ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Pralhad Joshi: ʼಸೂರ್ಯ ಘರ್ʼ ಯೋಜನೆ ಮಾತ್ರವಲ್ಲ; ರಾಷ್ಟ್ರೀಯ ಆಂದೋಲನ: ಪ್ರಲ್ಹಾದ್‌ ಜೋಶಿ

ಹಣಕಾಸು ಸಂಸ್ಥೆಗಳು ಸಾಲ ನೀಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಬೇಕು, ಅನಗತ್ಯ ಅನುಸರಣೆ ಹೊರೆಗಳನ್ನು ಕಡಿಮೆ ಮಾಡಬೇಕು ಮತ್ತು ಶುದ್ಧ ಇಂಧನ ಯೋಜನೆಗಳಿಗೆ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಬೆಂಬಲ ನೀಡುವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಕರೆ ನೀಡಿದ್ದಾರೆ.

ʼಸೂರ್ಯ ಘರ್ʼ ಯೋಜನೆ ಮಾತ್ರವಲ್ಲ; ರಾಷ್ಟ್ರೀಯ ಆಂದೋಲನ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Feb 25, 2025 11:14 PM

ನವದೆಹಲಿ: ಪ್ರಧಾನಮಂತ್ರಿ ಸೂರ್ಯ ಘರ್ ಕೇವಲ ಒಂದು ಯೋಜನೆಯಲ್ಲ. ಅದೊಂದು ಆಂದೋಲನ. ನವೀಕರಿಸಬಹುದಾದ ಇಂಧನ ಹಣಕಾಸು ಕ್ಷೇತ್ರದಲ್ಲಿ ಇದು ರಾಷ್ಟ್ರೀಯ ಆಂದೋಲನವಾಗಬೇಕು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕರೆ ನೀಡಿದರು. ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮುಂಬೈನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ವಲಯಕ್ಕೆ ಸುಲಭವಾಗಿ ಹಣ ಲಭ್ಯವಾಗುವಂತೆ ಹಣಕಾಸು ಸಂಸ್ಥೆಗಳು ಮತ್ತು ನೀತಿ ನಿರೂಪಕರಿಂದ ಸಾಮೂಹಿಕ ಪ್ರಯತ್ನ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಹಣಕಾಸು ಸಂಸ್ಥೆಗಳು ಸಾಲ ನೀಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಬೇಕು, ಅನಗತ್ಯ ಅನುಸರಣೆ ಹೊರೆಗಳನ್ನು ಕಡಿಮೆ ಮಾಡಬೇಕು ಮತ್ತು ಶುದ್ಧ ಇಂಧನ ಯೋಜನೆಗಳಿಗೆ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಬೆಂಬಲ ನೀಡುವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತ 2030ರ ವೇಳೆಗೆ ನವೀಕರಿಸಬಹುದಾದ ಇಂಧನ 500 GW ಗುರಿ ಸಾಧನೆಗೆ ಅಗತ್ಯ ಹಣಕಾಸು ಕ್ರೋಢೀಕರಣ ಮುಖ್ಯವಾಗಿದೆ. ವಿಶೇಷವಾಗಿ ಮೇಲ್ಛಾವಣಿ ಸೌರ ಯೋಜನೆಗಳಿಗೆ ಹಣಕಾಸು ಪ್ರಕ್ರಿಯೆಗಳನ್ನು ಸರಳಗೊಳಿಸುವಂತೆ ಬ್ಯಾಂಕ್‌ಗಳನ್ನು ಒತ್ತಾಯಿಸಿದರು ಮತ್ತು ಡಿಸ್ಕಾಮ್‌ಗಳಿಗೆ ನವೀಕರಿಸಬಹುದಾದ ಖರೀದಿ ಬಾಧ್ಯತೆಗಳಂತೆಯೇ ಈ ವಲಯಕ್ಕೆ ಮೀಸಲಾದ ಹಣವನ್ನು ಖಚಿತಪಡಿಸಲು ಪರಿಚಯಿಸಿ ಎಂದು ಕರೆ ನೀಡಿದರು.

ಪಿಎಂ ಸೂರ್ಯ ಘರ್ ಮತ್ತು ಪ್ರಧಾನ ಮಂತ್ರಿ-ಕುಸುಮ್ ನಂತಹ ಪ್ರಮುಖ ಯೋಜನೆಗಳಿಗೆ ವೇಗ ನೀಡಬೇಕಿದೆ ಎಂದ ಸಚಿವರು, PM-KUSUM ಮತ್ತು PM ಸೂರ್ಯ ಘರ್ ರೈತರನ್ನು ʼಉರ್ಜದಾತಾʼ (ಇಂಧನ ಪೂರೈಕೆದಾರರು) ಆಗಲು ಸಬಲಗೊಳಿಸುತ್ತವೆ ಮತ್ತು ಪ್ರಸರಣ ನಷ್ಟವನ್ನು ಕಡಿಮೆ ಮಾಡುತ್ತವೆ ಎಂದು ಹೇಳಿದರು.

ಇಂಧನ ಬೇಡಿಕೆ ದ್ವಿಗುಣ ನಿರೀಕ್ಷೆ

ಭಾರತ ಆರ್ಥಿಕತೆಯಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗುವ ಗುರಿ ಹೊಂದಿರುವುದರಿಂದ ಅದರ ಇಂಧನ ಬೇಡಿಕೆಯೂ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಉಷ್ಣ ಶಕ್ತಿ ಉತ್ಪಾದನೆಗೆ ಸರಿಹೊಂದುವಂತೆ ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿಸಬೇಕು. ಇದು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ವಿದ್ಯುತ್ ಸರಬರಾಜನ್ನು ಖಚಿತಪಡಿಸುತ್ತದೆ ಎಂದರು.

2070ರ ವೇಳೆಗೆ ಇಂಧನದಲ್ಲಿ ಬಲಿಷ್ಠ

2070ರ ವೇಳೆಗೆ ಭಾರತ ಇಂಧನ ವಲಯದಲ್ಲಿ ಬಲಿಷ್ಠಗೊಳ್ಳಬೇಕು. ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದ ನಾವು ಮೊದಲಿಗೆ 2030 ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಆಧಾರಿತ ಸಾಮರ್ಥ್ಯವನ್ನು ತಲುಪುವ ಬದ್ಧತೆ ತೋರಿದ್ದೇವೆ ಎಂದು ಪ್ರತಿಪಾದಿಸಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಈಗಾಗಲೇ ಗಮನಾರ್ಹ ಪ್ರಗತಿ ಸಾಧಿಸಿದ್ದು, ಇದರ ಸಾಮರ್ಥ್ಯ 222 GWಗೆ ಏರಿಕೆಯಾಗಿದೆ. ಆದಾಗ್ಯೂ ದೊಡ್ಡ ಪ್ರಮಾಣದಲ್ಲಿ ನಿಯೋಜನೆಗಳನ್ನು ಬೆಂಬಲಿಸಬೇಕಿದೆ. ಹಸಿರು ಹೈಡ್ರೋಜನ್(GH2)ನಲ್ಲಿ ಭಾರತದ ನಾಯಕತ್ವವನ್ನು ಪ್ರತಿಪಾದಿಸಿದ ಸಚಿವರು, ದೇಶವು ಈಗಾಗಲೇ ಪ್ರಮುಖ ರಫ್ತು ಆದೇಶಗಳನ್ನು ಪಡೆದಿದೆ ಮತ್ತು ಈ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಮುಂದಿದೆ ಎಂದು ಹೇಳಿದರು.

ಜಾಗತಿಕ ಹೂಡಿಕೆದಾರರು ಭಾರತವನ್ನು ಉತ್ಪಾದನೆ ಮತ್ತು ಶುದ್ಧ ಇಂಧನ ಹೂಡಿಕೆಗಳಿಗೆ ಆದ್ಯತೆಯ ತಾಣವಾಗಿ ನೋಡುತ್ತಿದ್ದಾರೆ. ಯುವ ಕಾರ್ಯಪಡೆ ಮತ್ತು ಬಲವಾದ ಕೈಗಾರಿಕಾ ಸಾಮರ್ಥ್ಯವನ್ನು ಗುರುತಿಸುತ್ತಾರೆ ಎಂದರು.

34.5 ಲಕ್ಷ ಕೋಟಿ ರೂ. ಮೌಲ್ಯದ ಇಂಧನಕ್ಕೆ ಬದ್ಧತೆ

ಗಾಂಧಿನಗರದಲ್ಲಿ ಇತ್ತೀಚೆಗೆ ನಡೆದ ಜಾಗತಿಕ ನವೀಕರಿಸಬಹುದಾದ ಇಂಧನ ಶೃಂಗಸಭೆಯಲ್ಲಿ ₹ 34.5 ಲಕ್ಷ ಕೋಟಿ ಮೌಲ್ಯದ ಇಂಧನ ಬದ್ಧತೆಗಳನ್ನು ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆ ಐಚ್ಛಿಕವಲ್ಲ-ಅದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

5,000 ಕೋಟಿ ರೂ. ನಿಧಿ ಸಂಗ್ರಹಕ್ಕೆ ಅನುಮೋದನೆ

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ಷೇರುದಾರರು ಒಂದು ಅಥವಾ ಬಹು ಕಂತುಗಳಲ್ಲಿ ಈಕ್ವಿಟಿ ಷೇರುಗಳ ಅರ್ಹ ಸಂಸ್ಥೆಗಳ ನಿಯೋಜನೆ (QIP) ಮೂಲಕ ₹5,000 ಕೋಟಿ ವರೆಗೆ ಸಂಗ್ರಹಿಸುವ ಕಂಪನಿ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ಐಆರ್‌ಇಡಿಎ (IREDA) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುಮಾರ್ ದಾಸ್ ತಿಳಿಸಿದರು.

ಐಆರ್‌ಇಡಿಎ ಮಂಡಳಿ ಈ ಹಿಂದೆ ಜನವರಿ 23ರಂದು ನಿಧಿ ಸಂಗ್ರಹಣಾ ಯೋಜನೆ ಅನುಮೋದಿಸಿತ್ತು. 2024-25ನೇ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ₹68,960 ಕೋಟಿ ಸಾಲ ಪುಸ್ತಕ, ₹31,087 ಕೋಟಿ ಸಾಲ ಮಂಜೂರಾತಿ ಮತ್ತು ₹17,236 ಕೋಟಿ ವಿತರಣೆ ಮಾಡುವುದರೊಂದಿಗೆ ಐಆರ್‌ಇಡಿಎ ಉತ್ತಮ ಆರ್ಥಿಕ ಕಾರ್ಯಕ್ಷಮತೆ ತೋರಿದೆ ಎಂದರು.

ಈ ಸುದ್ದಿಯನ್ನೂ ಓದಿ | Karnataka Weather: ಮುಂದಿನ 3 ದಿನ ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ; ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್‌!

ಐಆರ್‌ಇಡಿಎ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್ ಐಎಫ್‌ಎಸ್‌ಸಿ (IFSC) ಲಿಮಿಟೆಡ್ ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರದಿಂದ (IFSCA) ನೋಂದಣಿ ಪ್ರಮಾಣಪತ್ರ ಪಡೆದಿದೆ ಎಂದು ಅವರು ತಿಳಿಸಿದರು.