Saturday, 27th April 2024

ಸದ್ಯಕ್ಕಂತೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ: ಅರುಣ್ ಸಿಂಗ್ ಸ್ಪಷ್ಟನೆ

ಬೆಂಗಳೂರು: ಕರೋನಾ ವೈರಸ್ ಸಂಕಷ್ಟದ ನಡುವೆ ಉಂಟಾಗಿದ್ದ ಆಡಳಿತಾರೂಢ ಬಿಜೆಪಿ ಆಂತರಿಕ ಬಿಕ್ಕಟ್ಟು ಬಗೆಹರಿದಿದೆ. ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವವಾಗಿಲ್ಲ. ಯಡಿಯೂರಪ್ಪ ವಿರುದ್ಧ ಸಹಿ ಸಂಗ್ರಹ, ದೂರು ನೀಡಿದ್ದಾರೆ ಎಂಬುದೆಲ್ಲ ಸತ್ಯಕ್ಕೆ ದೂರವಾದ ಮಾತು, ಸದ್ಯಕ್ಕಂತೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಅರುಣ್ ಸಿಂಗ್ ಹೇಳಿದರು.

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಅನೇಕರು ಷಡ್ಯಂತ್ರ್ಯ ರೂಪಿಸಿ, ಹೈಕಮಾಂಡ್ ತನಕ ದೂರು ಹೋಗಿದೆ. ಜೂನ್ 7ಕ್ಕೆ ಹೊಸ ನಾಯಕತ್ವದಲ್ಲಿ ಕರ್ನಾಟಕ ಬಿಜೆಪಿ ಹೊಸ ಸರ್ಕಾರ ಎಂದೆಲ್ಲ ಸುದ್ದಿ ಹಬ್ಬಿತ್ತು. ಇದರ ಜೊತೆಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಬದಲಾವಣೆ ಬಗ್ಗೆ ಕೂಡಾ ಗಾಳಿಸುದ್ದಿ ಹಬ್ಬಿತ್ತು. ಬೆನ್ನಲ್ಲೆ ಯಡಿಯೂರಪ್ಪ ಅವರು ಕೂಡಾ ಬಿಜೆಪಿ ಹೈಕಮಾಂಡ್ ಬಯಸಿದರೆ ತಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿದ್ದರು.

ಯಡಿಯೂರಪ್ಪ ಅವರ ರಾಜೀನಾಮೆ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಪಕ್ಷದ ವರಿಷ್ಠದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!