Bengaluru's second airport: ಬೆಂಗಳೂರಿನ 2ನೇ ಏರ್ಪೋರ್ಟ್; ಕೇಂದ್ರ ತಂಡದಿಂದ ನೆಲಮಂಗಲದಲ್ಲಿ ಸ್ಥಳ ವೀಕ್ಷಣೆ
Bengaluru's second airport: ಸದ್ಯ ಕನಕಪುರ ರಸ್ತೆಯಲ್ಲಿ ಗುರುತಿಸಿರುವ ಎರಡು ಪ್ರದೇಶ ಮತ್ತು ನೆಲಮಂಗಲ - ಕುಣಿಗಲ್ ರಸ್ತೆಯಲ್ಲಿರುವ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಿಸಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಯುತ್ತಿದೆ. ಆದರೆ, ಏರ್ಪೋರ್ಟ್ ರೇಸ್ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಔಟ್ ಆಗಿದೆ.


ನೆಲಮಂಗಲ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ರಾಜಧಾನಿಯಲ್ಲಿ 2ನೇ ಏರ್ಪೋರ್ಟ್ (Bengaluru's second airport) ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ತಂಡ, ನೆಲಮಂಗಲ-ಮೋಟಗಾನಹಳ್ಳಿ ಸುತ್ತಮುತ್ತಲಿನ ಸ್ಥಳವನ್ನು ವೀಕ್ಷಿಸಿದೆ. ನೆಲಮಂಗಲ ತಾಲೂಕಿನ ಗಡಿ ಬಸೇನಹಳ್ಳಿ ಬೆಟ್ಟದ ಭಾಗದಿಂದ 15ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿದ್ದಾರೆ.
ಬೆಂಗಳೂರಿನ 2ನೇ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರದಿಂದ 3 ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸುತ್ತಮುತ್ತಲಿನ ಒಂದು ಭಾಗ ಹಾಗೂ ಮೋಟಗಾನಹಳ್ಳಿಯ ಪ್ರದೇಶವನ್ನು ಅಧಿಕಾರಿಗಳು ವೀಕ್ಷಿಸಿದ್ದಾರೆ. ಬಹುತೇಕ ಈ ಎರಡರಲ್ಲಿ ಒಂದು ಜಾಗದಲ್ಲಿಯೇ 2ನೇ ಏರ್ಪೋರ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಾಗಿದೆ.

ಸದ್ಯ ಕನಕಪುರ ರಸ್ತೆಯಲ್ಲಿ ಗುರುತಿಸಿರುವ ಎರಡು ಪ್ರದೇಶ ಮತ್ತು ನೆಲಮಂಗಲ - ಕುಣಿಗಲ್ ರಸ್ತೆಯಲ್ಲಿರುವ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಿಸಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಯುತ್ತಿದೆ. ಆದರೆ, ಏರ್ಪೋರ್ಟ್ ರೇಸ್ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಔಟ್ ಆಗಿದೆ. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಸಚಿವ ಎಂ.ಬಿ.ಪಾಟೀಲ್ ಅವರು, ವಿಮಾನ ನಿಲ್ದಾಣಕ್ಕೆ ಬಿಡದಿ ಸೂಕ್ತ ಸ್ಥಳವಲ್ಲ, ಹಾಗಾಗಿ, ಆ ಜಾಗವನ್ನು ಪರಿಶೀಲನೆ ನಡೆಸಲು ಹೋಗುವುದಿಲ್ಲ. ಕನಕಪುರದ ಹಾರೋಹಳ್ಳಿ ಮತ್ತು ನೆಲಮಂಗಲ-ಕುಣಿಗಲ್ ಮಾರ್ಗದಲ್ಲಿ ಇನ್ನೊಂದು ಸ್ಥಳವನ್ನು ನೋಡಿದ್ದೇವೆ ಎಂದು ಹೇಳಿದ್ದರು.

ಸುಮಾರು 5000 ಎಕರೆ ಭೂಮಿ ಅಗತ್ಯ
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸುಮಾರು 5000 ಎಕರೆ ಭೂಮಿ ಅಗತ್ಯವಿದೆ. ಹೀಗಾಗಿ ನೆಲಮಂಗಲ ಹಾಗೂ ಮೋಟಗಾನಹಳ್ಳಿ ಸೇರಿ ಎರಡು ಜಾಗದಲ್ಲಿಯೂ ಸುಮಾರು 5000ಕ್ಕೂ ಹೆಚ್ಚು ಎಕರೆ ವಿಶಾಲವಾದ ಪ್ರದೇಶವನ್ನು ಕೇಂದ್ರ ತಂಡವು ವೀಕ್ಷಣೆ ಮಾಡಿದೆ. ಇದರಲ್ಲಿ ಸರ್ಕಾರಿ ಭೂಮಿ ಯಾವ ಭಾಗದಲ್ಲಿ ಹೆಚ್ಚಾಗಿದೆಯೋ ಆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡಲು ಆದ್ಯತೆ ನೀಡಲಾಗುತ್ತಿದ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | BY Vijayendra: ಬೆಲೆ ಏರಿಕೆಯಿಂದ ಜನರ ಸಹನೆಯ ಕಟ್ಟೆ ಒಡೆಯುವ ಪರಿಸ್ಥಿತಿ- ವಿಜಯೇಂದ್ರ