ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಪಕ್ಷಗಳಿಗೆ ತಮ್ಮದೇ ಆದ ಒತ್ತಡಗಳಿರುತ್ತವೆ. ಅದರಲ್ಲಿಯೂ ಸರ್ವ ಜನಾಂಗ ವನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕಾದ ಅನಿರ್ವಾಯತೆ ಸರಕಾರಗಳಿವೆ ಇರುತ್ತದೆ.
ಆದರೆ ಈ ಎಲ್ಲ ಒತ್ತಡಗಳನ್ನು ಎದುರಿಸಿಕೊಂಡು ಸರಕಾರ ನಡೆಸುವವರು ನಿರ್ಧಾರಗಳನ್ನು ತಗೆದುಕೊಳ್ಳಬೇಕಾದ ಜವಾಬ್ದಾರಿ ಇರುತ್ತದೆ. ಇತ್ತೀಚಿಗೆ ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗುತ್ತಿದ್ದಂತೆ, ಅನೇಕರು ವಿರೋಧಿಸಿದರು. ಇದರೊಂದಿಗೆ ಲಿಂಗಾಯತರ ಅಭಿವೃದ್ಧಿ ಮಂಡಳಿಯೂ ಸ್ಥಾಪನೆಯಾಗಬೇಕು ಎನ್ನುವ ಕೂಗು ಕೇಳಿಬಂತು. ಈ ಕೂಗು ಹಲವು ದಶಕದ ಆಗ್ರಹವಾಗಿತ್ತು ಎನ್ನುವುದನ್ನು ಒಪ್ಪಿಕೊಳ್ಳಬೇಕು.
ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿರಿಸಿಕೊಂಡು ಮರಾಠ ಅಭಿವೃದ್ಧಿ ಮಂಡಳಿ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂ ರಪ್ಪ ಅವರು ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪನೆಗೂ ಆದೇಶ ಹೊರಡಿಸಿದ್ದಾರೆ. ಈ ಸಮುದಾಯದ ಅಭಿವೃದ್ಧಿಗೆ ಈ ನಿರ್ಧಾರ ಸಹಕಾರಿಯಾಗಲಿದೆ ಎನ್ನುವ ಮಾತನ್ನು ಒಪ್ಪಿಕೊಳ್ಳಬೇಕು. ಆದರೆ ಗಮನಿಸಬೇಕಾದ ಅಂಶವಿರುವುದು ಅಭಿವೃದ್ಧಿ ಮಂಡಳಿ ಅಥವಾ ಪ್ರಾಧಿಕಾರ ಸ್ಥಾಪನೆಗೆ ಇರುವ ಮಾನದಂಡ ಗಳೇನು ಎನ್ನುವುದು. ಲಿಂಗಾಯತ ಅಭಿವೃದ್ಧಿ ಮಂಡಳಿ ಬೆನ್ನಲ್ಲೇ ಒಕ್ಕಲಿಗರ ಅಭಿವೃದ್ಧಿ ಮಂಡಳಿಗೆ ಒತ್ತಡಗಳು ಹೆಚ್ಚಿದೆ. ಆದರೆ ಈ ರೀತಿ ಜಾತಿ, ಉಪಜಾತಿಗೊಂದು ಅಭಿವೃದ್ಧಿ ಮಂಡಳಿ ಸ್ಥಾಪಿಸುತ್ತಾ ಹೋದರೆ, ಮುಂದೊಂದು ದಿನ ಎಷ್ಟು ಮಂಡಳಿ ಅಥವಾ ಪ್ರಾಧಿಕಾರ ಸ್ಥಾಪಿಸಬೇಕಾಗುತ್ತದೆ ? ಒಂದೆಡೆ ಈ ರೀತಿ ದಿನಕ್ಕೊಂದು ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಸರಕಾರ, ಈಗಾಗಲೇ ಸ್ಥಾಪಿಸುವ ಮಂಡಳಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎನ್ನುವುದನ್ನು ನೋಡಬೇಕಿದೆ.
ಈಗಿರುವ ಅನೇಕ ಮಂಡಳಿಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಅನುದಾನವೆಷ್ಟು ಎನ್ನುವುದನ್ನು ನೋಡಬೇಕಿದೆ. ಅನೇಕ ಮಂಡಳಿಗಳಲ್ಲಿ ಸರಕಾರ ನೀಡುವ ಅನುದಾನ ಸಾಲದೇ, ಅಲ್ಲಿರುವ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಯಲ್ಲಿವೆ. ಮಂಡಳಿ ಅಧ್ಯಕ್ಷರಿಗೆ ನೀಡುವ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕೂ ನಿಗಮ ಮಂಡಳಿಯ ಖಾತೆಯಲ್ಲಿ ಹಣ ವಿಲ್ಲದೇ, ಸ್ವಂತ ಖರ್ಚಿನಲ್ಲಿ ಹಾಕಿಕೊಳ್ಳುವ ಸ್ಥಿತಿಯಲ್ಲಿದೆ. ಅದ್ದರಿಂದ ಕಣ್ಣೊರೆಸುವುದಕ್ಕಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸದೇ, ಸಮುದಾಯಗಳ ಅಭಿವೃದ್ಧಿ ಮಂಡಳಿಗಳು ಕೆಲಸ ಮಾಡುವಂತಾಗಲಿ.