ಮಾನವಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಎರಡನೇ ಅಲೆಯು ಅಧಿಕವಾಗುತ್ತಿದ್ದು ವಕೀಲರ ಜೀವನ ಬಹಳ ಸಂಕಷ್ಟದಲ್ಲಿರುವುದನ್ನು ಪರಿಗಣಿಸಿ ರಾಜ್ಯ ವಕೀಲರ ಸಂಘಕ್ಕೆ 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮಾನವಿ ವಕೀಲರ ಸಂಘವು ತಾಲೂಕ ತಹಸೀಲ್ದಾರರು ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ತಾಲೂಕ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆಯು ತೀವ್ರತರವಾಗಿ ಹಬ್ಬುತ್ತಿರುವ ಕಾರಣ ರಾಜ್ಯ ಸರ್ಕಾರವು ಲಾಕ್ಡೌನ್ ಮಾಡಿರುವ ಪರಿಣಾಮದಿಂದ ರಾಜ್ಯದ ಎಲ್ಲಾ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯದೇ ಇರುವದರಿಂದ ನ್ಯಾಯವಾದಿ ಗಳು ಮತ್ತು ಅವರ ಕುಟುಂಬವು ತೀವ್ರ ಸಂಕಷ್ಟಕ್ಕೆ ಈಡಾಗಿರುತ್ತಾರೆ. ಮತ್ತು ರಾಜ್ಯ ಸರ್ಕಾರವು ಈಗಾಗಲೇ ಘೋಷಿಸಿರುವ ವಿಶೇಷ ಪ್ಯಾಕೇಜ್ನಲ್ಲಿ ನ್ಯಾಯವಾದಿಗಳಿಗೆ ಯಾವುದೇ ಪ್ಯಾಕೇಜ್ ಘೋಷಿಸದೇ ಇರುವುದರಿಂದ ಮತ್ತು ವಕೀಲ ಸಮುದಾಯದ 70% ರಷ್ಟು ವಕೀಲರು ತಮ್ಮ ವೃತ್ತಿಯನ್ನೇ ಅವಲಂಬಿಸಿರುವದರಿಂದ ಅವರಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ನ್ಯಾಯವಾದಿಗಳಿಗೆ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು 100 ಕೋಟಿ ಹಣವನ್ನು ವಿಶೇಷ ಪ್ಯಾಕೇಜ್ ರೂಪದಲ್ಲಿ ಘೋಷಣೆ ಮಾಡಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ. ಕಾರ್ಯದರ್ಶಿ ರವಿಕುಮಾರ ಪಾಟೀಲ, ಖಜಾಂಚಿ ಚಂದ್ರಶೇಖರ ಮದ್ಲಾಪೂರ. ಜಂಟಿ ಕಾರ್ಯದರ್ಶಿ ಉರುಕುಂದ ಜಗ್ಲಿ, ಕೆ.ಶರಣಬಸವ ಹರವಿ. ವಿಶ್ವನಾಥ ರಾಯಪ್ಪ. ಯಲ್ಲಪ್ಪ ಮಾನವಿ, ಸೇರಿದಂತೆ ಹಿರಿಯ ಕಿರಿಯ ಮಹಿಳಾ ವಕೀಲರು ಉಪಸ್ಥಿತರಿದ್ದರು.