ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ? ʼಹೈದರಾಬಾದ್‌ ಕರ್ನಾಟಕʼ ಕ್ಕೆ

ಪಾಪ ಅವರೇನೂ ಕರ್ಣನ ಥರ ‘ತೊಟ್ಟ ಬಾಣ ತೊಡಲ್ಲ’ ಅಂತ ಶಪಥ ಮಾಡಿಲ್ಲ. ಹಾಗಾಗಿ ಮತ್ತೆ ಅದೇ ಹಳೆಯ ಭಟ್ಟರ ಡೈರೆಕ್ಷನ್ ಕ್ಯಾಪ್ ಅನ್ನು ತೊಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ, ‘ಗರಡಿ’, ‘ಕರಟಕ ದಮನಕ’ ಚಿತ್ರಗಳನ್ನ ನೋಡಿ “ಏನ್ ಭಟ್ರೇ, ಇತ್ತೀಚೆಗೆ ಕಾಣಿಸ್ತಾನೇ ಇಲ್ಲ" ಅಂತ ಪ್ರೀತಿಯ ದೂರು ಹೇಳಿದ ಪ್ರೇಕ್ಷಕರಿಗೆ ಮತ್ತೆ ರೆಗ್ಯುಲರ್ ಭಟ್ಟರು ಕಾಣಿಸಿಕೊಂಡಿ ದ್ದಾರೆ.

ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ?

ಹರಿ ಪರಾಕ್‌ ಹರಿ ಪರಾಕ್‌ Mar 30, 2025 7:58 AM

ತುಂಟರಗಾಳಿ

ಸಿನಿಗನ್ನಡ

ಫ್ರಮ್ ದಿ ಮೇಕರ್ಸ್ ಆಫ್ ಮುಂಗಾರು ಮಳೆ’ ಅನ್ನೋ ಟ್ಯಾಗ್ ಹೊತ್ತು ಈ ವಾರ ಬಿಡುಗಡೆ ಆದ ಚಿತ್ರ ‘ಮನದ ಕಡಲು’. ‘ಮುಂಗಾರು ಮಳೆ’ ಸಿನಿಮಾ ನಿರ್ಮಿಸಿದ ಇ. ಕೃಷ್ಣಪ್ಪ ಅವರ ಸಿನಿಮಾ ಇದಾಗಿರೋದ್ರಿಂದ ‘ಮನದ ಕಡಲು’ ಸಿನಿಮಾವನ್ನ ‘ಇಕೆ’ ನಿರ್ಮಾಣದ ‘ಎಂಕೆ’ ಅಂತನೂ ಹೇಳಬಹುದು. ಸಿನಿಮಾ ವಿಷಯಕ್ಕೆ ಬಂದ್ರೆ ಇದು ಸಂಪೂರ್ಣ ಹೊಸಬರ ಚಿತ್ರ. ಈ ಚಿತ್ರ ನೋಡೋದಿಕ್ಕೆ ಇರೋ ಏಕೈಕ ಕಾರಣ ಅಂದ್ರೆ ಅದು ನಿರ್ದೇಶಕ ಯೋಗರಾಜ್ ಭಟ್ ಅವರು. ಭಟ್ಟರ ಕಳೆದ ಕೆಲವು ಸಿನಿಮಾಗಳ ಕುರಿತು ಪ್ರೇಕ್ಷಕರಿಗೆ ಇದ್ದ ದೂರು ಅಂದ್ರೆ, “ಈ ಚಿತ್ರ ಭಟ್ಟರ ಸಿನಿಮಾ ತರಹ ಇಲ್ಲ" ಅನ್ನೋದು. ಆ ಅಪವಾದವನ್ನ ಭಟ್ಟರು ಇಲ್ಲಿ ಸಂಪೂರ್ಣ ತೊಡೆದುಹಾಕಿದ್ದಾರೆ. ತಮ್ಮ ಎಂದಿನ ಮತ್ತು ಹಿಂದಿನ ಶೈಲಿಯ ಮತ್ತೆ ಸಿನಿ ಮಾ ಮಾಡಿದ್ದಾರೆ.

ಪಾಪ ಅವರೇನೂ ಕರ್ಣನ ಥರ ‘ತೊಟ್ಟ ಬಾಣ ತೊಡಲ್ಲ’ ಅಂತ ಶಪಥ ಮಾಡಿಲ್ಲ. ಹಾಗಾಗಿ ಮತ್ತೆ ಅದೇ ಹಳೆಯ ಭಟ್ಟರ ಡೈರೆಕ್ಷನ್ ಕ್ಯಾಪ್ ಅನ್ನು ತೊಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ, ‘ಗರಡಿ’, ‘ಕರಟಕ ದಮನಕ’ ಚಿತ್ರಗಳನ್ನ ನೋಡಿ “ಏನ್ ಭಟ್ರೇ, ಇತ್ತೀಚೆಗೆ ಕಾಣಿಸ್ತಾನೇ ಇಲ್ಲ" ಅಂತ ಪ್ರೀತಿಯ ದೂರು ಹೇಳಿದ ಪ್ರೇಕ್ಷಕರಿಗೆ ಮತ್ತೆ ರೆಗ್ಯುಲರ್ ಭಟ್ಟರು ಕಾಣಿಸಿಕೊಂಡಿದ್ದಾರೆ.

‘ಸಾವನ್ನ ಕೂಗಿ ಕರೆಯಬಾರದು, ಬದುಕಿಗೆ ನೋವಾಗುತ್ತೆ’ ಅನ್ನೋ ಅವರ ಮಾತಿನಲ್ಲಿ ಒಂದಿಡೀ ಚಿತ್ರದ, ಅಷ್ಟೇಕೆ ಬದುಕಿನ ಸಾರವೇ ಇದೆ. ಬಳ್ಳಿಯಂತೆ ಬಳುಕುವ ಕಳ್ಳಿ, ಮಳ್ಳಿಯ ರಂಥ ಹುಡುಗಿಯ ಹಿಂದೆ ಬೀಳೋ ಹುಡುಗರ ಕಮರ್ಷಿಯಲ್ ಕಥೆಗಳನ್ನು ತುಂಬಾ ನೋಡಿರ್ತೀರಿ. ಆದರೆ ಇಲ್ಲಿ ನಾಯಕಿಗಾಗಿ ಮಧುವಂತಿ ಬಳ್ಳಿಯನ್ನು ಹುಡುಕಿಕೊಂಡು ಜಲಪಾತದ ಅಂಚಿಗೆ ಹೋಗುತ್ತಾನೆ ನಾಯಕ.

ಇದನ್ನೂ ಓದಿ: Hari Paraak Column: ಹನಿ ಹನಿ 'ಫ್ರೇಮ್‌' ಕಹಾನಿ

ಹಾಗಾಗಿ ಜೋಗದಲ್ಲಿ ಕಳೆದು ಹೋಗುವ ‘ಮುಂಗಾರು ಮಳೆ’ ಚಿತ್ರದ ನಾಯಕನಂತೆ ಇವ ನೂ ‘ಜೋಗ’ಯ್ಯ ಅನ್ನಿಸಿದರೆ ಅಚ್ಚರಿ ಇಲ್ಲ. ಒಟ್ಟಾರೆ ಹೇಳೋದಾದ್ರೆ, ತಮ್ಮ ಟಿಪಿಕಲ್ ಶೈಲಿಯಲ್ಲಿ ಭಟ್ಟರು ಮಾಡಿರೋ ಈ ‘ಮನದ ಕಡಲು’ ಸಿನಿಮಾ ಹೇಗಿದೆ ಅಂತ ಬಂದಾಗ ಭಟ್ಟರು ಅನ್ನೋ ಸಮುದ್ರದ ಮಟ್ಟಕ್ಕೆ ಇದೆಯಾ ಅಂತ ಕೇಳಿದ್ರೆ ನಿಖರ ಉತ್ತರ ಸಿಗೋ ವಿಷಯದಲ್ಲಿ ಕಮರ್ಷಿಯಲ್ ಪ್ರೇಕ್ಷಕರಿಗೆ ಒಂಚೂರು ಗೊಂದಲ ಆಗಬಹುದು.

ಆದರೆ, ಪ್ರೀತಿ-ಪ್ರೇಮದ ಬಗ್ಗೆ ಒಂದು ಕಮಿಟ್ಮೆಂಟ್, ಸಾವು-ಬದುಕಿನ ಬಗ್ಗೆ ಒಂದು ದಿವ್ಯ ಬೆರಗು ಇಟ್ಕೊಂಡು ನೋಡಿದಾಗ, ಮಾಮೂಲಿ ಭಾಷೆಯಲ್ಲಿ ‘ಮನದ ಕಡಲು’ ಚಿತ್ರವನ್ನು ‘ನೋಡಬಹುದಾದ ಚಿತ್ರ’ ಅಂತ ಹೇಳಬಹುದು. ಅಥವಾ ಸಿನಿಮಾ ಹೆಸರಲ್ಲಿ ಕಡಲು ಅಂತಿದೆ ಅನ್ನೋ ಕಾರಣಕ್ಕೆ ‘ಸ್ತ್ರೀ ಲೆವೆಲ್ ಸಿನಿಮಾ’ ಅಂತ ಹೇಳಬಹುದು.

ಲೂಸ್‌ ಟಾಕ್:‌ ಮಹೇಂದ್ರ ಸಿಂಗ್‌ ಧೋನಿ

ಏನ್ ತಲಾ ಅವರೇ, 15 ವರ್ಷ ಆದ್ಮೇಲೆ ನಿಮ್ಮೂರಲ್ಲಿ ಆರ್‌ಸಿಬಿ ಮೇಲೆ ಸೋತ್ರಲ್ಲ..

- ಹಲೋ 17 ವರ್ಷ ಆದ್ಮೇಲೆ ಕಣ್ರೀ ಅದು

ಅಯ್ಯೋ, ಮಧ್ಯೆ 2 ವರ್ಷ ತಲೆಮರೆಸಿಕೊಂಡು ಗುಳೆ ಹೋಗಿದ್ರ ಅದನ್ನೂ ಲೆಕ್ಕ ಹಿಡೀರಿ ಸ್ವಾಮಿ.

- ಸುತ್ತಿ ಬಳಸಿ ಅಲ್ಲಿಗೇ ಬಂದ್ರಾ?.. ಆದ್ರೂ ತಲಾ ಕೊನೇ ಸಲ ಕಪ್ ಗೆಲ್ತೀನಿ ಅಂತ ಬಂದು ಆರ್‌ಸಿಬಿ ಮೇಲೆ ಸೋತ ಅನ್ನೋದು ಮಾತ್ರ ನನಗೆ ಕಪ್ಪು ಚುಕ್ಕೆ

ಸರಿ ನಿಮ್ಮ ಪ್ರಕಾರ ಆರ್ ಸಿಬಿ ಮೇಲೆ ಸೋಲೋಕೆ ಪ್ರಮುಖ ಕಾರಣ ಏನು?

- ಕಾರಣಗಳೇನೋ ತುಂಬಾ ಇವೆ. ಅವುಗಳಲ್ಲಿ ಪ್ರಮುಖ ಕಾರಣ ಆರ್‌ಸಿಬಿ.

ಈ ವರ್ಷ ಕಪ್ ಗೆಲ್ಲದೇ ಇದ್ರೆ ಮುಂದಿನ ವರ್ಷನೂ ಆಡ್ತೀರಾ?

- ಇಲ್ಲ ಕಣ್ರೀ, ಮುಂದಿನ ವರ್ಷದಿಂದ ‘ಕಾಮೆಂಟ್ರಿ ಬಾಕ್ಸ್’ ಆಫೀಸ್ ಕಾ ಸುಲ್ತಾನ್ ಆಗ್ತೀನಿ.

ಅಂದ‌ ಹಾಗೆ, ನಿಮ್ಮ ಮನೆ ಮುಂದೆ ಹೈ ಸೆಕ್ಯುರಿಟಿ ಹಾಕಿದ್ದಾರಂತೆ?

- ಹೌದು, ಮನೆ ಮುಂದೆ ಸಿಎಸ್‌ಕೆ ಅಭಿಮಾನಿಗಳು ಅನುಮಾನಾಸ್ಪದವಾಗಿ ಓಡಾಡ್ತಾ ಇದ್ದಾರೆ ಅಂತ ವಾಚ್‌ಮನ್ ಹೇಳಿದ, ಅದಕ್ಕೆ ನಾನೇ ಸೆಕ್ಯುರಿಟಿ ಹಾಕಿಸ್ದೆ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಅಂಡ್ ಫ್ಯಾಮಿಲಿ ಅಂದ್ರೆ ಖೇಮುಶ್ರೀ, ಮರಿಖೇಮು, ಅವರ ಜತೆಗೆ ಖೇಮುವಿನ ಅಜ್ಜ-ಅಜ್ಜಿ ದುಬೈಗೆ ಹೋಗಿ ಸೆಟ್ಲ್ ಆದ್ರು. ಅವರ ಉಳಿದ ಸಂಬಂಽಕರೆ ಇಂಡಿಯಾದ ಇದ್ರು. ದುಬೈನ ಹವಾಮಾನ ಒಗ್ಗದೆ ಅಜ್ಜಿಗೆ ಅನಾರೋಗ್ಯ ಕಾಡತೊಡಗಿತು. ಎಷ್ಟೇ ಪ್ರಯತ್ನಪಟ್ಟರೂ ಅಜ್ಜಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅಜ್ಜಿ ತೀರಿಹೋದ ಸುದ್ದಿಯನ್ನು ಇಂಡಿಯಾದಲ್ಲಿದ್ದ ಸಂಬಂಧಿಕರಿಗೆ ಮುಟ್ಟಿಸಿದ ಖೇಮು “ಅಜ್ಜಿಯ ಆಸೆಯಂತೆ ಅವಳನ್ನು ನಮ್ಮ ಹುಟ್ಟೂರ ಮಣ್ಣು ಮಾಡಬೇಕು.

ಹಾಗಾಗಿ ಆಕೆಯ ಬಾಡಿಯನ್ನು ಇಲ್ಲಿಂದ ಕಳಿಸುತ್ತೇನೆ" ಎಂದು ಹೇಳಿದ. ಸರಿ ದುಬೈನಿಂದ ಅಜ್ಜಿಯ ದೇಹ ಕಫಿನ್ ಬಾಕ್ಸ್‌ನಲ್ಲಿ ಇಂಡಿಯಾಗೆ ಬಂತು. ಸಂಬಂಧಿಕರು ಅದನ್ನು ಮನೆಗೆ ತಂದರು. ಬಾಕ್ಸ್ ಓಪನ್ ಮಾಡಿದರೆ ಅದರಂದು ಲೆಟರ್ ಇತ್ತು. ಅದರಲ್ಲಿ ಖೇಮು ಹೀಗೆ ಬರೆದಿದ್ದ: “ನೋಡಿ, ಅಜ್ಜಿಯ ಕೊರಳಲ್ಲಿ 2-3 ಬಂಗಾರದ ಸರಗಳಿವೆ. ಅವನ್ನು ಎಲ್ಲ ಹೆಣ್ಣುಮಕ್ಕಳೂ ಸಮನಾಗಿ ಹಂಚಿಕೊಳ್ಳಿ. ಜತೆಗೆ ಕೈಯಲ್ಲಿ ಬಳೆಗಳೂ ಇವೆ, ಅವನ್ನೂ ಅಷ್ಟೆ.

ಇನ್ನು ಚಿಂಟು ರೀಬಾಕ್ ಶೂ ಬೇಕಂತ ಹೇಳಿದ್ದ, ಅದನ್ನು ಅಜ್ಜಿಯ ಕಾಲಿಗೆ ಹಾಕಿ ಕಳಿಸಿದ್ದೇನೆ. ಅಜ್ಜಿಯ ಕೈಯಲ್ಲಿ ರ‍್ಯಾಡೋ ವಾಚ್ ಇದೆ, ಅದನ್ನು ಪಿಂಟುಗೆ ಕೊಡಿ. ಅಜ್ಜಿ ಉಟ್ಟುಕೊಂಡಿರುವ ಸೀರೆ ತುಂಬಾ ಕಾಸ್ಟ್ಲಿ. ಅದನ್ನು ರೇವತಿಗೆ ಕೊಡಿ. ಕೈ ಬೆರಳಲ್ಲಿರೋ ವಜ್ರದ ಉಂಗುರವನ್ನು ನಮ್ಮ ಸುಮತಿಗೆ ಕೊಡಿ. ಇನ್ನೊಂದು ಮುಖ್ಯ ವಿಷಯ. ಯಾರಿ ಗಾದರೂ ಇನ್ನೇನಾದರೂ ಬೇಕಿದ್ದರೆ ಈಗಲೇ ಹೇಳಿಬಿಡಿ.... ಯಾಕೋ ಇತ್ತೀಚೆಗೆ ಅಜ್ಜನಿಗೂ ಹುಷಾರಿಲ್ಲ!".

ಲೈನ್‌ ಮ್ಯಾನ್

ಐಪಿಎಲ್ ‘ಕಪ್’ ಗೆದ್ದರೆ ಕೊಡುವ ಪ್ರೈಜ್ ಮನಿ

-‘ಕಪ್ಪು’ ಹಣ ‌

ಅಮ್ಮಂದಿರ ಸಮ್ಮೇಳನ ನಡೆದರೆ ಅದಕ್ಕೆ ಬರುವ ತಾಯಂದಿರ ಗುಂಪನ್ನು ಏನಂತಾರೆ?

- ‘ಮಾ’ಬ್

ನಾಯಿಗಳಿಗೆ ಇಷ್ಟವಾಗುವ, ಇಲಿಗಳಿಗೆ ಇಷ್ಟವಾಗದ ವ್ಯಕ್ತಿ

- ‘ಬೋನಿ’ ಕಪೂರ್

ಬೆಲೆಬಾಳುವ ಮುತ್ತುಗಳನ್ನು ಬಚ್ಚಿಡುವ ಜಾಗ

- ‘ಲಿಪ್’ ಲಾಕರ್

ಬರೀ ಇನ್‌ಕಮಿಂಗ್ ಕಾಲ್ ಗೋಸ್ಕರ ಇಟ್ಕೊಂಡಿರೋ ಮೊಬೈಲ್ ಪೋನ್

- ‘ಹಿಯರ್’ ಫೋನ್

ರೈಲ್ವೆ ಇಲಾಖೆಯಲ್ಲಿ ನೀಡುವ ತರಬೇತಿ

- ‘ಟ್ರೈನಿಂ’ಗ್

ಓಟ್ ಹಾಕಲಿ ಅಂತ ಹಾಕಿಸುವ ಊಟಕ್ಕೆ ಏನಂತಾರೆ?

- ‘ಓಟ್’ ಮೀಲ್ಸ್‌

ಪೋಲೋಗೆ ವಿರುದ್ಧಾರ್ಥಕ ಪದ ಏನು?

- ಪೋಗಾದಿರೆಲೋ

ಮನೇಲ್ ಕೂತು ಬರೀ ಸಿನಿಮಾ ನೋಡುವವರ ಪಾಲಿಗೆ

- Everyday is Friday

ಎಸ್‌ಆರ್‌ಎಚ್ ಮತ್ತು ಆರ್ ಸಿಬಿ ನಡುವಿನ ಮ್ಯಾಚ್ ಟೈ ಆದ್ರೆ ಪ್ರಶಸ್ತಿ ಯಾರಿಗೆ?

- ‘ಹೈದರಾಬಾದ್ ಕರ್ನಾಟಕ’ಕ್ಕೆ