ತಿಪಟೂರು : ನಗರದ ಆಸ್ಪತ್ರೆಗಳಿಂದ ಕರೋನ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಮತ್ತು ಹಾಸನ ಜಿಲ್ಲೆಗೆ ಕರೆದೊಯ್ಯಲು ಅನುಕೂಲವಾಗಲು ತಿಪಟೂರು ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಆಕ್ಸಿಜನ್ ಪೂರೈಕೆ ಒಳಗೊಂಡ ಸುಸಜ್ಜಿತ ಆ್ಯಂಬುಲೆನ್ಸ್ ವಾಹನವನ್ನು ಬುಧವಾರ ಸಮರ್ಪಿಸಲಾಗುವುದು ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ತಾಲ್ಲೂಕಿನ ಕರೋನ ಪೀಡಿತರ ಅನುಕೂಲಕ್ಕಾಗಿ ಹಲವಾರು ಯೋಜನೆ ಗಳನ್ನು ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿಯೇ ಕಾರ್ಯಕರ್ತರ ಎರಡು ಮೂರು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಕರೋನದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರನ್ನು ಅವರ ಮಣೆಗಳಿಗೆ ಬಿಟ್ಟುಬರುವ ಕಾರ್ಯ ಮಾಡಲಿದೆ. ಇನ್ನೊಂದು ತಂಡ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸೋಕಿತರಿಗೆ ಹತ್ತಿರದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ನೆರವಾಗುತ್ತದೆ. ಇನ್ನೊಂದು ತಂಡ ಕರೋನದಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ಕಾರ್ಯಕ್ರಮಗಳಿಗೆ ನೆರವಾಗುತ್ತದೆ. ಇದೆಲ್ಲವೂ ಉಚಿತವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕು ಕಾಂಗ್ರೆಸ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಎಂದು ತಿಳಿಸಿದರು.
ಇದಲ್ಲದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಹಾಗೂ ನರ್ಸ್ಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ವಿತರಣೆ, ನಗರದ ಪೋಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪೋಲೀಸರಿಗೆ ಹಾಗು ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ಕರೋನ ವಾರಿರ್ಸ್ಗಳಿಗೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ನಾಳೆಯಿಂದ ವಿತರಿಸಲಾಗುವುದು ಎಂದು ತಿಳಿಸಿದರು.
ಬಾಕ್ಸ್ ೧ : ಕರೋನ ೨ನೇ ಅಲೆ ಬರುವುದಾಗಿ ತಜ್ಷರು ಎಚ್ಚರಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳದೆ ಸಾಂಕ್ರಮಿಕವಾಗಿ ಹಬ್ಬಲು ಕಾರಣರಾದರು. ಪ್ರಧಾನಿಯವರು ಕೆಲವು ಸಭೆಗಳನ್ನು ನಡೆಸಿ ರಾಜ್ಯಗಳಿಗೆ ನಿರ್ದೇಶನ ನೀಡಿರುವುದು ಬಿಟ್ಟರೆ ಔಷದ ವಿತರಣೆ ಹಾಗೂ ಆಹಾರ ನೀಡಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ವ್ಯಾಕ್ಸಿನ್ಗಳನ್ನು ದೇಶದ ಜನರಿಗೆ ಕಾದಿರಿಸದೆ ಬೇರೆ ದೇಶಗಳಿಗೆ ರಪ್ತು ಮಾಡಿದರು ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆಪಾದಿಸಿದರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎನ್.ಎಂ.ಕಾAತರಾಜು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎನ್.ಸುರೇಶ್, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ನಗರಸಭಾ ಸದಸ್ಯ ಯೋಗೀಶ್ ಇತರರು ಉಪಸ್ಥಿತರಿದ್ದರು.