Kerala BJP: ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಸರ್ವಾನುಮತದಿಂದ ಆಯ್ಕೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಣೆ
Kerala BJP: ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ, ಖ್ಯಾತ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಇಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇರಳ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಘೋಷಿಸಿದರು.


ನವದೆಹಲಿ: ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ, ಖ್ಯಾತ ಉದ್ಯಮಿ ರಾಜೀವ್ ಚಂದ್ರಶೇಖರ್ (Rajeev Chandrashekhar) ಅವರನ್ನು ಇಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಕೇರಳ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಘೋಷಿಸಿದರು. ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೇರಳ ಬಿಜೆಪಿ ಹೊಸ ಎತ್ತರಕ್ಕೆ ಬೆಳೆಯಲಿದೆ. ಕೇರಳದಲ್ಲಿ ಬಿಜೆಪಿಗೆ ಶೇ.19 ರಷ್ಟು ಮತ ಹಂಚಿಕೆಯಾಗಿದ್ದು, ಭವಿಷ್ಯದಲ್ಲಿ ರಾಜೀವ್ ಅವರ ನಾಯಕತ್ವದಲ್ಲಿ ಬಿಜೆಪಿ ಇಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದೊಂದಿಗೆ ಕೇರಳದ ಅಭಿವೃದ್ಧಿಗೂ ನೂತನ ಅಧ್ಯಕ್ಷರು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಸ್ಪಷ್ಟ ನಿಲುವು ಮತ್ತು ಹೊಸ ಹೊಸ ಯೋಜನೆ, ಯೋಚನೆಗಳನ್ನು ಹೊಂದಿದವರಾಗಿದ್ದಾರೆ. ರಾಜೀವ್ ಅವರು ಒಬ್ಬ ಉದ್ಯಮಿ ಆಗಿದ್ದರೂ ವಿಶೇಷವಾಗಿ ದೂರಸಂಪರ್ಕ ವಲಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಚಂದ್ರಶೇಖರ್ ಅವರ ಉದ್ಯಮಶೀಲತೆಯನ್ನು ಮೆಚ್ಚಿ ಸಚಿವರನ್ನಾಗಿ ಮಾಡಿದ್ದರು. ಈಗ ಕೇರಳದಲ್ಲಿ ಮತ್ತೊಂದು ಹೊಸ ಜವಾಬ್ದಾರಿ ನೀಡಿದ್ದಾರೆ. ಒಬ್ಬ ಒಳ್ಳೇ ಹೋರಾಟಗಾರ ಮತ್ತು ಸಂಘಟಕರಾಗಿ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಜೋಶಿ ಹೇಳಿದರು.
ರಾಜೀವ್ ಚಂದ್ರಶೇಖರ್ ಅವರನ್ನು 25 ವರ್ಷಗಳಿಂದ ಬಲ್ಲೆ. ಅವರೊಬ್ಬ ಬಲಿಷ್ಠ ಕೇರಳಿಗ ಆಗಿದ್ದರೂ ಬೆಂಗಳೂರಿನಲ್ಲಿ ಉತ್ತಮ ಮೂಲಸೌಕರ್ಯಕ್ಕಾಗಿ ವೇದಿಕೆ ರಚಿಸಿ ಕೆಲಸ ಮಾಡಿದರು. ಕೇರಳಕ್ಕೆ ಸದ್ಯ ಇಂಥವರ ಅಗತ್ಯವಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿ ದೇಶಾದ್ಯಂತ ಬಲಿಷ್ಠವಾಗಿದೆ
ಕೇರಳ, ಕರ್ನಾಟಕ, ತಮಿಳುನಾಡು ಹೊರತುಪಡಿಸಿ ಬಹುತೇಕ, ದೇಶಾದ್ಯಂತ ಬಿಜೆಪಿ ಆಡಳಿತದಲ್ಲಿದೆ. ಪ್ರಬಲ ವಿರೋಧ ಪಕ್ಷವಾಗಿಯೂ ಇದ್ದೇವೆ. ಭಾರತದಾದ್ಯಂತ ಇರುವ ಏಕೈಕ ಪಕ್ಷ ಎಂದರೆ ಬಿಜೆಪಿ ಎಂದು ಜೋಶಿ ಪ್ರತಿಪಾದಿಸಿದರು.
ಕೇರಳದ ನಿರ್ಗಮಿತ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಧ್ವಜವನ್ನು ರಾಜೀವ್ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿದರು.
ಈ ವೇಳೆ ಮಾತನಾಡಿದ ಸುರೇಂದ್ರನ್, ಬಿಜೆಪಿ ಕೇವಲ ಹಿಂದೂಗಳನ್ನಷ್ಟೇ ಒಳಗೊಂಡಿಲ್ಲ. ಎಲ್ಲರಿಗೂ ಸೇರಿದ ಪಕ್ಷ. ಕೇರಳವೇ ಇದಕ್ಕೊಂದು ಉತ್ತಮ ನಿದರ್ಶನ ಎಂದರು.
ಬಿಜೆಪಿ ಸರ್ವರನ್ನೂ ಒಳಗೊಂಡ ಪಕ್ಷ
ಕೇರಳ ಬಿಜೆಪಿಯಲ್ಲಿ ಜಿಲ್ಲೆ ಮಾತ್ರವಲ್ಲ, ತಳ ಮಟ್ಟದಿಂದಲೂ ಸರ್ವ ಸಮುದಾಯದವರಿಗೂ ತಮ್ಮ ಪಕ್ಷ ಪದಾಧಿಕಾರಿಗಳ ಸ್ಥಾನ ನೀಡಿದೆ. 30 ಜಿಲ್ಲಾ ಅಧ್ಯಕ್ಷರ ಪೈಕಿ ಮೂವರು ಕ್ರಿಶ್ಚಿಯನ್ನರಿದ್ದರೆ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಹಾಗೂ ಮಹಿಳೆಯರೂ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಬೇರೆ ಯಾವುದೇ ಪಕ್ಷದಲ್ಲೂ ಹೀಗೆ ಪ್ರಾಶಸ್ತ್ಯ ನೀಡಲಾಗಿಲ್ಲ ಎಂದು ಹೇಳಿದರು.
ಕೇರಳ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತನಾಡಿ, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್ಸಿನ ಹಾಗೆ ಸಂಸತ್ತಿನಲ್ಲಿ ಮೂವರು ಸದಸ್ಯರನ್ನು ಒಂದೇ ಕುಟುಂಬದವರನ್ನು ಹೊಂದಿಲ್ಲ. ಕೇರಳದಲ್ಲಿ ನಮ್ಮ ಪಕ್ಷದಲ್ಲಿ ಒಬ್ಬ ಚುನಾಯಿತ ಸದಸ್ಯರೂ ಯಾವುದೇ ನಾಯಕನ ಸಂಬಂಧಿಯಾಗಿಲ್ಲ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಪ್ರಲ್ಹಾದ್ ಜೋಶಿ
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಮತ್ತು ಅನಿಲ್ ಆಂಟನಿ, ಪಿಸಿ ಜಾರ್ಜ್ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.