಲ ಎಂದಿರುವ ಪುಷ್ಪ, ದೊಡ್ಡವರಿಗೆ ಹೊಡೆದುಬಿಟ್ಟು ತುಮಕೂರಿಗೆ ಡಾನ್ ಆಗಿಬಿಡನಾ ಅಂತಾನಾ ಸೋಮ ಪ್ಲ್ಯಾನ್ ಮಾಡಿದ್ದಾನೆ. ಅವರು ಶಿರಾ ಗೇಟ್ನ ಒಂದು ತೋಟದಲ್ಲಿ ಜಾಸ್ತಿ ಇರ್ತಾರೆ ಎಂದು ಪುಷ್ಪ ಹೇಳಿರುವುದು ಆಡಿಯೊದಲ್ಲಿದೆ.
ಈ ಸುದ್ದಿಯನ್ನೂ ಓದಿ | MLC Rajendra Rajanna: ಕೊಲೆ ಯತ್ನ; ಪೆನ್ಡ್ರೈವ್ ಸಮೇತ ದೂರು ನೀಡಿದ ರಾಜೇಂದ್ರ, ತನಿಖೆಗೆ ತಂಡ ರಚನೆ
ಪುಷ್ಪಾ ಸೇರಿ ಮೂವರ ಬಂಧನ
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಕೊಲೆಗೆ ಸಂಚು ನಡೆದಿದೆ ಎಂಬ ಬಗ್ಗೆ ಆಡಿಯೊದಲ್ಲಿ ಮಾತನಾಡಿದ್ದ ಪುಷ್ಪಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಂದ್ರ ಸುಪಾರಿ ಆಡಿಯೊ ಲೀಕ್ ಆಗುತ್ತಿದ್ದಂತೆ, ಪುಷ್ಪಾಳನ್ನು ಕ್ಯಾತಸಂದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಡಿಯೋದಲ್ಲಿ ಮಾತನಾಡಿದ ಪುಷ್ಪಾ ಟೀ ಅಂಗಡಿ ನಡೆಸುತಿದ್ದಳು. ರಾಜಕೀಯ ವ್ಯಕ್ತಿಯ ನಗ್ನ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದ ಪುಷ್ಪಾ ಜೈಲು ವಾಸ ಅನುಭವಿಸಿ ಹೊರಕ್ಕೆ ಬಂದಿದ್ದಳು. ಜತೆಗೆ ರೌಡಿಗಳ ಸಂಪರ್ಕದಲ್ಲಿ ಇರುವ ಬಗ್ಗೆ ಈ ಆಡಿಯೋದಲ್ಲಿ ಬಹಿರಂಗ ಆಗಿತ್ತು. ಹೀಗಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ರಾಜೇಂದ್ರಗೆ ಕೊಲೆ ಸುಪಾರಿ ಪ್ರಕರಣದಲ್ಲಿ ಒಟ್ಟು ಐವರ ವಿರುದ್ಧ ಎಫ್ಐ ಆರ್ ದಾಖಲಿಸಲಾಗಿತ್ತು. ಎ1 ಆರೋಪಿಯಾಗಿರುವ ಸೋಮ ಹಾಗೂ ಗುಂಡಾನನ್ನು ಪೊಲೀಸರು ನೆನ್ನೆ ರಾತ್ರಿ ನೆಲಮಂಗಲದ ಬಳಿ ಅರೆಸ್ಟ್ ಮಾಡಿದ್ದರು. ಸೋಮ ರೌಡಿ ಶೀಟರ್ ಪಟ್ಟಿಯಲ್ಲಿದ್ದಾನೆ. ಇನ್ನುಳಿದ ಆರೋಪಿಗಳಾದ ಭರತ್, ಯತೀಶ್ ಹಾಗೂ ಅಮಿತ್ ಮೂವರು ನಾಪತ್ತೆಯಾಗಿದ್ದಾರೆ.