Sunday, 28th April 2024

ಯಾರೂ ಹಿತವರಲ್ಲ ಈ ಮೂವರಲ್ಲಿ: ಎಚ್.ವಿಶ್ವನಾಥ್‌ (ಸಂದರ್ಶನ)

ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ವಚನ ನೀಡಿ ವಂಚಿಸುವವರೇ…

ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಜ್ವಾಲೆ ವ್ಯಾಪಿಸಿದೆ. ಭಿನ್ನಾಭಿಪ್ರಾಯದ ಒಡಕು ದನಿ ಹುಟ್ಟಿದ್ದು ಎಚ್.ವಿಶ್ವನಾಥ್ ಅವರಿಂದ. ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಹೋರಾಟ, ಸೋಲು-ಗೆಲುವು, ಮುತ್ಸದ್ಧಿತನ ತೋರಿ ಭಲೇ ಎನಿಸಿ ಕೊಂಡ ವಿಶ್ವನಾಥ್ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ತಾವಿರುವ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಂತೆ ನಡೆದುಕೊಂಡರೂ ಅವರು ತಮ್ಮ ಪ್ರತಿಭಟನೆಯ ಮನಸ್ಥಿತಿಯಿಂದ ಭಿನ್ನಮತದ ನಾಯಕನೆನಿಸಿದ್ದಾರೆ. ಆದರೂ ರಾಜಕಾರಣದಲ್ಲಿ ವಿಶ್ವನಾಥ್ ಅವರನ್ನು ಕಡೆಗಣಿಸುವಂತಿಲ್ಲ. ದಿ.ದೇವರಾಜ ಅರಸು ಪ್ರಣಿತ ಶೋಷಿತರ ಪರ ಹೋರಾಟ ವಿಶ್ವನಾಥ್ ಅವರಿಗೆ ಸಂಜೀವಿನಿ. ವಿಧಾನ ಪರಿಷತ್ ಸದಸ್ಯರಾಗಿರುವ ವಿಶ್ವನಾಥ್ ಅವರನ್ನು ಮೈಸೂರಿನ ನಿವಾಸದಲ್ಲಿ ವಿಶ್ವವಾಣಿಗಾಗಿ ಎನ್. ಎಂ. ಪ್ರದ್ಯುಮ್ನ ಮಾತ ನಾಡಿಸಿದ್ದಾರೆ.

ರಾಜಕಾರಣ ಜೀವನ ಹೇಗಿದೆ?
ನನ್ನದು 40 ವರ್ಷಗಳ ಸುದೀರ್ಘ ರಾಜಕಾರಣ. 1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಆದಾಗಿ ನಿಂದಲೂ ಕಾಂಗ್ರೆಸ್
ಪಕ್ಷದಲ್ಲಿ ಇದ್ದೆ. ವೀರಪ್ಪ ಮೋಯ್ಲಿ ಸರಕಾರದಲ್ಲಿ ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ ಮತ್ತು ಅರಣ್ಯ ಇಲಾಖೆ ಮಂತ್ರಿಯಾಗಿದ್ದೆ. ನಂತರ ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ಶಿಕ್ಷಣ ಮತ್ತು ಸಹಕಾರ ಸಚಿವನಾಗಿದ್ದೆ. ಅರಸು, ಹೆಗಡೆ ಅವರ ಕಾಲದ ರಾಜಕಾರ
ಣದಲ್ಲಿ ನೀತಿ, ನಿಯಮ, ಕೊಟ್ಟ ಮಾತಿಗೆ ಬದ್ಧತೆ, ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ ಇತ್ತು. ಪ್ರಸ್ತುತ ರಾಜಕಾರಣದಲ್ಲಿ ಅದೆಲ್ಲಾ ಕಣ್ಮರೆಯಾಗಿದೆ. ನಾಡಿನ ಜನತೆಗೆ ಹೊಸ ಹೊಸ ಕಾರ್ಯಕ್ರಮ ನೀಡುವ ಮೂಲಕ ವಿಧಾನಸಭೆಯಲ್ಲಿ ನನ್ನ ಹೆಜ್ಜೆ ಗುರುತು ಊರಿದ್ದೇನೆ.

ನಿಮ್ಮನ್ನು ಎಲ್ಲ ಪಕ್ಷಗಳೂ ಕಡೆಗಣಿಸುತ್ತಿವೆಯೇ ?
ನಾನು ಜನರ ಮನುಷ್ಯ. ನಾವು ಪ್ರಜಾಪ್ರಭುತ್ವದ ದೇಶದಲ್ಲಿ ಬಾಳುತ್ತಿದ್ದೇವೆ ಎಂಬುದನ್ನೇ ಜನರು ಮರೆತಿದ್ದಾರೆ. ಜನರ
ಕಷ್ಟ-ಸುಖಗಳಿಗೆ ಸ್ಪಂದಿಸುತ್ತ ಅವರೊಟ್ಟಿಗೆ ಕೆಲಸ ಮಾಡುವವನು. ಯಾವುದೇ ಸ್ಥಾನಮಾನಗಳಿಗೆ ಕಾಯುವುದಿಲ್ಲ. ರಾಜಕಾರಣದ ಬಗ್ಗೆ ಜನರಿಗೆ ಹೆಚ್ಚು-ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡುತ್ತೇನೆ. ನಾನು ನೇರವಾಗಿ ಮಾತುನಾಡುವ ಕಾರಣಕ್ಕೆ ಕೆಲವು ರಾಜಕೀಯ ಪಕ್ಷಗಳು ನನ್ನನ್ನು ಕಡೆಗಣಿಸಿರಬಹುದು. ಆದರೆ, ಅದರ ಬಗ್ಗೆೆ ನಾನು ತಲೆ ಕಡೆಸಿಕೊಂಡವನಲ್ಲ. ನನ್ನ ಸಿದ್ಧಾಂತಗಳ ಜತೆಗೆ ರಾಜಿ ಮಾಡಿಕೊಳ್ಳುವುದಿಲ್ಲ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಬಗ್ಗೆೆ ಅಭಿಪ್ರಾಯ ?
ಎಲ್ಲ ಒಂದೇ. ನಾನು ಯಾವುದೇ ಪಕ್ಷದಲ್ಲಿ, ಆ ಪಕ್ಷ ನನ್ನ ತಾಯಿ ಇದ್ದಂತೆ. ಎಲ್ಲ ಪಕ್ಷಗಳ ಕಾರ್ಯಕ್ರಮಗಳು ಮತ್ತು ಸಿದ್ಧಾಂತಗಳು ಚೆನ್ನಾಗಿವೆ. ಆದರೆ ಪಕ್ಷವನ್ನು ಮುನ್ನಡೆಸುವ ನಾಯಕರಿಂದಲೇ ಪಕ್ಷ ಹಾಳಾಗುತ್ತಿದೆ. ಸಮ್ಮಿಶ್ರ ಸರಕಾರದಿಂದ ನನ್ನನ್ನೂ ಸೇರಿ 17 ಜನ ಶಾಸಕರು ರಾಜೀನಾಮೆ ನೀಡಿ ಹೊರ ಬಂದಿದ್ದೇ ಈ ಕಾರಣಕ್ಕೆ. ನಮ್ಮ ಶಾಸಕಾಂಗ ಪಕ್ಷದ ನಾಯಕರ ದುರಹಂಕಾರ ನಡುವಳಿಕೆಗಳಿಂದ. ಅದನ್ನು ಧಿಕ್ಕರಿಸಿ ಹೊರಬಂದ್ದೇವೆ. ಅದು ಪಕ್ಷಾಂತರ ವಲ್ಲ ಅದೊಂದು ಧಂಗೆ.

ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಬಗ್ಗೆೆ ಅಭಿಪ್ರಾಯ ?
ಎಲ್ಲರೂ ಒಂದೇ. ಎಲ್ಲರೂ ಭಾಷಣ ಶೂರರು. ಜನರಿಗೆ ವಚನ ನೀಡಿ ವಂಚಿಸುವವರು. ಒಳ್ಳೆ ಕೆಲಸಗಳೂ ಆಗಿವೆ, ಆದರೆ ಎಷ್ಟರಮಟ್ಟಿಗೆ? 20 ರಿಂದ 30% ಅಷ್ಟೆೆ. ನಿರೀಕ್ಷೆ ಮಟ್ಟ ತಲುಪಲಿಲ್ಲ. ಕೇವಲ ಮಾತಿನಲ್ಲೇ ಮುಗಿಸಿದ್ದಾರೆ. ಜನರ ನಿರೀಕ್ಷೆೆಯಂತೆ ಕೆಲಸ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಅವರಲ್ಲಿ ಕೆಲಸ ಮಾಡಬೇಕು ಎಂಬ ಹುಮ್ಮಸ್ಸಿದ್ದರೂ ಅನೇಕ ಒತ್ತಡಗಳಿಗೆ ಒಳಗಾಗಿ ಜನರಿಗೆ ಬೇಕಾದ ಕೆಲಸ ಮಾಡುತ್ತಿಲ್ಲ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಬಹುದು ಎಂಬುದನ್ನು ಎಲ್ಲರೂ
ಮರೆಯುತ್ತಿದ್ದಾರೆ.

ಕುರುಬ ಸಮಾಜ ಎಸ್‌ಟಿ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಅವರ ನಿಲುವೇನು ?
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಮತ್ತು ಇಡೀ ಸಮಾಜ ಅದನ್ನು ಬೆಂಬಲಿಸಿದೆ. ಅದನ್ನು ದಿಕ್ಕು ತಪ್ಪಿಸುವ ಕೆಲಸ
ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಾನಿಲ್ಲದೇ ಏನೂ ಆಗಬಾರದು ಎಂಬ ಉದ್ದೇಶ ಅವರದ್ದು. ನೀವೇ ಮುಂದೆ ನಿಂತು ಮಾಡಿ ಬನ್ನಿ ಎಂದರೂ ಬರುತ್ತಿಲ್ಲ. ಕುಲದ ಸ್ವಾಮಿಗಳು ನಮ್ಮ ದೇವರಿದ್ದ ಹಾಗೆ. ಅವರಿಗೆ ನೀವು ಆರ್‌ಎಸ್‌ಎಸ್ ಬಳಿ ದುಡ್ಡು
ಪಡೆದು ಚಳವಳಿ ಮಾಡುತ್ತಿದ್ದೀರಿ ಎಂದರೆ ಇಡೀ ಸಮುದಾಯಕ್ಕೆ ಅವಮಾನ ಮಾಡಿದಂತೆ. ಕುರುಬ ಸಮಾಜವನ್ನು
ಒಡೆಯುವ ಕೆಲಸ ಆರ್‌ಎಸ್‌ಎಸ್ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರೇ ಮಾಡುತ್ತಿದ್ದಾರೆ.

ಸಚಿವ ಸ್ಥಾನದ ಕುರಿತು ಅಸಮಾಧಾನವಿದ್ದ ಬಗ್ಗೆ ಹೇಳುವುದಾದರೆ? 
ರಾಜಕೀಯದಲ್ಲಿ ಅಧಿಕಾರ, ಸ್ಥಾನ ಮಾನಗಳಿಗಾಗಿ ಅಸಮಾಧಾನ ಸಹಜ. ಮುನಿರತ್ನ ಸೇರಿ 17 ಜನರಲ್ಲಿ ಯಾರಿಗೂ ಸಚಿವ ಸ್ಥಾನ ನೀಡದೆ ಮೆಗಾ ಸಿಟಿನಲ್ಲಿ 9 ಸಾವಿರ ಕೋಟಿ ರು. ವಂಚನೆ ಮಾಡಿದ ಯೋಗೇಶ್ವರ್‌ಗೆ ಸ್ಥಾನ ನೀಡಿದರೆ ಅದು ನಮಗೆ ಮಾಡಿದ ವಂಚನೆ. ಆತನಿಗೆ ಮೈಸೂರು ಉಸ್ತುವಾರಿ ನೀಡಿದರೆ ಇಲ್ಲೊಂದು ಮೆಗಾ ಸಿಟಿ ಹಗರಣ ಮಾಡಿ ಜನರಿಗೆ ಟೋಪಿ ಹಾಕುತ್ತಾನೆ.

ಸಮ್ಮಿಶ್ರ ಸರಕಾರದ ನಿಮ್ಮ ಅನುಭವ ಮತ್ತು ಬಿಟ್ಟು ಹೊರ ನಡೆಯಲು ಕಾರಣ?
ಎರಡು ಬದ್ಧ ವೈರಿ ಪಕ್ಷಗಳು ಅಧಿಕಾರಕ್ಕಾಗಿ ಒಂದಾಗಿ ಸಮ್ಮಿಶ್ರ ಸರಕಾರ ರಚಿಸಿದ್ದರು. ಯಾರೂ ನಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ರಾಜ್ಯ ಮತ್ತು ಪಕ್ಷಕ್ಕೆ ಅವರಿಂದ ಯಾವುದೇ ಒಳ್ಳೆಯ ಕೆಲಸವಾಗಲಿಲ್ಲ. ಆದ್ದರಿಂದ ಅದನ್ನು ಧಿಕ್ಕರಿಸಿ ಹೊರಬರಲು ನಿರ್ಧರಿಸಿದೆವು. ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ. ರಾಜೀನಾಮೆ ನೀಡಿದಾಗಲೇ ನಾನು
ಹೇಳಿದ್ದೆ, ಇದೊಂದು ರಾಕ್ಷಸ ರಾಜಕಾರಣ ಮತ್ತು ವಂಶ ಪರಂಪರೆಯ ರಾಜಕಾರಣವೆಂದು.

ವಂಶಪಾರಂಪರಿಕ ರಾಜಕಾರಣದ ಬಗ್ಗೆ ? 
ಅಕ್ಟೋಬರ್‌ರಲ್ಲಿ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಬಿಐ ಅಧಿಕಾರಿಗಳನ್ನು ಉದ್ದೇಶಿಸಿ ಮಾಡಿದ
ಭಾಷಣದಲ್ಲಿ ‘ವಂಶಪಾರಂಪರಿಕ ಆಡಳಿತ ಜನತಂತ್ರ ವ್ಯವಸ್ಥೆಗೆ ಮಾರಕ. ಅದು ಕೇವಲ ಅಧಿಕಾರದ ಹಸ್ತಾಂತರವಲ್ಲ,
ಭ್ರಷ್ಟಾಚಾರದ ಹಸ್ತಾಂತರ’ ಎಂದು ಹೇಳಿದ್ದಾರೆ. ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಯಡಿಯೂರಪ್ಪ ಅವರ ಮಗನಿಗೆ ಕೊನೆ ಗಳಿಗೆಯಲ್ಲಿ ವರುಣಾ ಕ್ಷೇತ್ರದ ಟಿಕೆಟ್ ನೀಡಲು ನಿರಾಕರಿಸಲಾಯಿತು. ಅನಂತಕುಮಾರ್ ಪತ್ನಿಗೂ ಟಿಕೆಟ್ ನಿರಾಕರಿಸಲಾಯಿತು. ಈ ನಿಟ್ಟಿನಲ್ಲಿ ಮೋದಿ ಅವರು ವಂಶಪಾರಂಪರಿಕ ರಾಜಕಾರಣ ತಡೆಯುವ ಒಳ್ಳೆಯ ಪ್ರಯೋಗ ಪ್ರಾರಂಭಿಸಿದ್ದಾರೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮತ್ತು ಗುಂಡೂರಾವ್ ಅವರು ಜಿವಂತವಾಗಿರುವ ತನಕ ಅವರ ಮನೆಯವರಿಗೆ ಇದನ್ನು ಬಿಟ್ಟುಕೊಟ್ಟಿರಲಿಲ್ಲ

Leave a Reply

Your email address will not be published. Required fields are marked *

error: Content is protected !!