Supreme Court: ಸ್ತನ ಹಿಡಿಯುವುದು ಅತ್ಯಾಚಾರವಲ್ಲ; ಅಲಹಾಬಾದ್ ಹೈ ಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
ಮಹಿಳೆಯ ಸ್ತನ ಹಿಡಿಯುವುದು, ಪೈಜಾಮ ಎಳೆಯುವುದು ಅತ್ಯಾಚಾರ ಅಲ್ಲ ಎಂಬ ಅಲಹಾಬಾದ್ ಹೈ ಕೋರ್ಟ್ನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ವೀ ದಿ ವುಮೆನ್ ಆಫ್ ಇಂಡಿಯಾ' ಎಂಬ ಸಂಘಟನೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ.


ನವದೆಹಲಿ: ಮಹಿಳೆಯ ಸ್ತನ ಹಿಡಿಯುವುದು, ಪೈಜಾಮ ಎಳೆಯುವುದು ಅತ್ಯಾಚಾರ ಅಲ್ಲ ಎಂಬ ಅಲಹಾಬಾದ್ ಹೈ ಕೋರ್ಟ್ನ ತೀರ್ಪಿಗೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಈ ತೀರ್ಪಿನಲ್ಲಿ ಕೆಲವು ಅಭಿಪ್ರಾಯಗಳನ್ನು ನೋಡಿ ನೋವುಂಟಾಗಿದೆ ಎಂದು ಹೇಳಿದರು. ಹೈಕೋರ್ಟ್ ನ್ಯಾಯಾಧೀಶರು ಪ್ರಕರಣವನ್ನು ನಿರ್ವಹಿಸುವಲ್ಲಿ "ಸಂಪೂರ್ಣ ಅಸಂವೇದನಾಶೀಲತೆ"ಯನ್ನು ಪ್ರದರ್ಶಿಸಿದ್ದಾರೆ ಎಂದು ಪೀಠ ಹೇಳಿದೆ. ಮಾರ್ಚ್ 17 ರ ಅಲಹಾಬಾದ್ ಹೈಕೋರ್ಟ್ನ ಆದೇಶದ ವಿರುದ್ಧ 'ವೀ ದಿ ವುಮೆನ್ ಆಫ್ ಇಂಡಿಯಾ' ಎಂಬ ಸಂಘಟನೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಈ ತೀರ್ಪು ಹೈಕೋರ್ಟ್ ನ್ಯಾಯಾಧೀಶರ "ಸೂಕ್ಷ್ಮತೆಯ ಕೊರತೆ"ಯನ್ನು ತೋರಿಸಿದೆ ನ್ಯಾಯಮೂರ್ತಿ ಗವಾಯಿ, "ಇದು ಗಂಭೀರ ವಿಷಯ, ನ್ಯಾಯಾಧೀಶರು ಸಂಪೂರ್ಣ ಅಸಂವೇದನಾಶೀಲತೆಯನ್ನು ತೋರಿದ್ದಾರೆ. ಈ ಪ್ರಕರಣ ಸಮನ್ಸ್ ಜಾರಿ ಮಾಡುವ ಹಂತದಲ್ಲಿತ್ತು ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದೆ.
ಏನಿದು ಪಕ್ರರಣ?
ಮಾರ್ಚ್ 17 ರಂದು ಅಲಹಾಬಾದ್ ಹೈಕೋರ್ಟ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸದಂತೆ ತೀರ್ಪನ್ನು ನೀಡಿ ಮಹಿಳೆಯ ಸ್ತನಗಳನ್ನು ಹಿಡಿಯುವುದು ಹಾಗೂ ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಬದಲಿಗೆ ಅದು ಲೈಂಗಿಕ ದೌರ್ಜನ್ಯ ಆಗುತ್ತದೆ ಎಂದು ಹೇಳಿತ್ತು. ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ಪವನ್ ಮತ್ತು ಆಕಾಶ್ ಎಂದು ಗುರುತಿಸಲಾದ ಆರೋಪಿಗಳು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮ ದಾರವನ್ನು ಹರಿದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು. ಸಂತ್ರಸ್ತೆ ರಕ್ಷಣೆಗಾಗಿ ಕೂಗಿಕೊಂಡಿದ್ದು, ದಾರಿಹೋಕರಿಬ್ಬರು ಸರಿಯಾದ ಸಮಯಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ನ ಈ ಆದೇಶಕ್ಕೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿತ್ತು.