#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bengaluru News: ಮುಪ್ಪು ಬಾಳ ಲೀಲೆಯ ಭಾಗವೆಂದು ಪರಿಗಣಿಸಿ: ಪ್ರೊ.ಎಂ.ಆರ್. ನಾಗರಾಜು

Bengaluru News: ಬೆಂಗಳೂರು ನಗರದ ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಸಂಗೀತ-ಉಪನ್ಯಾಸ-ಪುಸ್ತಕಾವಲೋಕನ ಕಾರ್ಯಕ್ರಮ ಜರುಗಿತು. ʼಮುಪ್ಪು ದೇಹಕ್ಕೂ ಅಥವಾ ಮನಸ್ಸಿಗೊʼ ಎಂಬ ವಿಷಯದ ಕುರಿತು ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊ.ಎಂ.ಆರ್. ನಾಗರಾಜು ಮಾತನಾಡಿದರು.

ಮುಪ್ಪು ಬಾಳ ಲೀಲೆಯ ಭಾಗವೆಂದು ಪರಿಗಣಿಸಿ: ಪ್ರೊ.ಎಂ.ಆರ್. ನಾಗರಾಜು

ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊ.ಎಂ.ಆರ್. ನಾಗರಾಜು ಮಾತನಾಡಿದರು.

Profile Siddalinga Swamy Feb 8, 2025 6:36 PM

ಬೆಂಗಳೂರು: ಮುಪ್ಪು ಬಾಳ ಲೀಲೆಯ ಭಾಗವೆಂದು ಪರಿಗಣಿಸಬೇಕು. ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಲು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊ.ಎಂ.ಆರ್. ನಾಗರಾಜು ತಿಳಿಸಿದರು. ಬೆಂಗಳೂರು ನಗರದ (Bengaluru News) ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ನಡೆದ ಸಂಗೀತ-ಉಪನ್ಯಾಸ-ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ʼಮುಪ್ಪು ದೇಹಕ್ಕೂ ಅಥವಾ ಮನಸ್ಸಿಗೊʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

2

ಮುಪ್ಪು ಬಾಳ ಲೀಲೆಯ ಭಾಗವೆಂದು ಪರಿಗಣಿಸಬೇಕು. ವಯಸ್ಸಾಗುವಿಕೆಯನ್ನು ಹೂವುಗಳು ಅರಳುವುದು ಮತ್ತು ಹಣ್ಣುಗಳು ಹಣ್ಣಾಗುವುದಕ್ಕೆ ಹೋಲಿಸಿದ ಅವರು, ದೈಹಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ಅನುಭವವನ್ನು ಬಳಸಿಕೊಳ್ಳಿ ಮತ್ತು ಕುತೂಹಲವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದ ಅವರು, ಸಾವಧಾನತೆ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಲೆಯಲ್ಲಿ ರಾಮಾಯಣ ನಾನು ಕಂಡಂತೆ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಖ್ಯಾತ ಕವಿ, ಕಥೆಗಾರ ಡಾ. ಚಿಂತಾಮಣಿ ಕೊಡ್ಲೆಕೆರೆ ಮಾತನಾಡಿ, ಕನಸುಗಳನ್ನು ನನಸಾಗಿಸಿಕೊಳ್ಳುವ ಹಟಕ್ಕೆ ಕಾಲದ ಮಿತಿ ಇಲ್ಲ. ಹಂಪಿಯ ಹಜಾರರಾಮ ದೇವಾಲಯದ ಚಿತ್ರಗಳನ್ನು ನೋಡಿದ ವಿದ್ಯಾರ್ಥಿಯೊಬ್ಬ, ನಿವೃತ್ತಿಯ ನಂತರ ಮಗ ಕೊಡಿಸಿದ ಕ್ಯಾಮರಾ ಮೂಲಕ ಅವುಗಳನ್ನು ಸೆರೆ ಹಿಡಿದು ದೇವಾಲಯದ ರಾಮಾಯಣ ಶಿಲ್ಪಕಲೆಗಳ ಉತ್ತಮ ಪುಸ್ತಕವನ್ನು ಸ್ವತಂತ್ರವಾಗಿ ಪ್ರಕಟಿಸಿ ಸಾಹಸ ಮೆರೆದಿದ್ದಾನೆ. ಕೃತಿಕಾರರಿಗೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ, ಛಾಯಾಗ್ರಹಣ, ಶಿಲ್ಪಕಲೆ ಯಾವುದರ ಹಿನ್ನೆಲೆಯೂ ಇಲ್ಲದೆ ಧೀಶಕ್ತಿ ಮಾತ್ರದಿಂದ ಈ ಕೆಲಸ ಆಗಿರುವುದು ದೈವ ಕೃಪೆ. ಮುಸ್ಲಿಂ ದೊರೆಗಳ ದಾಳಿಗೆ ತುತ್ತಾಗಿ ನಲುಗಿದ್ದ ನಾಡನ್ನು ಮತ್ತೆ ಸಾಂಸ್ಕೃತಿಕ ವೈಭವ ಮರಳುವಂತೆ ಮಾಡಿದ್ದ ವಿಜಯನಗರ ಅರಸರ ಪುನರುಜ್ಜೀವನ ಕಾರ್ಯವನ್ನು ಇಂದಿನ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ ಎಂದರು.

ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ವೀಣಾ ಜೋಶಿ ಅವರು ಮೊದಲಿಗೆ ಶುದ್ಧ ಸಾರಂಗ ರಾಗವನ್ನು ಪ್ರಸ್ತುತಪಡಿಸಿ, ಮೀರಾ ಭಜನ್, ಜಾನಪದ ಗೀತೆ, ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಜನಮನ ಗೆದ್ದರು. ಅವರಿಗೆ ಹಾರ್ಮೋನಿಯಂನಲ್ಲಿ ಪಂಡಿತ ನರಸಿಂಹ ಕುಲಕರ್ಣಿ ಹಾಗೂ ತಬಲಾದಲ್ಲಿ ಸುದೀಪ್ ಜೋಶಿ ಸಾತ್ ನೀಡಿದರು. ಇದೇ ವೇಳೆ ʼರಾಮಾಯಣ ನಾನು ಕಂಡಂತೆʼ ಕೃತಿ ರಚನೆ ಮಾಡಿದ ನಿವೃತ್ತ ಲೆಕ್ಕ ನಿಯಂತ್ರಣ ಅಧಿಕಾರಿ ಬಿ.ಸತ್ಯನಾರಾಯಣ ಹಾಗೂ ಕಲಾವಿದೆ ವೀಣಾ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ | SSLC preparatory Exam: ಫೆ.25ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಉಲಿಗೆಸ್ವಾಮಿ, ನಿವೃತ್ತ ನಿಯಂತ್ರಣಾಧಿಕಾರಿ ಸುಧಾ, ಸುಜಯ ನಾಗರಾಜ ಹಾಗೂ ಜಿ.ವಿ. ಹೆಗಡೆ, ಪ್ರಕಾಶ ಪೂರ್ಣಮಠ, ಸಿದ್ದಣ್ಣ ಸೊನ್ನದ, ವಾಸುದೇವ ಕಾರಂತ, ಪ್ರಭಾಕರ ಗಂಗೊಳ್ಳಿ ಮತ್ತು ಇತರರು ಉಪಸ್ಥಿತರಿದ್ದರು. ಹೇಮಂತ್ ಲಿಂಗಪ್ಪ ಸ್ವಾಗತಿಸಿದರು. ಎಂ.ಎ. ಮುರಾರಿ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು.