Tahawwur Rana: ಕಸ್ಟಡಿಯಲ್ಲಿರುವ ತಹವ್ವೂರ್ ರಾಣಾ ಕುರಾನ್ ಸೇರಿ ಬೇಡಿಕೆ ಇಟ್ಟ ಮೂರು ವಸ್ತುಗಳು ಯಾವುದು?
26/11ರ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ಎನ್ಐಎ ರಾಣಾನನ್ನು ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿತು.ತಹವ್ವೂರ್ ರಾಣಾನನ್ನು ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್ಐಎ ಪ್ರಧಾನ ಕಚೇರಿಯೊಳಗೆ ಅತ್ಯಂತ ಭದ್ರತೆಯ ಸೆಲ್ನಲ್ಲಿ ಇರಿಸಲಾಗಿದೆ.


ನವದೆಹಲಿ: 26/11ರ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ಹುಸೇನ್ ರಾಣಾನನ್ನು (Tahawwur Rana) ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ಎನ್ಐಎ ರಾಣಾನನ್ನು ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿತು.ತಹವ್ವೂರ್ ರಾಣಾನನ್ನು ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್ಐಎ ಪ್ರಧಾನ ಕಚೇರಿಯೊಳಗೆ ಅತ್ಯಂತ ಭದ್ರತೆಯ ಸೆಲ್ನಲ್ಲಿ ಇರಿಸಲಾಗಿದ್ದು , ಭದ್ರತಾ ಸಿಬ್ಬಂದಿಗಳು 24/7 ಕಾವಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಣಾನಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗುತ್ತಿಲ್ಲ, ಆತನನ್ನು ಸಾಮಾನ್ಯ ಖೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಇರುವ ಬಂಧಿತ ರಾಣಾ ಅಧಿಕಾರಿಗಳ ಬಳಿ ಇದೀಗ ಮೂರು ವಸ್ತುಗಳನ್ನು ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ. ರಾಣಾನ ಕೋರಿಕೆಯ ಮೇರೆಗೆ ಕುರಾನ್ ಪ್ರತಿಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನ ಕಚೇರಿಯಲ್ಲಿರುವ ಆತನ ಸೆಲ್ನಲ್ಲಿ ಪ್ರತಿದಿನ ಐದು ಬಾರಿ ನಮಾಜ್ ಮಾಡುವುದನ್ನು ಗಮನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ನಾವು ಒದಗಿಸಿದ ಕುರಾನ್ ಪ್ರತಿಯನ್ನು ಅವನು ಕೇಳಿದನು. ಅವನು ತನ್ನ ಸೆಲ್ನಲ್ಲಿ ಐದು ಬಾರಿ ನಮಾಜ್ ಮಾಡುತ್ತಿರುವುದನ್ನು ಕಾಣಬಹುದು" ಎಂದು ಅಧಿಕಾರಿಯೊಬ್ಬರು ಹೇಳಿದರು, ಕುರಾನ್ ಜೊತೆಗೆ, ರಾಣಾ ಪೆನ್ನು ಮತ್ತು ಕಾಗದವನ್ನು ಕೇಳಿದ್ದಾನೆ ಅದನ್ನೂ ಒದಗಿಸಲಾಗಿದೆ. ಆತ ಬೇರೆಯಾವುದನ್ನೂ ಬೇಡಿಕೆ ಇಟ್ಟಿಲ್ಲ ಎಂದು ತಿಳಿದು ಬಂದಿದೆ.
ನ್ಯಾಯಾಲಯದ ನಿರ್ದೇಶನದಂತೆ, ರಾಣಾಗೆ ಪ್ರತಿ ದಿನ ಬಿಟ್ಟು ದಿನ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ (DLSA) ಒದಗಿಸಿದ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಮತ್ತು ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ. ಅಮೆರಿಕದಿಂದ ರಾಣಾ ಅವರನ್ನು ಹಸ್ತಾಂತರಿಸಿದ ನಂತರ ದೆಹಲಿ ನ್ಯಾಯಾಲಯವು ತನಿಖಾ ಸಂಸ್ಥೆಗೆ 18 ದಿನಗಳ ಕಸ್ಟಡಿಗೆ ನೀಡಿದ ನಂತರ ಶುಕ್ರವಾರ ಬೆಳಿಗ್ಗೆ ಅವರನ್ನು ಎನ್ಐಎ ಪ್ರಧಾನ ಕಚೇರಿಗೆ ಕರೆತರಲಾಯಿತು. 16 ವರ್ಷಗಳ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಹವ್ವೂರ್ ರಾಣಾ ಅವರ ನಿಖರವಾದ ಪಾತ್ರವನ್ನು ತಿಳಿದುಕೊಳ್ಳಲು NIA ಅಧಿಕಾರಿಗಳ ತಂಡವು ರಾಣಾ ಅವರನ್ನು ವಿಚಾರಣೆ ನಡೆಸುತ್ತಿದೆ .
ಈ ಸುದ್ದಿಯನ್ನೂ ಓದಿ:Tahawwur Rana: ತಹಾವ್ವುರ್ ರಾಣಾನನ್ನು ಕೂಡಲೇ ಗಲ್ಲಿಗೇರಿಸಿ- 26/11 ಮುಂಬೈ ದಾಳಿಗೆ ಬಲಿಯಾಗಿದ್ದ ತುಕಾರಾಂ ಓಂಬ್ಳೆ ಸಹೋದರ ಒತ್ತಾಯ
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾನನ್ನು ಗುರುವಾರ ಸಂಜೆ ಬಿಗಿಭದ್ರತೆಯಲ್ಲಿ ಭಾರತಕ್ಕೆ ಕರೆ ತರಲಾಗಿದೆ. ಈತನ ಮೇಲೆ ದಿನದ 24 ಗಂಟೆಯೂ ಮಾನವ ಮತ್ತು ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಲೋಧಿ ರಸ್ತೆಯಲ್ಲಿರುವ ಎನ್ಐಎ ಕೇಂದ್ರ ಕಚೇರಿಗೆ ಬಹು ಹಂತದ ಬಿಗಿಭದ್ರತೆ ಒದಗಿಸಲಾಗಿದೆ. "ರಾಣಾನನ್ನು ನೆಲಮಹಡಿಯ 14 * 14 ಸೆಲ್ ನಲ್ಲಿ ಇರಿಸಲಾಗಿದೆ. ಆತನಿಗೆ ಬರೆಯಲು ಕೇವಲ ಮೆದು ತುದಿಯ ಪೆನ್ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಯಾವುದೇ ಹಾನಿ ಮಾಡಿಕೊಳ್ಳದಂತೆ ಎಚ್ಚರ ವಹಿಸಲಾಗಿದೆ" ಎಂದು ಮೂಲಗಳು ಹೇಳಿವೆ.