Saturday, 18th May 2024

ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ – ಒಂದು ಅವಲೋಕನ

ಗ.ನಾ. ಭಟ್ಟ

ಮೈಸೂರಿನ ದಸರಾ ವಿಶ್ವಪ್ರಸಿದ್ಧ. ಮೈಸೂರು ಅರಸ ಮನೆತನದವರು ಇದನ್ನು ವೈಭವೋಪೇತವಾಗಿ ಆಚರಿಸುತ್ತಿದ್ದರು. ಈಚಿನ ದಶಕಗಳಲ್ಲಿ ಸರಕಾರವೇ ಈ
ಜವಾಬ್ದಾರಿಯನ್ನು ವಹಿಸಿಕೊಂಡಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ನವರಾತ್ರಿ ಆಚರಣೆಯ ಮುಂದುವರಿಕೆಯೇ ಮೈಸೂರಿನ ಈ ಉತ್ಸವ.

ನಮ್ಮ ದೇವಾನುದೇವತೆಗಳ ಕೈಯಲ್ಲಿ, ಅದರಲ್ಲೂ ವಿಶೇಷವಾಗಿ ನವರಾತ್ರಿಯಲ್ಲಿ ಪೂಜೆಗೊಳ್ಳುವ ದುರ್ಗಾ, ಕಾಳಿ, ಚಾಮುಂಡಿ ಮೊದಲಾದ ಶಕ್ತಿ ದೇವತೆಗಳ ಕೈಯಲ್ಲಿ ಆಯುಧಗಳಿರುವುದು ದುಷ್ಟರ ಸಂಹಾರಕ್ಕೇ ಹೊರತು ಶಿಷ್ಟರ ಸಂಹಾರಕ್ಕಲ್ಲ ಅನ್ನವುದು ಸೂರ್ಯಬೆಳಕಿನಷ್ಟೇ ಪ್ರಖರ ಸತ್ಯ.

ಆದಿ ದೈತ್ಯರೆನಿಸಿಕೊಂಡ ಹಿರಣ್ಯಾಕ್ಷ, ಹಿರಣ್ಯಕಷಿಪು, ನಮುಚಿ, ಶಂಬರ, ತ್ರಿಪುರಾಸುರ, ಪೂತನೆ, ಜರಾಸಂಧ, ಶಿಶುಪಾಲ, ದುರ್ಯೋಧನ, ಕರ್ಣ, ದುಃಶಾಸನ ಮೊದಲಾದವರೆಲ್ಲ ಕೆಡುಕಿನ ಸಂಕೇತವಾಗಿದ್ದರು. ರಾಮ, ಕೃಷ್ಣ, ಪ್ರಹ್ಲಾದ, ವಾಮನ, ವಿಭೀಷಣ, ಹನೂಮಂತ, ಕುಂತಿ, ಪಾಂಡವರು ಇವರೆಲ್ಲರೂ ಒಳಿತಿನ ಸಂಕೇತ ವಾಗಿದ್ದರು. ಈ ಒಳಿತು-ಕೆಡುಕುಗಳು ಅನಾದಿ. ಅವು ಯುಗಯುಗಗಳಲ್ಲೂ ಬೇರೆ ಬೇರೆ ರೂಪಗಳನ್ನು ತಾಳಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಋಷಿ-ಮುನಿಗಳು ದೇವಾಸುರ ಯುದ್ಧ ಎಂದು ಸಾಂಕೇತಿಕವಾಗಿ ಕರೆದರು.

ಇದನ್ನು ಹಗಲು-ರಾತ್ರಿ, ಸತ್ಯ-ಅಸತ್ಯ, ಧರ್ಮ- ಅಧರ್ಮ, ಮರ್ತ್ಯ-ಅಮರ್ತ್ಯ ಹೀಗೆ ಹಲವು ವಿಧಗಳಲ್ಲಿ ವ್ಯಾಖ್ಯಾನಿಸಬಹುದು. ತಾತ್ಪರ್ಯ ಮಾತ್ರ ಒಂದೇ. ಪ್ರಕೃತ ಜಗತ್ಪ್ರಸಿದ್ಧ ಮೈಸೂರು ದಸರಾ ಮತ್ತು ನವರಾತ್ರಿ ಉತ್ಸವಕ್ಕೆ ಸಂಬಂಧಪಟ್ಟಂತೆ ಯೋಚಿಸುವುದಾದರೆ ಚಾಮುಂಡೀ ಮತ್ತು ಮಹಿಷಾಸುರನ ಸಂಬಂಧವೂ ಕೂಡಾ ಒಳಿತು-ಕೆಡುಕುಗಳ ಸಂಘರ್ಷವೇ ಆಗಿದೆ. ದೇವಾಸುರ ಯುದ್ಧದ ಸಂಕೇತವೇ ಆಗಿದೆ. ಚಾಮುಂಡಿ ಮತ್ತು ಮಹಿಷಾಸುರನ ವಿಚಾರ ದುರ್ಗಾಸಪ್ತಶತಿಯ ದ್ವಿತೀಯ ಅಧ್ಯಾಯ ಅಥವಾ ಮಧ್ಯಮ ಚರಿತ್ರದಲ್ಲಿ ಬರುತ್ತದೆ.

ಅಸುರೇಶ್ವರನಾದ ಮಹಿಷನು ದೇವತೆಗಳನ್ನು ಸೋಲಿಸಿ ಇಂದ್ರಪದವಿಯನ್ನು ಪಡೆದು ಇಡೀ ಲೋಕಕ್ಕೇ ಉಪದ್ರವ ಕೊಡಲು ಆರಂಭಿಸಿದನು. ಇದನ್ನು ತಡೆಯ ಲಾರದ ದೇವತೆಗಳು ಬ್ರಹ್ಮನನ್ನು ಮುಂದಿಟ್ಟುಕೊಂಡು ಹರಿಹರರನ್ನು ನೋಡಿ ತಮಗಾದ ಕಷ್ಟಸಂಕಷ್ಟಗಳನ್ನು ತೋಡಿಕೊಂಡರು ಮತ್ತು ಮಹಿಷಾಸುರನನ್ನು ಕೊಂದು ಉಪಕರಿಸಬೇಕೆಂದು ಪ್ರಾರ್ಥಿಸಿಕೊಂಡರು. ಹರಿಹರಬ್ರಹ್ಮ ಮತ್ತು ಇತರ ದೇವತೆಗಳ ಮುಖದಿಂದ ತೇಜೋರಾಶಿಯೊಂದು ಹೊರಗೆ ಬಂದು ಒಂದು ನಾರಿಯ ರೂಪವನ್ನು ತಾಳಿತು. ದೇವತೆಗಳೆಲ್ಲರೂ ತಮ್ಮ ತಮ್ಮ ತೇಜಸ್ಸುಗಳನ್ನು ಆ ನಾರಿಗೆ ಧಾರೆಯೆರೆದರು. ಶಂಭುವಿನ ತೇಜಸ್ಸು ಅವಳ ಮುಖವೂ,
ಮಹಾವಿಷ್ಣುವಿನ ತೇಜಸ್ಸು ಅವಳ ಬಾಹುಗಳೂ, ಬ್ರಹ್ಮನ ತೇಜಸ್ಸು ಅವಳ ಪಾದಗಳೂ ಆದವು.

ಯಮ, ಸೋಮ, ಇಂದ್ರ, ವರುಣ ಮೊದಲಾದವರ ತೇಜಸ್ಸುಗಳಿಂದ ಅವಳ ಕೇಶ, ಸ್ತನ, ನಡು, ಮೊಣಕಾಲು ಮೊದಲಾದ ಇತರ ಅವಯವಗಳು ಸೃಷ್ಟಿ ಗೊಂಡವು. ಹಾಗೆಯೇ ದೇವತೆಗಳು ಅವಳಿಗೆ ಜಪಮಾಲೆ, ಕಮಂಡಲು, ದಂಡ, ಪದ್ಮ, ಗಂಟೆ, ಶಂಖ ಮೊದಲಾದ ಸುವಸ್ತುಗಳೊಡನೆ ಗದೆ, ಪರಶು, ಧನುಸ್ಸು, ಶೂಲ, ಚಕ್ರ ಮೊದಲಾದ ಆಯುಧಗಳನ್ನು ನೀಡಿದರು. ಇಂತಹ ನಾರೀ ಬೇರೆ ಯಾರೂ ಆಗಿರದೆ ಮಹಾಲಕ್ಷ್ಮಿಯೇ ಆಗಿದ್ದಳು. ಇಂತಹ ದಿವ್ಯರೂಪ ಸಂಪನ್ನೆ ಮಹಾಲಕ್ಷ್ಮೀ ಚಾಮುಂಡಿಯೆಂಬ ಹೆಸರಿನಿಂದ ಮಹಿಷಾಸುರನನ್ನು ಕೊಂದಳು. ಈ ವಿವರಣೆ ದುರ್ಗಾಸಪ್ತಶತಿಯ ಎರಡನೆಯ ಅಧ್ಯಾಯದಲ್ಲಿ ವಿಸ್ತತವಾಗಿ ಬಂದಿದೆ.

ರಾಜವಂಶದ ದೇವತೆ
ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಕೊಂದಿದ್ದಕ್ಕಾಗಿ ಮಹಾಲಕ್ಷ್ಮಿಗೆ ಚಾಮುಂಡೀ ಎಂಬ ಹೆಸರೂ, ಮಹಿಷಾಸುರನನ್ನು ಕೊಂದಿದ್ದಕ್ಕಾಗಿ ಮಹಿಷಾಸುರ ಮರ್ದಿನೀ ಎಂಬ ಹೆಸರು ಬಂತೂ ಎಂದು ಮಾರ್ಕಂಡೇಯ ಪುರಾಣ ಹೇಳುತ್ತದೆ. ಮೈಸೂರು ರಾಜವಂಶದ ಅಧಿದೇವತೆ ಚಾಮುಂಡೇಶ್ವರೀ. ಹಾಗೆಯೇ ಕನ್ನಡಿಗರ ಅಭಿಮಾನ ದೇವತೆಯೂ ಹೌದು. ಮೈಸೂರು ದಸರಾ ಹಬ್ಬ ಆಚರಿಸುವುದೆಂದರೆ ಅದು ನಿಜಕ್ಕೂ ಚಾಮುಂಡೀ ಹಬ್ಬ. ಚಾಮುಂಡೇಶ್ವರೀ ಇಡೀ ನಾಡನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಕನ್ನಡನಾಡಿನ ಜನತೆಗೆ ಇದೆ. ದುಷ್ಟಶಕ್ತಿಯನ್ನು ನಿರ್ನಾಮ ಮಾಡಿ ಶಿಷ್ಟ ಶಕ್ತಿಯನ್ನು ಬೆಂಬಲಿಸಿದ ಚಾಮುಂಡಿಯನ್ನು ನೆನೆಯಲು ಇದೊಂದು ಸೂಕ್ತ ಅವಕಾಶ.

ಅಂತೆಯೇ ಚಾಮುಂಡೇಶ್ವರೀ ಮಹಿಷಾಸುರನನ್ನು ಸಂಹರಿಸಿದ್ದಕ್ಕಾಗಿ ಅದರ ಕೃತಜ್ಞತೆಯ ದ್ಯೋತಕವಾಗಿ ಆಚರಿಸುವ ವಿಜಯೋತ್ಸವವೂ ಹೌದು. ಹತ್ತು
ದಿನ ನಡೆಯುವುದರಿಂದ ಇದು ದಸರಾ. ದಶ -ಹರಾ= ದಸರಾ. ಅದೇ ನವರಾತ್ರಿ ಮತ್ತು ವಿಜಯದಶಮೀ. ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲಿ ಚಾಮುಂಡಿ ಬೆಟ್ಟ ಒಂದು. ಹಾಗೆಯೇ ಅಲ್ಲಿಯ ದೊಡ್ಡ ನಂದಿ ವಿಗ್ರಹ ಮತ್ತು ಮಹಿಷಾಸುರನ ಪ್ರತಿಮೆಯೂ ಕೂಡಾ ಅಷ್ಟೇ ಆಕರ್ಷಕವಾದವುಗಳು. ಚಾಮುಂಡಿ ಬೆಟ್ಟಕ್ಕೆ ಹೋದ ತಕ್ಷಣ ನಮ್ಮನ್ನು ಸೆಳೆಯುವುದು ಮಹಿಷಾಸುರನ ಪ್ರತಿಮೆ. ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಹಾವನ್ನು ಹಿಡಿದ ಆ ಪ್ರತಿಮೆ ಮೊದಲಿಗೇ
ಕಾಣಸಿಗುತ್ತದೆ. ಕೋರೆಹಲ್ಲು, ದಪ್ಪಮೀಸೆ, ದೊಡ್ಡ ಕಣ್ಣುಗಳನ್ನು ಹೊಂದಿದ ಆ ಮಹಿಷಾಸುರನ ವಿಗ್ರಹ ಅಸುರತ್ವದ, ಕೆಡುಕಿನ ಸಂಕೇತವಾಗಿ ಚಾಮುಂಡಿಯಿಂದ ಮರ್ದಿತನಾದ ಅನ್ನುವುದು ಆ ಪ್ರತಿಮೆಯ ಸಂಕೇತವಾಗಿದೆ.

ಮುಂದೆ ಹೋದಂತೆ ನಾವು ಚಾಮುಂಡಿಯ ದೇವಾಲಯವನ್ನು ದರ್ಶಿಸುತ್ತೇವೆ. ಮುಂಭಾಗದ ಮಂಟಪದಲ್ಲಿರುವ ಸ್ತಂಭಗಳು ಹೊಯ್ಸಳ ಶೈಲಿಯಲ್ಲಿ ಇದ್ದು, ಒಳಗಿನ ಗರ್ಭಗುಡಿಯಲ್ಲಿರುವ ಚಾಮುಂಡೀದೇವಿಯು ನಾಲ್ಕು ಕೈಗಳನ್ನು ಹೊಂದಿ ಭಕ್ತಿಭಾವದಲ್ಲಿ ಮೀಯಿಸುತ್ತದೆ. ಮೈಸೂರು ನಗರದಿಂದ ಚಾಮುಂಡಿ ಬೆಟ್ಟವು ೧೨ ಕಿ.ಮೀ. ದೂರದಲ್ಲಿದೆ. ನಡೆದು ಹೋಗುವುದಾದರೆ ೧೦೦೦ ಮೆಟ್ಟಿಲುಗಳನ್ನು ಹತ್ತಬೇಕು.

ಚಾಮುಂಡಿ ಬೆಟ್ಟದ ಅರ್ಧ ಹಾದಿಯಲ್ಲಿ ಮಹಾನಂದಿಯ ವಿಗ್ರಹವಿದೆ. ಇದು ೩೪೨ ವರ್ಷಗಳಷ್ಟು ಹಳೆಯದು. ತಂಜಾವೂರಿನ ಬೃಹತ್ ನಂದಿಯ ವಿಗ್ರಹವನ್ನು ಬಿಟ್ಟರೆ ಎರಡನೆಯ ಅತಿದೊಡ್ಡ ಗಾತ್ರದ ನಂದಿ ವಿಗ್ರಹ ಇದು. ಇದೇ ಆಗಿರುತ್ತದೆ. ೧೬ ಅಡಿ ಎತ್ತರ, ೨೫ ಅಡಿ ಉದ್ದವಿರುವ ಇದು ಆಕರ್ಷಕ ಕಲಾಕೃತಿ.

ನಿಂತುಹೋಗಿದ್ದ ನಾಡಹಬ್ಬ 
೧೯೭೦ರಲ್ಲಿ ರಾಜತ್ವವು ರದ್ದುಗೊಂಡಿತು. ಆಗ ಆಳ್ವಿಕೆಯಲ್ಲಿದ್ದವರು ಜಯರಾಮರಾಜ ಒಡೆಯರ್. ಅದೂತನಕ ರಾಜರಾಗಿದ್ದವರು ಆ ಕ್ಷಣ ರಾಜತ್ವ ಕಳೆದುಕೊಂಡು ಬೇಸರದಿಂದ ದಸರಾ ಆಚರಿಸುವುದನ್ನೇ ನಿಲ್ಲಿಸಿಬಿಟ್ಟರು. ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಅದೂವರೆಗೂ ದಸರಾ ಅನ್ನುವುದು ಅರಸೊತ್ತಿಗೆಯ ಸಂಕೇತವಾಗಿತ್ತು. ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರ ಪಾಟೀಲರು. ಅವರ ಅವಧಿಯಲ್ಲಿ ಮೂರು ವರ್ಷಗಳ ಕಾಲ ದಸರಾ ಮಹೋತ್ಸವ ನಿಂತೇ ಹೋಗಿತ್ತು.

ದಸರಾ ಹಬ್ಬ ನಿಂತುಹೋಗಿದ್ದಕ್ಕೆ ಜಯರಾಮರಾಜೇಂದ್ರ ಒಡೆಯರಷ್ಟೇ ಅಲ್ಲ. ಸಾರ್ವಜನಿಕರೆಲ್ಲರೂ ಬೇಸರ ಪಟ್ಟುಕೊಂಡಿದ್ದರು. ಇದರಿಂದ ನೊಂದಿದ್ದ ದೇವರಾಜ ಅರಸ್ ರವರ ತಮ್ಮ ಜಯದೇವರಾಜ ಅರಸ್, ಮಾಜಿ ಪುರಸಭಾಧ್ಯಕ್ಷ ಸಿ.ಲಿಂಗಯ್ಯ ಮತ್ತು ಜಾವಾ ಕಾರ್ಖಾನೆ ಮಾಲಿಕ ಎಫ್.ಕೆ.ಇರಾನಿ
ಮೊದಲಾದ ಗಣ್ಯರು ಸೇರಿ ಒಂದು ನಾಗರಿಕ ವೇದಿಕೆಯನ್ನು ರಚಿಸಿ ತನ್ಮೂಲಕ ದಸರಾ ಉತ್ಸವ ನಡೆಸಿ ಅದರ ಜೀವ ಉಳಿಸಿದರು.

ದೇವರಾಜ ಅರಸ್ ನಂತರ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿ ಅಽಕಾರಕ್ಕೆ ಬಂದರು. ಇವರ ಅವಧಿಯಲ್ಲಿ ಇನ್ನು ಮುಂದೆ ದಸರಾವನ್ನು ಸರಕಾರವೇ ಆಚರಿಸಬೇಕೆಂದು ನಿರ್ಧರಿಸಿತು. ಅಂದಿನಿಂದ ಇಂದಿನತನಕವೂ ಸರಕಾರವೇ ದಸರಾವನ್ನು ಆಚರಿಸುತ್ತಿದೆ. ಈಗ ಮೈಸೂರು ದಸರಾ
ಅಂದು ಚಾಲ್ತಿಯಲ್ಲಿದ್ದ ವಸ್ತುಪ್ರದರ್ಶನದೊಂದಿಗೆ -ಲಪುಷ್ಪ ಪ್ರದರ್ಶನ, ಯುವ ದಸರಾ, ಮಹಿಳಾ ದಸರಾ, ರೈತ ದಸರಾ, ಕವಿಗೋಷ್ಠಿ, ಸಂಗೀತ ರಸದೌತಣ ಜೊತೆಗೆ ವಿವಿಧ ಕಲಾಪ್ರದರ್ಶನ ಹೀಗೆ ನಾನಾ ಆಯಾಮಗಳನ್ನು ಪಡೆದುಕೊಂಡು ವಿರಾಜಿಸುತ್ತಿದೆ. ಈ ವರ್ಷವೂ, ಕೋವಿಡ್ ಸಂಬಂಽತ ನಿರ್ಬಂಧದ ನಡುವೆಯೂ ಮೈಸೂರಿನಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ, ನಾಡ ಹಬ್ಬ ಕಳೆಗಟ್ಟಿದೆ, ಸಂಪ್ರದಾಯ ಮುಂದುವರಿದಿದೆ.

ಸಲ್ಲದ ವಿವಾದ
ಈಚಿನ ಕೆಲವು ವರ್ಷಗಳಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಕೆಲವರು ಟೀಕಿಸುವುದು ಅಲ್ಲಲ್ಲಿ ಕಂಡುಬಂದಿದೆ. ನಾಡಹಬ್ಬ ಆರಂಭಗೊಳ್ಳುವುದಕ್ಕೆ
ಹದಿನೈದು-ಇಪ್ಪತ್ತು ದಿನಗಳ ಮೊದಲೇ ‘ನಾವು ಮಹಿಷ ದಸರಾ ಆಚರಿಸುತ್ತೇವೆ. ಇದನ್ನು ಆಚರಿಸಲು ನಮಗೆ ಅನುಮತಿ ಕೊಡಿ. ಮೈಸೂರು ಮಹಿಷಮಂಡಲ.
ಅದಕ್ಕಾಗಿಯೇ ಇದಕ್ಕೆ ಮೈಸೂರು ಎಂಬ ಹೆಸರ ಬಂದಿದೆ. ಇದಕ್ಕೆ ಇದರದ್ದೇ ಆದ ದೊಡ್ಡ ಇತಿಹಾಸವಿದೆ. ನಾವು ಪ್ರತ್ಯೇಕವಾಗಿ ಇದನ್ನು ಆಚರಿಸಲೇ ಬೇಕು.’ಎಂದೆಲ್ಲಾ ಕೂಗೆಬ್ಬಿಸುತ್ತಾರೆ. ಇಂತಹವರಿಗೆ ನಮ್ಮ ಪ್ರಾಚೀನ ಕಾವ್ಯೇತಿಹಾಸಗಳ, ಪುರಾಣಗಳ ವಿವರ ಗೊತ್ತಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಮೈಸೂರು ಅರಸರ ಮೂಲಕ ಆಚರಣೆಗೊಳ್ಳುತ್ತಿರುವ ಮೈಸೂರು ದಸರಾಕ್ಕೆ ಶತಮಾನಗಳ ಇತಿಹಾಸವಿದೆ, ಪುರಾತನ ಪರಂಪರೆಯಿದೆ.

Leave a Reply

Your email address will not be published. Required fields are marked *

error: Content is protected !!