Disha Salian: ದಿಶಾ ಸಾಲಿಯಾನ್ ನಿಗೂಢ ಸಾವು ಪ್ರಕರಣ; ಮೃತಳ ತಂದೆಯ ವಿರುದ್ಧವೇ ಆರೋಪ ಮಾಡಿದ ತನಿಖಾ ವರದಿ
Disha Salian: ದಿಶಾ ಸಾಲಿಯನ್ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸಿದ ಮುಂಬೈ ಪೊಲೀಸರು ಮುಕ್ತಾಯ ವರದಿಯಲ್ಲಿ ಇದೊಂದು ಆತ್ಮಹತ್ಯೆ ಎಂದು ಹೇಳಿದ್ದಾರೆ. ತಂದೆ ಹಣದ ದುರುಪಯೋಗ ಮಾಡುತ್ತಿದ್ದದ್ದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ದಿಶಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ದಿಶಾ ಸಾಲಿಯನ್

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ದಿಶಾ ಸಾಲಿಯಾನ್ (Disha Salian) ನಿಗೂಢ ಸಾವಿನ ಪ್ರಕರಣದ ತನಿಖಾ ವರದಿಯಲ್ಲಿ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದರಿಂದ ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ತನಿಖಾ ವರದಿಯಿಂದ ಬೆಳಕಿಗೆ ಬಂದ ಅಂಶಗಳು ಪ್ರಕರಣ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ದಿಶಾ ಸಾಲಿಯನ್ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸಿದ ಮುಂಬೈ ಪೊಲೀಸರು (Mumbai Police) ಮುಕ್ತಾಯ ವರದಿ (Official Report) ಸಲ್ಲಿಸಿದ್ದು, ಅದರಲ್ಲಿ ಇದೊಂದು ಆತ್ಮಹತ್ಯೆ ಎಂದು ಹೇಳಿದ್ದಾರೆ. ತಂದೆ ಹಣದ ದುರುಪಯೋಗ ಮಾಡುತ್ತಿದ್ದದ್ದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ದಿಶಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಘಟನೆಯ ತನಿಖೆ ನಡೆಸಿದ ಮಾಲ್ವಾನಿ ಪೊಲೀಸರು ತನಿಖೆಯ ಭಾಗವಾಗಿ, ದಿಶಾ ಸ್ನೇಹಿತರು ಮತ್ತು ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಸ್ನೇಹಿತರೊಂದಿನ ತಪ್ಪು ತಿಳುವಳಿಕೆ, ತಂದೆಯಿಂದ ಹಣದ ದುರುಪಯೋಗ, ಕೈತಪ್ಪಿದ ಅವಕಾಶಗಳ ಕುರಿತು ದಿಶಾ ಖಿನ್ನತೆಗೆ ಒಳಗಾಗಿರುವುದು ಕಂಡು ಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ. ದಿಶಾ ಸಾಲಿಯನ್ ಯಾವೆಲ್ಲಾ ಬಾಲಿವುಡ್ ನಟರ ಸಂವಹನವನ್ನು ನಿರ್ವಹಿಸುತ್ತಿದ್ದರೋ, ಅವರನ್ನು ಕೂಡಾ ಪೊಲೀಸರು ತನಿಖೆ ನಡೆಸಿದ್ದಾರೆ.
ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ, ಮುಂಬೈ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಈ ತಂಡದ ತನಿಖೆಯು ಇನ್ನೂ ಪ್ರಗತಿಯಲ್ಲಿದ್ದು, ನಂತರ ವರದಿ ನೀಡಲಿದೆ. ಕಳೆದ ವಾರ, ದಿಶಾ ತಂದೆ ಸತೀಶ್ ಸಾಲಿಯನ್ ಅವರು 2020ರ ಜೂನ್ನಲ್ಲಿ ತಮ್ಮ ಮಗಳು ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ವಿರುದ್ಧ FIR ದಾಖಲಿಸಲು ಮತ್ತು ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಆದೇಶಿಸುವಂತೆ ಅವರು ಹೈಕೋರ್ಟ್ ಅನ್ನು ಒತ್ತಾಯಿಸಿದ್ದರು.
Viral Video: ಹಾವಿನಿಂದ ಮಕ್ಕಳನ್ನು ರಕ್ಷಿಸಿದ ತಾಯಿ; ಮೈ ನವಿರೇಳಿಸುವ ವಿಡಿಯೊ ವೈರಲ್
ದಿಶಾ ಸಾಲಿಯಾನ್ ಮೃತಪಟ್ಟಿದ್ದು ಹೇಗೆ?
ದಿಶಾ ಸಾಲಿಯನ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದರು. 2020ರ ಜೂನ್ 8ರಂದು ಉತ್ತರ ಮುಂಬೈಯ ಮಲಾಡ್ ಪ್ರದೇಶದ ಜನಕಲ್ಯಾಣ್ ನಗರದ ತಮ್ಮ ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ಕೊಲೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ ಬಳಿಕ ಘಟನೆಯ ಕುರಿತು ತನಿಖೆ ನಡೆಸಲಾಗಿತ್ತು. ಆದರೆ ಇಲ್ಲಿಯವರೆಗೆ ಇದೊಂದು ಕೊಲೆ ಅಥವಾ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯಾರಾದರೂ ಬಲವಂತವಾಗಿ ಪ್ರಚೋದಿಸಿದ ಕುರಿತು ಯಾವುದೇ ನಿಖರವಾದ ಸಾಕ್ಷ್ಯಾಧಾರಗಳನ್ನು ಪೊಲೀಸರು ಪತ್ತೆ ಹಚ್ಚಿಲ್ಲ.