Stabbing Case: ಅಕ್ಕನನ್ನು ಮನೆಗೆ ಬಾ ಎಂದಿದ್ದಕ್ಕೆ ಬಾವನಿಗೇ ಚಾಕುವಿನಿಂದ ಇರಿದ ಬಾಮೈದ!
Stabbing Case: ಗಂಡ ಹೆಂಡತಿಯ ಮಧ್ಯೆ ಜಗಳವಾಗಿ, ಹೆಂಡತಿ ತವರು ಮನೆ ಸೇರಿದ್ದಳು. ಆದರೆ ಪತಿ ತನ್ನ ಅಣ್ಣನ ಮದುವೆ ಹಿನ್ನೆಲೆ ಪತ್ನಿಯನ್ನು ಮನೆಗೆ ಬರುವಂತೆ ಕರೆದಿದ್ದ. ಇದರಿಂದ ಕೋಪಗೊಂಡ ಬಾಮೈದ ಮತ್ತು ಆತನ ಸ್ನೇಹಿತರು ಸೇರಿ, ಬಾವನನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಕಲಬುರಗಿ: ಹೆಂಡತಿಯನ್ನ ಮನೆಗೆ ಬಾ ಎಂದು ಕರೆದಿದ್ದಕ್ಕೆ ಬಾವನಿಗೇ ಬಾಮೈದ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗಾಜಿಪುರದಲ್ಲಿ ನಿವಾಸಿ ಆನಂದ್ ಎಂಬಾತನಿಗೆ ಟೋನಿ ಎನ್ನುವ ಯುವಕ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎಂಬ ಯುವತಿಯನ್ನು ಪ್ರೀತಿಸಿ ಆನಂದ್ ಮದುವೆಯಾಗಿದ್ದ. ಬಳಿಕ ಗಂಡ ಹೆಂಡತಿಯ ಮಧ್ಯೆ ಜಗಳವಾಗಿ, ಹೆಂಡತಿ ಸ್ನೇಹಾ ತವರು ಮನೆ ಸೇರಿದ್ದಳು. ಈಗ, ಆನಂದ್ ತನ್ನ ಅಣ್ಣನ ಮದುವೆ ಹಿನ್ನೆಲೆ ಸ್ನೇಹಾಳನ್ನ ಮನೆಗೆ ಬರುವಂತೆ ಕರೆದಿದ್ದ. ಇದರಿಂದ ಕೋಪಗೊಂಡ ಬಾಮೈದ ಟೋನಿ ಮತ್ತು ಆತನ ಸ್ನೇಹಿತರು ಸೇರಿ, ಬಾವನನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಾಯಾಳು ಆನಂದ್ಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮ್ ಕೇರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Self Harming: ಪತಿ ಕಿರುಕುಳ; ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ!
ಮುಸ್ಲಿಂ ಯುವತಿ ಜತೆಗಿದ್ದ ಹಿಂದು ಯುವಕನ ಮೇಲೆ ಹಲ್ಲೆ!
ಬೆಂಗಳೂರು: ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ (Moral policing) ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಕೂಟರ್ನಲ್ಲಿ ಕುಳಿತಿದ್ದ ಹಿಂದು ಯುವಕ- ಮುಸ್ಲಿಂ ಯುವತಿಯ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಲಾಗಿತ್ತು. ಯುವಕ -ಯುವತಿಯ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂಜೆ ಹಿಂದು ಯುವಕನ ಜತೆ ಮುಸ್ಲಿಂ ಯುವತಿ ಇದ್ದದ್ದನ್ನು ಕಂಡು, ಹಿಂದೂ ಯುವಕನ ಜತೆಗೆ ಯಾಕೆ ಇದ್ದೀಯಾ ಎಂದು ಪ್ರಶ್ನಿಸಿದ್ದ ಆರೋಪಿಗಳು, ಹಿಂದು ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸಂತ್ರಸ್ತರು ದೂರು ಸಲ್ಲಿಸಿದ ನಂತರ ಪ್ರಕರಣ ದಾಖಲಿಸಿಕೊಂಡ ಚಂದ್ರಾ ಲೇಔಟ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಂದ್ರಾಲೇಔಟ್ನ ಪಾರ್ಕ್ ಬಳಿ ಬೆಳಗ್ಗೆ ಸ್ಕೂಟರ್ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ಗುಂಪೊಂದು ಬಂದು ಕಿರುಕುಳ ನೀಡಿತ್ತು. ನೀವಿಬ್ಬರು ಇಲ್ಲಿ ಏನು ಮಾಡುತ್ತೀದ್ದೀರಿ? ಇದು ನಮ್ಮ ಏರಿಯಾ” ಎಂದು ಹೇಳಿದ ಗುಂಪು, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು. ಆ ಯುವಕ, ಯುವತಿ “ನಾವು ಸ್ನೇಹಿತರು, ಮಾತಾಡುತ್ತಿದ್ದೇವೆ” ಎಂದು ಹೇಳಿದರೂ, ಆ ಗ್ಯಾಂಗ್ ಕಿರುಕುಳ ನೀಡಿ ಹಲ್ಲೆ ಮಾಡಿದೆ. ಬುರ್ಕಾ ಧರಿಸಿ, ಹಿಂದು ಹುಡುಗನ ಜೊತೆ ಯಾಕೆ ಕುಳಿತುಕೊಂಡಿದ್ದೀಯಾ ಎಂದು ಆಕೆಗೆ ಪ್ರಶ್ನೆ ಮಾಡಿದ್ದಾರೆ. ನಾವು ಸುಮ್ಮನೇ ಕುಳಿತು ಮಾತನಾಡುತ್ತಿದ್ದೆವು ಎಂದು ಹೇಳಿದರೂ ಕೇಳದೆ, ಯುವತಿಯ ಜಡೆಯನ್ನು ಹಿಡಿದು ಎಳೆದು, ಇಬ್ಬರ ಮೇಲೂ ಹೊಡೆದು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ತಂದೆ ತಾಯಿಗೆ ಹೇಳುತ್ತೇವೆ ಅವರ ನಂಬರ್ ಕೊಡಿ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಯುವಕನ ಮೇಲೆ ಹಲ್ಲೆ ಮಾಡಿರುವುದನ್ನು ವಿಡಿಯೊ ಮಾಡಿಕೊಳ್ಳಲಾಗಿದೆ. ನಂತರ ಆ ಗ್ಯಾಂಗ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಹಲ್ಲೆಗೆ ಒಳಗಾದ ಯುವಕ, ಯುವತಿ ಸ್ಥಳೀಯ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರು ಸೈಯದ್, ಶಾಹಿಲ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ದೌರ್ಜನ್ಯ, ಹಲ್ಲೆ ಆರೋಪಗಳನ್ನು ದಾಖಲಿಸಲಾಗಿದೆ.