Sunday, 19th May 2024

ಏಕತೆಯ ಸಂಕೇತ ನಮ್ಮ ಗಣಪತಿ

ಗ.ನಾ.ಭಟ್ಟ

ಸಾವಿರಾರು ದೇವತೆಗಳಿರುವ ನಮ್ಮ ದೇಶದಲ್ಲಿ ಗಣಪತಿಯು ವಿಶಿಷ್ಟ, ವಿಭಿನ್ನ. ಅವನು ಬುದ್ಧಿವಂತ, ತುಂಟ, ಸಾಹಸಿ, ಲಿಪಿಕಾರ. ಅವನಿಗೆ ಜಾತಿಬೇಧವಿಲ್ಲ, ಎಲ್ಲರಿಂದ ಪೂಜಿತ. ಎಲ್ಲಕ್ಕಿಂತ ಮಿಗಿಲಾಗಿ ಗಣಪನು ಏಕತೆಯ ಸಂಕೇತ.

ಭಾರತೀಯ ಮತ, ಧರ್ಮ, ಸಂಪ್ರದಾಯಗಳಲ್ಲಿ ಇರುವಷ್ಟು ಔದಾರ್ಯ, ಹೃದಯ ವೈಶಾಲ್ಯವನ್ನು ಇತರ ಮತ, ಧರ್ಮ, ಸಂಪ್ರದಾಯಗಳಲ್ಲಿ ಕಾಣಲಾರೆವು. ಭಾರತದಲ್ಲಿ ಆತ್ಮವಿಮರ್ಶಾ ಪ್ರಜ್ಞೆಯು ಇತರರು ಬೆರಗುಪಡುವಂತೆ ಬೆಳೆದುಬಂದಿದೆ. ಅದರಲ್ಲೂ ಧರ್ಮದಲ್ಲಿ, ಅಧ್ಯಾತ್ಮದಲ್ಲಿ ಬೆಳೆದಿರುವಷ್ಟು ಹುಲುಸು,
ಸಮೃದ್ಧಿ ಮತ್ತೊಂದು ಧರ್ಮೀಯರಲ್ಲಿ, ಮತೀಯರಲ್ಲಿ ಕಂಡುಬರುತ್ತಿಲ್ಲ.

ಇತರ ಧರ್ಮೀಯರು ಮುಖ್ಯವಾಗಿ ತಮ್ಮ ಮತಧರ್ಮಗಳನ್ನು, ದೇವರನ್ನು, ಮೂಲಪುರುಷರನ್ನು, ಪ್ರವಾದಿ ಗಳನ್ನು ಶೋಧಕ್ಕೆ, ಚಾರಿತ್ರ್ಯಪರೀಕ್ಷೆಗೆ, ಹೆಚ್ಚೇಕೆ? ಸಾಮಾನ್ಯ ವಿಚಾರ-ವಿಮರ್ಶೆಗೂ ಒಳಪಡಿಸುವುದಿಲ್ಲ. ಅಲ್ಲಿ ವಿಚಾರ, ವಿಮರ್ಶೆ ನಿಷಿದ್ಧ. ಹಾಗೇನಾದರೂ ಮಾಡಿದರೆ ಅದು ಅಪರಾಧ. ಆದರೆ ನಾವು ಭಾರತೀಯರು ನಮ್ಮ ದೇವರನ್ನು, ಕೃಷ್ಣ, ರಾಮ, ಶಿವ, ಗಣಪತಿ, ಪಾರ್ವತಿ, ಲಕ್ಷ್ಮೀ ಮೊದಲಾದ ದೇವತೆಗಳನ್ನು, ಋಷಿಮುನಿಗಳನ್ನು, ಶಂಕರ, ರಾಮಾನುಜ, ಮಧ್ವ, ಜಿನ, ಬುದ್ಧ ಮೊದಲಾದ ಮತಾಚಾರ್ಯರನ್ನೂ ಸ್ವತಂತ್ರವಾಗಿ ವಿಮರ್ಶಿಸು ತ್ತೇವೆ; ಪರಾಮರ್ಶಿಸುತ್ತೇವೆ. ಸರಿಯೋ ತಪ್ಪೋ ನಮಗನಿಸಿದ್ದನ್ನು ಹೇಳುತ್ತೇವೆ.

ಬರೆಯುತ್ತೇವೆ. ಭಾಷಣ ಮಾಡುತ್ತೇವೆ. ಸಹಿಸುತ್ತೇವೆ. ಅದರಿಂದ ಪಾಠ ಕಲಿಯುತ್ತೇವೆ. ನಮ್ಮ ಇತಿಹಾಸವನ್ನು ಆತ್ಮಶೋಧನೆಗೆ ಒಳಪಡಿಸುತ್ತೇವೆ. ಶಿವ ಮೇಲೋ? ವಿಷ್ಣು ಮೇಲೋ ಎಂದು ಚರ್ಚೆ ಮಾಡುತ್ತೇವೆ. ಸಂದರ್ಭ ಬಂದರೆ ದೇವರನ್ನೇ ಕಟಕಟೆಯಲ್ಲಿ ನಿಲ್ಲಿಸಿ ‘ನೀನು ಇರುವುದಕ್ಕೆ ಸಾಕ್ಷೀ ಏನು?’ ಎಂದು ಅವನನ್ನೇ ಪ್ರಶ್ನಿಸು ತ್ತೇವೆ. ಅಷ್ಟು ಉದಾರವಾದ ತತ್ತ್ವ-ಸಿದ್ಧಾಂತಗಳು ನಮ್ಮದು. ದೇವರ ವಿಷಯಕವಾಗಿ ನಮ್ಮ ಪುರಾಣೋ ಪನಿಷತ್ತುಗಳು ಇವನ್ನೇ ಸಾರುತ್ತವೆ. ಕಠೋಪನಿಷತ್ತು ಹೇಳುವುದನ್ನು ನೋಡಿ.

ಅಗ್ನಿರ್ಯಥೈಕೋ ಭುವನಂ ಪ್ರವಿಷ್ಟೋ |
ರೂಪಂ ರೂಪಂ ಪ್ರತಿರೂಪೋ ಬಭೂವ ||
ಏಕಸ್ತಥಾ ಸರ್ವಭೂತಾಂತರಾತ್ಮಾ |
ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ||
ಏಕೋ ವಶೀ ಸರ್ವಭೂತಾಂತರಾತ್ಮಾ |
ಏಕಂ ರೂಪಂ ಬಹುಧಾ ಯಃ ಕರೋತಿ ||
ತಮಾತ್ಮಸ್ಥಂ ಯೇನುಪಶ್ಯಂತಿ ಧಿರಾಃ |
ತೇಷಾಂ ಸುಖಂ ಶಾಶ್ವತಂ ನೇತರೇಷಾಮ್ ||

‘ಪ್ರಪಂಚದಲ್ಲಿ ಅಗ್ನಿಯು ಯಾವುದೋ ಒಂದು ರೂಪವನ್ನು ಪ್ರವೇಶಿಸಿ ಯಾವ ಪದಾರ್ಥವನ್ನು ಸುಡುತ್ತಾನೋ ಅದದರದೇ ರೂಪವನ್ನು ಅಥವಾ ಆಕಾರವನ್ನು ತಾಳುತ್ತಾನೆ. ಕಟ್ಟಿಗೆಯನ್ನು ಪ್ರವೇಶಿಸಿದರೆ ಆತ ಸುಟ್ಟ ಕಟ್ಟಿಗೆಯ ಆಕಾರವನ್ನೇ ತಾಳುತ್ತಾನೆ.

ಹಾಗೆಯೇ ಒಬ್ಬನೇ ಒಬ್ಬನಾದ ದೇವರು ಎಲ್ಲ ಭೂತಗಳ ಒಳಗೂ ಅಡಗಿಕೊಂಡು ಹೊರನೋಟಕ್ಕೆ ಆಯಾ ಪದಾರ್ಥದ ರೂಪವನ್ನು ಧರಿಸುತ್ತಾನೆ. ಸಮಸ್ತ ಪ್ರಾಣಿಗಳ- ವಸ್ತುಗಳ ಒಳಗಡೆಯೂ ಅಡಗಿಕೊಂಡಿರುವ ಒಬ್ಬನೇ ಒಬ್ಬ ದೇವರು ಎಲ್ಲರಿಗೂ ತನ್ನ ಒಂದೇ ಸ್ವರೂಪವನ್ನು ಬಹುಪ್ರಕಾರವಾಗಿ ತೋರಿಸಿ ಕೊಳ್ಳುತ್ತಾನೆ. ಯಾರು ಇಂತಹ ಮಹಾಮಹಿಮನನ್ನು ತಮ್ಮ ತಮ್ಮ ಒಳಗಡೆಯೇ ನೆಲೆಸಿರುವವನ್ನಾಗಿ ಕಾಣುತ್ತಾರೋ ಅವರಿಗೆ ಶಾಶ್ವತ ವಾದ ಸುಖವಿದೆ. ಇತರರಿಗೆ ಇಲ್ಲ’ ಎಂದು ಹೇಳುತ್ತದೆ. ಕಠೋಪನಿಷತ್ತು ದೇವರನ್ನು ಕಂಡ ಬಗೆ ಇದು. ಭಗವದ್ಗೀತೆ ಕೂಡಾ ಇದನ್ನೇ ಸಮರ್ಥಿಸುತ್ತದೆ.

ಯೋ ಯೋ ಯಾಂ ಯಾಂ ತನುಂ ಭಕ್ತಃ
ಶ್ರದ್ಧಯಾರ್ಚಿತುಮಿಚ್ಛತಿ |
ತಸ್ಯ ತಸ್ಯ ಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ||
ಭಗವದ್ಗೀತೆ: ೭-೨೧

‘ಯಾರು ಯಾರು ನನ್ನನ್ನು (ದೇವರನ್ನು) ಯಾವ ಯಾವ ರೂಪದಲ್ಲಿ ಶ್ರದ್ಧೆಯಿಂದ ಪೂಜಿಸಲು ಇಷ್ಟಪಡುವರೋ ಅವರಿಗೆ, ಅವರವರಿಗೆ ನಾನು (ದೇವರು) ಆಯಾ ರೂಪದಲ್ಲಿ ಶ್ರದ್ಧೆಯು ದೃಢಪಡುವಂತೆ ವಿಧಿಸುತ್ತೇನೆ.’ ದೇವರ ಬಗ್ಗೆ ಇಷ್ಟು ಉದಾರವಾದ ಹೇಳಿಕೆಯನ್ನು, ತತ್ತ್ವವನ್ನು ಬೇರೆಲ್ಲೂ ಕಾಣುವುದು ಕಷ್ಟ.

ಗಣಪತಿಯ ಉದ್ಭವ

ಕೃಷ್ಣ ಹೇಳಿದ ಈ ಮಾತನ್ನು ಮನನ ಮಾಡಿದರೆ ನಮ್ಮ ಮತವೈಷಮ್ಯಗಳು, ದೇವರ ವಿಷಯಕವಾದ ವಿಪರೀತಗಳು, ಅತಿರೇಕಗಳು ಎಂತಹ ಅವಿನಯ, ಅವಿಧೇಯತೆ, ಮೌಢ್ಯ, ತಿಳಿಗೇಡಿತನಗಳನ್ನು ಮಾಡಿವೆ ಅನ್ನುವುದು ಸ್ಪಷ್ಟವಾಗುತ್ತವೆ. ಇದರಿಂದ ನಮಗೆ ತಿಳಿದು ಬರುವುದು ಇಷ್ಟೇ! ದೇವರಿಗೆ ಗೊತ್ತಾಗದ ಯಾವ ಬಣ್ಣವೂ ಇಲ್ಲ. ಆಕಾರವೂ ಇಲ್ಲ. ರೂಪವೂ ಇಲ್ಲ. ನಮ್ಮ ಇಚ್ಛೆಗೆ ತಕ್ಕಂತೆ ಆತ ಯಾವ ರೂಪವನ್ನೂ ತಳೆಯಬಲ್ಲ.

ಯಾವ ಆಕಾರವನ್ನೂ, ಬಣ್ಣವನ್ನೂ ಧರಿಸಬಲ್ಲ. ಅವನು ಸಗುಣನೂ ಹೌದು; ನಿರ್ಗುಣನೂ ಹೌದು. ಈ ಹಿನ್ನೆಲೆಯಲ್ಲೇ ಗಣಪತಿ ಉದ್ಭವವಾದದ್ದು. ಗಣಪತಿ ನಮ್ಮೆಲ್ಲರ ಆರಾಧ್ಯ ದೈವ. ಅವನಿದ್ದಲ್ಲಿ ಹಾಸ್ಯ, ವಿನೋದ, ತುಂಟತನ, ಲವಲವಿಕೆ ಜೀವಂತಿಕೆ ಎಲ್ಲವೂ ಇರುತ್ತವೆ. ಅವನ ಉತ್ಸವದ ದಿನದಂದು ಬಗೆ ಬಗೆಯ ಭಕ್ಷ್ಯಭೋಜ್ಯಗಳು ಸಿಗುತ್ತವೆ. ಆತ ಸಾಹಿತ್ಯ ಪ್ರೇಮಿ, ಸಂಗೀತಪ್ರೇಮಿ, ನಾಟ್ಯಪ್ರೇಮಿ, ಅಸಾಧಾರಣ ಬುದ್ಧಿವಂತ, ಮಾತೃಭಕ್ತ, ವೀರ, ಶೂರ.

ತಂದೆಯೊಡನೆಯೇ ಯುದ್ಧಕ್ಕೆ ಇಳಿದವನು. ಅವನಿಗೆ ಜಾತಿಮತವಿಲ್ಲ. ಎಲ್ಲರೂ ಅವನನ್ನು ಪೂಜಿಸುತ್ತಾರೆ. ಪ್ರಥಮ ವಂದನೆ ಸಲ್ಲಿಸುತ್ತಾರೆ. ಅವನು ವಿಘ್ನ ನಿವಾರಕ. ವಿಘ್ನೇಶ್ವರ. ಎಲ್ಲದಕ್ಕಿಂತ ಹೆಚ್ಚಾಗಿ ಅವನು ಏಕತ್ವದ ಸಂಕೇತ. ಅವನ ಏಕತ್ವದ ಕುರಿತಾಗಿಯೇ ಒಂದು ಕಥೆಯಿದೆ.

ನಸುನಕ್ಕ ಗಣಪತಿ
ದೇತೆಗಳು, ರಾಕ್ಷಸರು, ಅಸುರರು, ದೈತ್ಯರು ಎಲ್ಲ ಸೇರಿ ಸಮುದ್ರ ಮಥನ ಮಾಡಬೇಕಾದ ಸಂದರ್ಭ. ಮಂದರ ಪರ್ವತವೇ ಆ ಕ್ಷೀರಸಾಗರಕ್ಕೆ ಕಡಗೋಲಾ ಗಿತ್ತು. ವಾಸುಕಿಯೇ ಹಗ್ಗವಾದ ಒಂದು ಅಪೂರ್ವ ಸಮುದ್ರಮಥನ ಅದು. ಕ್ಷೀರ ಸಾಗರಕ್ಕೆ ಮಂದರವನ್ನು ಎತ್ತಿ ತರಬೇಕಿತ್ತು. ಹಿಂದೆಂದೂ ಅಂತಹ ಘಟನೆ ಜರುಗಿರಲಿಲ್ಲ. ಆದರೇನು ಮಾಡೋಣ. ಎಲ್ಲದರಲ್ಲಿಯೂ ತಕರಾರು ತೆಗೆಯುವುದು, ಅಶ್ರದ್ಧೆ ತೋರಿಸುವುದು, ಜಗಳವಾಡುವುದು ರಾಕ್ಷಸರ ಮತ್ತು ದೈತ್ಯರ ಕೆಲಸ.

ಅವರಿಗೆ ಒಗ್ಗಟ್ಟು ಅಂದರೇ ಗೊತ್ತಿಲ್ಲ. ಪರ್ವತವನ್ನೇನೋ ಕಷ್ಟಪಟ್ಟು ಎತ್ತಿದರು. ಅದು ಮೇಲಕ್ಕೆ ಹಾರತೊಡಗಿತು. ಅಷ್ಟರಲ್ಲಿ ಆ ರಾಕ್ಷಸರು, ದೈತ್ಯರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ಎತ್ತಿದರು. ಕೆಲವರು ಪರ್ವತ ಎತ್ತುವುದರಲ್ಲಿ ಮತ್ತು ಮೇಲಕ್ಕೆ ಕ್ಷೀರಾಬ್ಧಿವಾಸನ ಬಳಿಗೆ ಒಯ್ಯಲು ಸರಿಯಾಗಿ ಸಹಕರಿಸ ಲಿಲ್ಲ. ಅದರಿಂದ ಮಂದರಪರ್ವತ ಕೆಳಕ್ಕೆ ಬೀಳಲಾರಂಭಿಸಿತು. ಹಾಗೆ ಕೆಳಕ್ಕೆ ಬೀಳುವಷ್ಟರಲ್ಲಿ ಕೆಲವು ದೈತ್ಯರು, ರಾಕ್ಷಸರು ಸತ್ತುಹೋದರು. ಅದನ್ನೇ ನೆಪ ವಾಗಿಟ್ಟುಕೊಂಡು ದೈತ್ಯರು ದೇವತೆಗಳ ಮೇಲೆ ಜಗಳ ತೆಗೆದರು. ಅಲ್ಲಿಯೇ ಸಮೀಪದಲ್ಲಿ ಇದ್ದ ಗಣಪತಿ ಅದನ್ನೆಲ್ಲ ನೋಡುತ್ತಾ ನಗುತ್ತಿದ್ದ. ಸಿಟ್ಟು ತಡೆಯಲಾರದೆ ದೈತ್ಯರು, ಅವರ ಗುರು ಶುಕ್ರ, ದೇವಗುರು ಬೃಹಸ್ಪತಿ ಎಲ್ಲರೂ ಗಣಪತಿಯ ಬಳಿ ಬಂದು ‘ಯಾಕೆ ನಗುತ್ತಿದ್ದಿ’  ಅಂತ ಕೇಳಿದರು.

ಅದಕ್ಕೆ ಗಣೇಶ ಹೇಳಿದ- ‘ನಿಮ್ಮಲ್ಲಿ ಒಗ್ಗಟ್ಟಿಲ್ಲ. ಪ್ರತಿಯೊಂದಕ್ಕೂ ಜಗಳವಾಡುತ್ತೀರಿ. ಕಪಟ, ಮೋಸ ಮಾಡುತ್ತೀರಿ. ಎಲ್ಲರನ್ನು ಸಂಶಯದಲ್ಲಿ ನೋಡುತ್ತಿರಿ.
ಸಾಮೂಹಿಕ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕಾಗುತ್ತದೆ. ದೇವತೆಗಳಿಗೂ ದೈತ್ಯರಿಗೂ ತಂದೆ ಒಬ್ಬನೇ. ಅವನೇ ಕಶ್ಯಪ. ಆದರೂ ನೀವು ವೈರಿಗಳಂತೆ
ವರ್ತಿಸುತ್ತೀರಿ. ನೀವು ಕೂಡಿ ಎತ್ತಬೇಕಾದ ಪರ್ವತ ಒಂದೇ. ಕ್ಷೀರ ಸಮುದ್ರ ಒಂದೇ. ಪಡೆಯಬೇಕಾದ ಅಮೃತ ಒಂದೇ.

ಗುರಿ ಒಂದೇ. ಹೀಗಿರುವಾಗ ನೀವು ದೈತ್ಯರು ‘ನಮ್ಮ ರಾಷ್ಟ್ರವೇ ಬೇರೆ. ನಾವೇ ಬೇರೆ’ ಎಂದು ಹೇಳುತ್ತಿದ್ದೀರಿ. ಇದು ಸರ್ವಥಾ ಸಾಧುವಲ್ಲ. ‘ನಾನು ನನ್ನ ಶರೀರದ ಅನೇಕತ್ವದ ಅಂಶಗಳಲ್ಲೂ ಒಂದು ಸೂತ್ರವಿರುವ ಏಕತೆಯ ಸಂಕೇತ. ಒಗ್ಗಟ್ಟಿನ ಸಂಕೇತ. ಇದನ್ನು ಅರ್ಥ ಮಾಡಿಕೊಂಡು ನಡೆಯಿರಿ’. ಅವನ ಮಾತಿಗೆ ಎಲ್ಲರೂ ಒಪ್ಪಿ ಒಗ್ಗಟ್ಟಿನಿಂದ ಪರ್ವತವನ್ನು ಎತ್ತಿದರು. ಹೀಗೆ ಗಣೇಶ ದೇವತೆಗಳಿಗೂ ದೈತ್ಯರಿಗೂ ಏಕತ್ವದ ಮಹತ್ವವನ್ನು ಸಾರಿ ಸಮುದ್ರಮಥನ
ಸುಗಮವಾಗುವಂತೆ ಮಾಡಿದ. ಹೆಣ್ಣು ಸಿಗದೇ ನಿಂತುಹೋದ ಮದುವೆ ಗಣಪತಿಯನ್ನು ಶಿವನ ಪುತ್ರ ಅನ್ನುವುದಕ್ಕಿಂತ ಗೌರಿಯ ಪುತ್ರ ಅಂತ ಹೇಳುವುದೇ ಹೆಚ್ಚು. ಅವನಿಗೂ ಅವನ ತಾಯಿ ಗೌರಿಗೂ ಒಂದು ಪ್ರಾಕೃತ-ಅಪ್ರಾಕೃತ ಸಂಬಂಧವಿದೆ. ಅದರಲ್ಲಿ ಅವನ ಮದುಗೆ ಸಂಬಂಧಿಸಿದ್ದು ಒಂದು.

ಎಷ್ಟು ವರ್ಷಗಳಾದರೂ ಒಬ್ಬನಿಗೆ ಮದುವೆ ಕುದುರದಿದ್ದರೆ ಅದು ಗಣೇಶನ ಮದುವೆ ಆದ ಹಾಗೆ ಎಂಬ ನಾಣ್ಣುಡಿಯನ್ನು ಪ್ರಯೊಗಿಸುವುದು ರೂಢಿಯಲ್ಲಿದೆ.
ಅದಕ್ಕೊಂದು ಕಾರಣವೂ ಇದೆ. ಗಣೇಶ ಪ್ರಾಪ್ತವಯಸ್ಕನದಾಗ ಗೌರಿ ಅವನಿಗೆ ಮದುವೆ ಮಾಡಬೇಕೆಂದು ಯೋಚಿಸಿದಳಂತೆ. ಯಾವ ಹೆಣ್ಣನ್ನು ತೋರಿಸಿದರೂ
ಅವನು ಒಪ್ಪಲಿಲ್ಲವಂತೆ. ತನ್ನ ತಾಯಿಯ ಲಕ್ಷಣವೇ ಉಳ್ಳ ಹೆಣ್ಣು ದೊರೆತರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದನಂತೆ.

ಅಪ್ರತಿಮ ಸುಂದರಿಯೂ, ಅದ್ವಿತೀಯಳೂ, ಲೋಕಮಾತೆಯೂ ಆದ ಗೌರಿಗೆ ಸದೃಶಳಾದ ಹೆಣ್ಣು ಸಿಗುವುದಾದರೂ ಹೇಗೆ? ಸಿಗಲೇ ಇಲ್ಲ. ಹಾಗಾಗಿ ಗಣಪತಿಗೆ ಮದುವೆಯೇ ಆಗಲಿಲ್ಲ. ಆದರೂ ಅವನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಹೆಂಡತಿಯರಿದ್ದಾರೆ. ಇದು ಸಂಪೂರ್ಣ ಸಾಂಕೇತಿಕವಾದುದು. ಗಣಪತಿಗೆ ಸಿದ್ಧಿಯಲ್ಲಿ ಲಕ್ಷ್ಯ ಎಂಬ ಮಗನೂ, ಬುದ್ಧಿಯಲ್ಲಿ ಲಾಭ ಎಂಬ ಮಗನೂ ಹುಟ್ಟಿದರಂತೆ. ಅವಿರತ ಪರಿಶ್ರಮದಿಂದ ಲಭಿಸುವುದು ಸಿದ್ಧಿ. ಆಮೇಲೆ ಬರುವುದು ಪ್ರಸಿದ್ಧಿ.

ಸಿದ್ಧಿ ಕೈಗೂಡುವುದಕ್ಕೆ ಅದರ ಹಿಂದೆ ಬೇಕು ಗುರಿ ಅಥವಾ ಧ್ಯೇಯ. ಅದು ನೆರವೇರಲು ಬೇಕು ಸರಿಯಾದ ಬುದ್ಧಿ ಅಥವಾ ತಿಳಿವಳಿಕೆ. ಅದರಿಂದ ಆಗುವುದೇ ಲಾಭ ಅಥವಾ ಗಳಿಕೆ. ಹೀಗೆ ಗಣಪತಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಹೆಂಡತಿಯರು, ಲಕ್ಷ್ಯ ಮತ್ತು ಲಾಭ ಎಂಬ ಇಬ್ಬರು ಮಕ್ಕಳು. ಅವನ ಅನುಗ್ರಹವಾದರೆ ನಮಗೆ ಲಭಿಸುವುದು ಸಿದ್ಧಿ-ಬುದ್ಧಿ. ಜತೆಗೆ ಗುರಿ ಮತ್ತು ಲಾಭ. ಅದಕ್ಕಾಗಿ ಅವನನ್ನು ಪ್ರಾರ್ಥಿಸೋಣ.

Leave a Reply

Your email address will not be published. Required fields are marked *

error: Content is protected !!