ಬೆಂಗಳೂರು: ಸಿಡಿ ಪ್ರಕರಣದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ. ತನಿಖಾ ತಂಡಕ್ಕೆ ಸಹಕಾರ ನೀಡುವ ಉದ್ದೇಶದಿಂದಾಗಿ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಬರೆದ ದೂರಿನ ಪ್ರತಿಯನ್ನು ಅವರ ಆಪ್ತ ನೆಲಮಂಗಲ ಮಾಜಿ ಶಾಸಕ ನಾಗರಾಜ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಇದೊಂದು ನಕಲಿ ಸಿಡಿ ಯಾಗಿದ್ದು, ಈ ಮೂಲಕ ತಮ್ಮ ತೇಜೋವಧೆ ಮಾಡಲಾಗಿದೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸುಮಾರ್ ಎರಡೂವರೆ ಪುಟಗಳ ದೂರು ಸಲ್ಲಿಕೆ ಮಾಡಲಾಗಿದೆ.
ದೂರು ಸ್ವೀಕಾರದ ಬಳಿಕ ಮಾಹಿತಿ ನೀಡಿದ ಡಿಸಿಪಿ ಅನುಚೇತನ್, ದೂರಲ್ಲಿ ಯಾರ ಹೆಸರಲ್ಲೂ ಉಲ್ಲೇಖಿಸಿಲ್ಲ. ತೇಜೋವಧೆ ಮಾಡಲು ಯತ್ನಿಸಿದ್ದಾರೆಂದು ದೂರು ಸಲ್ಲಿಸಲಾಗಿದೆ. ಈ ಸಿಡಿ ಮೂಲಕ ಬ್ಲ್ಯಾಕ್ಮೇಲ್ಗೆ ಯತ್ನಿಸಿದ್ದಾರೆ. ಇದು ನಕಲಿ ಸಿಡಿ ಎಂದು ನಮೂದಿಸಿದ್ದು, ಇದರ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಸಿಡಿಯಲ್ಲಿರುವುದು ನಾನಲ್ಲ ಎಂದು ರಮೇಶ್ ತಿಳಿಸಿದ್ದು, ಕಳೆದ 4 ತಿಂಗಳಿಂದ ಸಿಡಿ ಷಡ್ಯಂತ್ರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಡಿ ಪ್ರಕರಣದ ಕುರಿತು ಯಾವುದೇ ದೂರು ದಾಖಲಾಗದ ಹಿನ್ನಲೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಈ ಹಿಂದೆ ರಮೇಶ್ ಜಾರಕಿಹೊಳಿ ಉದ್ಯೋಗದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನೊಂದ ಯುವತಿ ಪರವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಳಿಕ ದೂರನ್ನು ಹಿಂಪಡೆದಿದ್ದರು. ಈ ಹಿನ್ನಲೆ ತನಿಖೆಗೆ ಸಹಕಾರಿಯಾಗಲು ದೂರು ದಾಖಲಿಸುವಂತೆ ಸೂಚಿಸಲಾಗಿತ್ತು.