Prabowo Subianto : ನನ್ನೊಳಗೆ ಭಾರತದ ಡಿಎನ್ಎ ಇದೆ ಎಂದ ಇಂಡೋನೇಷ್ಯಾದ ಅಧ್ಯಕ್ಷ ; ರಾಷ್ಟ್ರಪತಿ ಭವನದಲ್ಲಿ ನಡೀತು ಫುಲ್ ಕಾಮಿಡಿ
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೋ ಅವರು ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ಅವರು ತಮಾಷೆಯಾಗಿ ಮಾತನಾಡುವ ಮೂಲಕ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ.

Prabowo Subianto

ನವದೆಹಲಿ : ಈ ಬಾರಿಯ ಗಣರಾಜ್ಯೋತ್ಸಕ್ಕೆ (Republic Day) ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೋ (Prabowo Subianto) ಅವರು ಆಗಮಿಸಿ ನಿನ್ನೆ ಕರ್ತವ್ಯ ಪಥದಲ್ಲಿ ನಡೆದ ಪರೇಡ್ನಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿ ಭವನದಲ್ಲಿ ಶನಿವಾರ ಸಂಜೆ ಗೌರವಾರ್ಥವಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ಸುಬಿಯಾಂಟೋ ಭಾಗವಹಿಸಿದ್ದು, ಭಾರತದೊಂದಿಗಿನ ಬಾಂಧವ್ಯದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಡಿಎನ್ಎ ಪರೀಕ್ಷೆಯಲ್ಲಿ ತಮ್ಮ ಪೂರ್ವಜರು ಭಾರತೀಯರು ಎಂಬುದು ಗೊತ್ತಾಗಿದೆ. ಹಾಗಾಗಿ ತಮ್ಮೊಳಗೂ ಭಾರತದ ಡಿಎನ್ಎ ಇದೆ ಇದೆ ಎಂದು ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ, ನಾನು ನನ್ನ ಜೆನೆಟಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಯನ್ನು ಮಾಡಿದ್ದೇನೆ, ಅದು ನನ್ನ ಡಿಎನ್ಎ ಭಾರತೀಯ ಎಂದು ತಿಳಿದುಬಂದಿದೆ. ನಾನು ಭಾರತೀಯ ಸಂಗೀತವನ್ನು ಕೇಳಿದಾಗ ನಾನು ನೃತ್ಯ ಮಾಡಲು ಪ್ರಾರಂಭಿಸುತ್ತೇನೆ ಎಂದರು. ಅಧ್ಯಕ್ಷ ಸುಬಿಯಾಂತೋ ಅವರ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಸೇರಿದಂತೆ ಅತಿಥಿಗಳು ನಗಲು ಪ್ರಾರಂಭಿಸಿದರು. ಭಾರತದ 76ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದೆಹಲಿಗೆ ಬಂದಿದ್ದ ಸುಬಿಯಾಂತೋ, ಉಭಯ ದೇಶಗಳ ನಡುವಿನ ನಿರಂತರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯದ ಕುರಿತು ಮಾತನಾಡಿದರು.
#WATCH | Delhi | "...A few weeks ago I had my genetic sequencing test and my DNA test and they told me that I have Indian DNA. Everybody knows when I hear Indian music, I start dancing...", says Indonesian president Prabowo Subianto at the banquet hosted by President Droupadi… pic.twitter.com/N7f0EpLamZ
— ANI (@ANI) January 26, 2025
ಮಾತನ್ನು ಮುಂದುವರಿಸಿದ ಅವರು ಭಾರತ ಹಾಗೂ ಇಂಡೋನೇಷ್ಯಾ ಅನಾದಿ ಕಾಲದಿಂದಲೂ ಬಾಂಧವ್ಯ ಹೊಂದಿದೆ. ನಮ್ಮ ಭಾಷೆಯ ಪ್ರಮುಖ ಭಾಗವು ಸಂಸ್ಕೃತದಿಂದ ಬಂದಿದೆ. ಇಂಡೋನೇಷ್ಯಾದ ಅನೇಕ ಹೆಸರುಗಳು ವಾಸ್ತವವಾಗಿ ಸಂಸ್ಕೃತ ಹೆಸರುಗಳಾಗಿವೆ.ನಮ್ಮ ದೈನಂದಿನ ಜೀವನದಲ್ಲಿ, ಪ್ರಾಚೀನ ಭಾರತೀಯ ನಾಗರಿಕತೆಯ ಪ್ರಭಾವವು ತುಂಬಾ ಪ್ರಬಲವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Republic Day: ಭಾರತದ ಗಣರಾಜ್ಯೋತ್ಸವ, ಸಂವಿಧಾನದ ಬಗ್ಗೆ ಗೊತ್ತಿರದ ವಿಚಾರಗಳು ಇಲ್ಲಿವೆ
ಸುಬಿಯಾಂಟೋ ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ನಾನು ವೃತ್ತಿಪರ ರಾಜಕಾರಣಿಯೂ ಅಲ್ಲ, ಉತ್ತಮ ರಾಜತಾಂತ್ರಿಕನೂ ಅಲ್ಲ, ನನ್ನ ಮನದಾಳದಲ್ಲಿರುವುದನ್ನು ಹೇಳುತ್ತೇನೆ. ನಾನು ಇಲ್ಲಿಗೆ ಬಂದು ಕೆಲವು ದಿನಗಳಾಗಿವೆ, ಆದರೆ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಬದ್ಧತೆಯಿಂದ ಬಹಳಷ್ಟು ಕಲಿತಿದ್ದೇನೆ ಎಂದರು. ಪ್ರಧಾನಿ ಮೋದಿಯವರ ನಾಯಕತ್ವ, ಬಡತನ ನಿರ್ಮೂಲನೆಗೆ ನಿಮ್ಮ ಬದ್ಧತೆ, ಅಂಚಿನಲ್ಲಿರುವ ಜನರು ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು ನಮಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.