Pralhad Joshi: ಆರ್ಎಸ್ಎಸ್ ಬಗ್ಗೆ ಲಘು ಹೇಳಿಕೆ ಕಾಂಗ್ರೆಸ್ಗೆ ಫ್ಯಾಷನ್ ಆಗಿದೆ: ಪ್ರಲ್ಹಾದ್ ಜೋಶಿ
Pralhad Joshi: ತುಷ್ಟೀಕರಣ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದ ಕಾಂಗ್ರೆಸ್, ಅಭಿವೃದ್ಧಿ ಹೆಸರಲ್ಲಿ ಒಡೆದಾಳುವ ರಾಜಕೀಯ ಮಾಡುತ್ತಿದೆ. ವೋಟ್ ಬ್ಯಾಂಕ್ಗಾಗಿ ರಾಷ್ಟ್ರ ಒಡೆಯುವ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ಬರೀ ಮುಸ್ಲಿಂ ಓಲೈಕೆಯ ಕಾಂಗ್ರೆಸ್ಗೆ ಆರ್ಎಸ್ಎಸ್ (RSS) ಬಗ್ಗೆ ಲಘುವಾಗಿ ಮಾತನಾಡುವುದು ಒಂದು ಫ್ಯಾಷನ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿ ಕಾರಿದ್ದಾರೆ. ಆರ್ಎಸ್ಎಸ್ ಸನಾತನ ಧರ್ಮ, ಸಂಸ್ಕೃತಿ, ರಾಷ್ಟ್ರ ಜಾಗೃತಿ ಮತ್ತು ಜಾಗ್ರತೆಯ ಒಂದು ಸಶಕ್ತ ಸಂಘಟನೆಯಾಗಿದೆ. ಅದರ ಬಗ್ಗೆ ಮಾತನಾಡುವ ಯೋಗ್ಯತೆ ತಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಆರ್ಎಸ್ಎಸ್ ಸ್ವಾತಂತ್ರ್ಯ ಪೂರ್ವದಿಂದಲೂ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿದೆ. ಇಂದಿಗೂ ಅದೇ ಮಾರ್ಗದಲ್ಲಿದೆ. ಆರ್ಎಸ್ಎಸ್ ಯಾವತ್ತೂ ಕಾಂಗ್ರೆಸ್ನಂತೆ ಒಂದು ಸಮುದಾಯದ ಓಲೈಕೆ ಮಾಡುವುದಿಲ್ಲ ಎಂದು ಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.
ವಿನಾಕಾರಣ ಆರ್ಎಸ್ಎಸ್ ಅನ್ನು ಎಳೆದು ತರುವುದು ಇತ್ತೀಚೆಗೆ ಕಾಂಗ್ರೆಸ್ಗೆ ಫ್ಯಾಷನ್ ಆಗಿ ಬಿಟ್ಟಿದೆ. ಒಂದು ರಾಷ್ಟ್ರಪರ ಚಿಂತನೆಯುಳ್ಳ ಶಿಸ್ತಿನ ಸಂಘಟನೆ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇರಬೇಕು. ಆದರೆ, ಅದು ಕಾಂಗ್ರೆಸ್ಗೆ ಇಲ್ಲ ಎಂದು ಜೋಶಿ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ಸಿನಿಂದ ಒಡೆದಾಳುವ ನೀತಿ
ತುಷ್ಟೀಕರಣ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದ ಕಾಂಗ್ರೆಸ್ ಅಭಿವೃದ್ಧಿ ಹೆಸರಲ್ಲಿ ಒಡೆದಾಳುವ ರಾಜಕೀಯ ಮಾಡುತ್ತಿದೆ. ವೋಟ್ ಬ್ಯಾಂಕ್ಗಾಗಿ ರಾಷ್ಟ್ರ ಒಡೆಯುವ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ ಎಂದು ಸಚಿವ ಜೋಶಿ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Narendra Modi: "ನೀವು ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ": ಸುನಿತಾ ವಿಲಿಯಮ್ಸ್ಗೆ ಪ್ರಧಾನಿ ಮೋದಿ ಪತ್ರ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರೂ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣ ನೋಡಿಯೇ ಜನರು ರಾಷ್ಟ್ರ ರಾಜಕಾರಣದಿಂದ ಹೊರಗಿಟ್ಟಿದ್ದಾರೆ. ದೇಶಾದ್ಯಂತ ತಿರಸ್ಕರಿಸುತ್ತಿದ್ದಾರೆ. ಆರೆಸ್ಸೆಸ್ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಈ ಸತ್ಯ ಅರಿತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ʼಎಕ್ಸ್ʼ ಖಾತೆಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.