ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IIT Baba: ನನ್ನ ಬಳಿ ಇದ್ದುದು ಡ್ರಗ್ಸ್‌ ಅಲ್ಲ, ದೇವರ ಪ್ರಸಾದ: ಐಐಟಿ ಬಾಬಾನಿಂದ ಸಮರ್ಥನೆ

ಗಾಂಜಾ ಹೊಂದಿದ್ದ ಕಾರಣಕ್ಕೆ ಐಐಟಿ ಬಾಬಾ ಖ್ಯಾತಿಯ ಅಭಯ್‌ ಸಿಂಗ್‌ ವಿರುದ್ಧ ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈದೀಗ ಈತ ಈ ಬಗ್ಗೆ ಪ್ರತಿಕ್ರಿಯಿಸಿ ತನ್ನ ಬಳಿ ಇದ್ದುದು ದೇವರ ಪ್ರಸಾದ ಎಂದಿದ್ದಾನೆ. ಜತೆಗೆ ಇದು ಕಾನೂನುಬಾಹಿರವಾಗಿದ್ದರೆ, ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಸಾಧುಗಳನ್ನು ಬಂಧಿಸಿ. ಅವರು ಅದನ್ನು ಬಹಿರಂಗವಾಗಿ ಬಳಸುತ್ತಿದ್ದರು ಎಂದು ಅವರು ಸವಾಲು ಹಾಕಿದ್ದಾನೆ.

ನನ್ನ ಬಳಿ ಇದ್ದುದು ಡ್ರಗ್ಸ್‌ ಅಲ್ಲ, ದೇವರ ಪ್ರಸಾದ: ಐಐಟಿ ಬಾಬಾ

ಐಐಟಿ ಬಾಬಾ.

Profile Ramesh B Mar 3, 2025 7:58 PM

ಜೈಪುರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ನಡೆದ ಮಹಾ ಕುಂಭಮೇಳ (Maha kumbh mela)ದ ವೇಳೆ ಐಐಟಿ ಬಾಬಾ (IIT Baba) ಎಂದೇ ಜನಪ್ರಿಯನಾಗಿದ್ದ ಅಭಯ್‌ ಸಿಂಗ್‌ (Abhey Singh) ವಿರುದ್ಧ ಸೋಮವಾರ (ಮಾ. 3) ರಾಜಸ್ಥಾನದ ಜೈಪುರದಲ್ಲಿ ಪ್ರಕರಣ ದಾಖಲಾಗಿದೆ. ಡ್ರಗ್ಸ್‌ ಹೊಂದಿದ್ದ ಅಭಯ್‌ ಸಿಂಗ್‌ನ ವಿರುದ್ಧ ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟ್ರೋಪಿಕ್‌ ಸಬ್ಸ್ಟೆನ್ಸಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಈತ ತನ್ನ ಬಳಿ ಇದ್ದುದು ಡ್ರಗ್ಸ್‌ ಅಲ್ಲ, ಬದಲಾಗಿ ದೇವರ ಪ್ರಸಾದ ಎಂದು ಹೇಳಿದ್ದಾನೆ. ಆದಾಗ್ಯೂ ಐಐಟಿ ಬಾಬಾ ಕಡಿಮೆ ಪ್ರಮಾಣದಲ್ಲಿ ಮಾದಕ ದ್ರವ್ಯವನ್ನು ಹೊಂದಿದ್ದರಿಂದ ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದಾನೆ.

"ಅಧಿಕಾರಿಗಳು ನನ್ನ ಬಳಿಯಿಂದ 'ಪ್ರಸಾದ' ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಯೊಬ್ಬ ಸಾಧುವಿನ ಬಳಿಯೂ ಈ ಪ್ರಸಾದವಿದೆ. ಇದು ಕಾನೂನುಬಾಹಿರವಾಗಿದ್ದರೆ, ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಸಾಧುಗಳನ್ನು ಬಂಧಿಸಿ. ಅವರು ಅದನ್ನು ಬಹಿರಂಗವಾಗಿ ಬಳಸುತ್ತಿದ್ದರು" ಎಂದು ಅವರು ಸವಾಲು ಹಾಕಿದ್ದಾನೆ.



ಕೇಸ್‌ಗೆ ಟ್ವಿಸ್ಟ್‌

ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಜೈಪುರದ ರಿದ್ಧಿ ಸಿದ್ಧಿ ಪಾರ್ಕ್ ಬಳಿಯ ಕ್ಲಾಸಿಕ್ ಹೋಟೆಲ್‌ಗೆ ತೆರಳಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಶಿಪ್ರಾ ಪಾತ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. "ಪೊಲೀಸರ ತಂಡವು ಹೋಟೆಲ್ ತಲುಪಿದಾಗ 35 ವರ್ಷದ ಐಐಟಿ ಬಾಬಾ ಜೇಬಿನಿಂದ ಗಾಂಜಾ ಪ್ಯಾಕೆಟ್ ಹೊರ ತೆಗೆದು ನಾನು ಗಾಂಜಾ ಸೇವಿಸಿದ್ದೆ. ಅದರ ಪ್ರಭಾವದಿಂದ ನಾನು ಏನು ಹೇಳಿದ್ದೇನೆ ಎನ್ನುವುದೇ ತಿಳಿದಿಲ್ಲ ಎಂದು ಹೇಳಿದ್ದಾನೆʼʼ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

1.50 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಅನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದ- 1985 ( NDPS Act) ಅಡಿ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಪದವಿ ಪಡೆದುಕೊಂಡಿರುವುದಾಗಿ ಹೇಳಿಕೊಳ್ಳುವ ಅಭಯ್‌ ಸಿಂಗ್ ಪೊಲೀಸರ ಆತ್ಮಹತ್ಯೆ ಹೇಳಿಕೆಯನ್ನು ತಳ್ಳಿ ಹಾಕಿದ್ದಾನೆ. "ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದೇನೆ ಎಂಬ ನೆಪದಲ್ಲಿ ಪೊಲೀಸರು ಹೋಟೆಲ್‌ಗೆ ಆಗಮಿಸಿದರು. ನಾನು ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ ಎಂದು ಯಾರೋ ಹೇಳಿದರು ಎಂದು ಅವರು ಹೇಳಿದರು. ಆದರೆ ಅವರು ಇಲ್ಲಿಗೆ ಬಂದು ಬೇರೆ ಏನನ್ನೋ ಹುಡುಕಲು ಪ್ರಾರಂಭಿಸಿದರು" ಎಂದು ಆತ ಆರೋಪಿಸಿದ್ದಾನೆ. ಈತನ್ಮಧ್ಯೆ ಈತ ಎಫ್‌ಐಆರ್‌ ಅನ್ನು ಯಾವುದೇ ಅರ್ಥವಿಲ್ಲ ಎಂದಿರುವ ವಿಡಿಯೊ ತುಣುಕು ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: IIT Baba : ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಐಐಟಿ ಬಾಬಾ ಮೇಲೆ ಹಲ್ಲೆ; ನಡೆದಿದ್ದೇನು?

ಇತ್ತೀಚೆಗೆ ಐಐಟಿ ಬಾಬಾ ತನ್ನ ಮೇಲೆ ನೋಯ್ಡಾದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಹೊರಿಸಿದ್ದ. ಕೇಸರಿ ಬಟ್ಟೆ ಧರಿಸಿದ ಕೆಲವು ಜನರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹೊಡೆದಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದ. ಜತೆಗೆ ಸೆಕ್ಟರ್ 126ರ ಪೊಲೀಸ್ ಹೊರ ಠಾಣೆ ಹೊರಗೆ ಕುಳಿತು ಪ್ರತಿಭಟನೆ ನಡೆಸಿದ್ದ. ನಂತರ ಪೊಲೀಸರು ಮನವೊಲಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.