ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

S.Umesh:ʻಅವಳೇ ನನ್ನ ಹೆಂಡತಿʼ ಖ್ಯಾತಿಯ ನಿರ್ದೇಶಕ ಎಸ್‌. ಉಮೇಶ್‌ ವಿಧಿವಶ

ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದ ಉಮೇಶ್‌ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಘಂಟೆಗೆ ಬನಶಂಕರಿ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಸ್ಯಾಂಡಲ್‌ವುಡ್‌ ಹೆಸರಾಂತ ನಿರ್ದೇಶಕ ಇನ್ನಿಲ್ಲ

Profile Rakshita Karkera Feb 21, 2025 11:09 AM

ಬೆಂಗಳೂರು: ಕನ್ನಡ ಸಿನಿಮಾದ ಹೆಸರಾಂತ ನಿರ್ದೇಶಕ ಎಸ್‌. ಉಮೇಶ್‌(S.Umesh) ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದ ಉಮೇಶ್‌ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಘಂಟೆಗೆ ಬನಶಂಕರಿ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅವಳೇ ನನ್ನ ಹೆಂಡತಿ, ತುಂಬಿದ ಮನೆ ಹೀಗೆ ಸಾಕಷ್ಟು ಯಶಸ್ವಿ ಚಿತ್ರಗಳ ನಿರ್ದೇಶಕ ಎಸ್ ಉಮೇಶ್. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ಉಮೇಶ್ ಅವರು ಹಲವು ವರ್ಷಗಳಿಂದ ತೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಅವರು ಆರ್ಥಿಕ ನೆರವು ಕೋರಿ ವಿಡಿಯೊವೊಂದನ್ನು ಮಾಡಿದ್ದರು. ಇದಕ್ಕೆ ಸ್ಪಂದಿಸಿ ಚಿತ್ರರಂಗ ಹಲವರು ಸಹಾಯಕ್ಕೆ ಮುಂದಾಗಿದ್ದರು.

1974ರ ಸಮಯದಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ಎಸ್. ಉಮೇಶ್. ಆರಂಭದಲ್ಲಿ ಸಹಾಯಕ ನಿರ್ದೇಶಕ, ಸಂಕಲನಕಾರ ಹೀಗೆ ಸಿನಿಮಾರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿಕೊಂಡು, 1988ರ ಹೊತ್ತಿಗೆ 'ಅವಳೇ ನನ್ನ ಹೆಂಡ್ತಿ' ಮೂಲಕ ಸ್ವತಂತ್ರ ನಿರ್ದೇಶಕರಾದವರು ಉಮೇಶ್. ಮೊದಲ ಚಿತ್ರವೇ ಬ್ಲಾಕ್ ಬಸ್ಟರ್. ಆನಂತರ ನಿರ್ಮಾಣ/ನಿರ್ದೇಶನದಲ್ಲಿ ಮುಂದುವರಿದ ಅವರು ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಬರು ಬರುತ್ತಾ ಒಂದೊಂದೆ ಸಿನಿಮಾಗಳು ಕೈ ತಪ್ಪುವಂತಾಯ್ತು. ಅದೇ ಸಮಯಕ್ಕೆ ಆರೋಗ್ಯವೂ ಕೈಕೊಟ್ಟಿತ್ತು. ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಡಯಾಲಿಸಿಸ್‌ ಮೊರೆ ಹೋದರು. ಹೀಗಾಗಿ ಅವರು ನೆರವು ಕೋರಿದ್ದರು.

48 ವರ್ಷಗಳ ಕಾಲ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಉಮೇಶ್‌. ಆರಂಭದಲ್ಲಿ ಸಂಕಲನಕಾರ, ಸಹಾಯಕ ನಿರ್ದೇಶಕನಾಗಿದ್ದರು. ನಂತರ 1988ರಲ್ಲಿ ಕಾಶಿನಾಥ್ ನಾಯಕತ್ವದಲ್ಲಿ ಮೊದಲ ಬಾರಿಗೆ 'ಅವಳೇ ನನ್ ಹೆಂಡ್ತಿ' ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಸಿನಿಮಾ ದೊಡ್ಡ ಯಶಸ್ಸು ಕಂಡು, ತೆಲುಗು ತಮಿಳು, ಹಿಂದಿ ಭಾಷೆಗಳಿಗೂ ರಿಮೇಕ್ ಆಯಿತು. ತಮಿಳು ವರ್ಷನ್‌ಗೆ ಅವರೇ ನಿರ್ದೇಶನ ಮಾಡಿದ್ದರು. ಅಂದಹಾಗೆ, 'ಅವಳೇ ನನ್ ಹೆಂಡ್ತಿ' ಚಿತ್ರದ ಹಿಂದಿ ರಿಮೇಕ್‌ನಲ್ಲಿ ಹೀರೋ ಆಗಿ ಆಮೀರ್ ಖಾನ್ ನಟಿಸಿದ್ದರು. 'ಅವಳೇ ನನ್ ಹೆಂಡ್ತಿ' ಚಿತ್ರದ ತಮಿಳು ರಿಮೇಕ್‌ ನಂತರ ಎರಡು ತಮಿಳು ಚಿತ್ರಗಳನ್ನೂ ನಿರ್ದೇಶನ ಮಾಡಿದ್ದರು. ಅಲ್ಲಿ ನನಗೆ ಉತ್ತಮ ಹೆಸರು ಸಿಕ್ಕಿತ್ತು. ಕರ್ನಾಟಕದಲ್ಲೇ ಉಳಿಯುವ ಪ್ರಯತ್ನ ಮಾಡಿ, 1990ರಲ್ಲಿ ಧೀರೇಂದ್ರ ಗೋಪಾಲ್‌, ಶ್ರುತಿ, ವಿನೋದ್ ರಾಜ್ ಇವರನ್ನೆಲ್ಲ ಇಟ್ಟುಕೊಂಡು 'ಬನ್ನಿ ಒಂದ್ಸಲ ನೋಡಿ' ಎಂಬ ಸಿನಿಮಾ ಶುರುಮಾಡಿದ್ದರು. ಅದರ ನಿರ್ಮಾಣವೂ ಅವರದ್ದೇ ಆಗಿತ್ತು. ಆದರೆ ಆ ಸಿನಿಮಾ ಅಷ್ಟು ಹಿಟ್‌ ಆಗಲಿಲ್ಲ. ಅಲ್ಲಿಂದ ಅವರುಆರ್ಥಿಕ ಸಂಕಷ್ಟಕ್ಕೀಡಾದರು.

ಈ ಸುದ್ದಿಯನ್ನೂ ಓದಿ: Landlord Movie: ತಂದೆಯ ʼಲ್ಯಾಂಡ್ ಲಾರ್ಡ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದುನಿಯಾ ವಿಜಯ್‌ ಪುತ್ರಿ ರಿತನ್ಯ

ಕೆಲವು ತಿಂಗಳ ಹಿಂದೆ ಆರ್ಥಿಕ ನೆರವು ಕೋರಿ ಉಮೇಶ್‌ ವಿಡಿಯೊ ಮಾಡಿ ಹರಿಬಿಟ್ಟಿದ್ದರು. 'ನಾನು 24 ಸಿನಿಮಾಗಳನ್ನು ಮಾಡಿದ್ದೆ. ಅದರಲ್ಲಿ ಮೂರನ್ನು ನಾನೇ ನಿರ್ಮಾಣ ಮಾಡಿದ್ದೆ. ಆ ಮೂರು ಸಿನಿಮಾಗಳಿಂದ ನನಗೆ ಯಾವುದೇ ಲಾಭವಾಗಲಿಲ್ಲ. ಕಷ್ಟನೋ ಸುಖನೋ ಜೀವನ ನಡೆಸಿಕೊಂಡು ಹೋಗ್ತಾ ಇದ್ದೇನೆ. ಎಲ್ಲೋ ನಾನು ಯಾಮಾರಿಬಿಟ್ಟೆ. ಕಳೆದ ವರ್ಷದ ಕೊರೊನಾ ಸಮಯದಲ್ಲಿ ನನಗೆ ಎಡ ಭಾಗದ ಕಿಡ್ನಿ ಫೇಲ್ಯೂರ್ ಆಯ್ತು. 1 ವರ್ಷ 3 ತಿಂಗಳಿನಿಂದ ಡಯಾಲಿಸಿಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲೇ ಡಾಕ್ಟರ್ಸ್ ನನ್ನನ್ನು ನೋಡಿಕೊಂಡಿದ್ದಾರೆ. ಒಂದುವೇಳೆ, ನನಗೆ ಡಯಾಲಿಸಿಸ್ ಶುರುವಾದರೆ ತುಂಬ ತೊಂದರೆ ಆಗುತ್ತದೆ. ಸತತವಾಗಿ 4 ವರ್ಷಗಳಿಂದ ಕೆಲಸ ಇಲ್ಲ. ಹಳಬರಿಗೆ ಬೆಲೆ ಇಲ್ಲ. ಈ ಕಾಯಿಲೆಗಳಿಂದ ನಾನು ಬಳಲಿ ಬೆಂಡಾಗಿದ್ದೇನೆ. ಐದು ದಿನಕ್ಕೆ ಒಂದು ಇಂಜೆಕ್ಷನ್ ಪಡೆಯಬೇಕಿದೆ. ಅದಕ್ಕೆ 2 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಖಂಡಿತಾ ಸ್ವೀಕರಿಸುತ್ತೇನೆ' ಎಂದಿದ್ದರು.