ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Viral News: ಪಾನ್‌ ಮಸಾಲ ಜಗಿದು ವಿಧಾನಸೌಧದ ಸಭಾಂಗಣದೊಳಗೇ ಉಗುಳಿದ ಶಾಸಕ! ಯಾರು ಈ ಮಹಾನುಭಾವ?

ಉತ್ತರ ಪ್ರದೇಶದ ಶಾಸಕರೊಬ್ಬರು ಪಾನ್‌ ಮಸಾಲ ಜಗಿದು ವಿಧಾನಸೌಧದೊಳಗೇ ಉಗುಳುವ ಮೂಲಕ ನಾಚಿಗೆಗೇಡಿನ ವರ್ತನೆ ತೋರಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಸದನ ಪ್ರಾರಂಭವಾಗುವ ಮೊದಲು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್‌ ಸತೀಶ್‌ ಮಹಾನ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆ ಪ್ರದೇಶವನ್ನು ಪರಿಶೀಲಿಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಪಾನ್‌ ಮಸಾಲ ಜಗಿದು ವಿಧಾನಸೌಧದ ಸಭಾಂಗಣದೊಳಗೇ ಉಗುಳಿದ ಶಾಸಕ

ಉತ್ತರ ಪ್ರದೇಶದ ವಿಧಾನಸೌಧ.

Profile Ramesh B Mar 4, 2025 6:07 PM

ಲಖನೌ: ಪಾನ್‌ ಮಸಾಲ ಜಗಿದು ಎಲ್ಲೆಂದರಲ್ಲಿ ಉಗುಳಿ ನಗರವನ್ನು ಗಲೀಜು ಮಾಡುವವರನ್ನು ನೋಡಿದ್ದೇವೆ. ರಸ್ತೆ ಬದಿ, ಬಸ್‌ ಸ್ಟಾಪ್‌, ಥಿಯೇಟರ್‌, ಗೋಡೆ, ಕಾಂಪೌಂಡ್‌ಗಳಿಗೂ ಉಗುಳಿ ಗಬ್ಬೆಸುವವರೂ ನಮಗೆ ಗೊತ್ತು. ಆದರೆ ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಪಾನ್‌ ಮಸಾಲ ಜಗಿದು ವಿಧಾನಸೌಧದದೊಳಗೆ ಉಗುಳುವುದನ್ನು ನೋಡಿದ್ದೀರಾ? ಅಚ್ಚರಿಯಾಯ್ತೆ? ಹೌದು, ಉತ್ತರ ಪ್ರದೇಶದ ಶಾಸಕರೊಬ್ಬರು ಪಾನ್‌ ಮಸಾಲ ಜಗಿದು ವಿಧಾನಸೌಧದೊಳಗೇ ಉಗುಳುವ ಮೂಲಕ ನಾಚಿಗೆಗೇಡಿನ ವರ್ತನೆ ತೋರಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ (Viral News). ಸ್ಪೀಕರ್‌ ಸತೀಶ್‌ ಮಹಾನ (Satish Mahana) ಮಂಗಳವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶಾಸಕರೊಬ್ಬರು ಪಾನ್‌ ಮಸಾಲ ಜಗಿದು ಅದನ್ನು ವಿಧಾನಸೌಧದ ಸಭಾಂಗಣದಲ್ಲೇ ಉಗುಳಿದ್ದಾರೆ ಎಂದಿದ್ದಾರೆ.

ಮಂಗಳವಾರ ಸದನ ಪ್ರಾರಂಭವಾಗುವ ಮೊದಲು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸತೀಶ್‌ ಮಹಾನ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆ ಪ್ರದೇಶವನ್ನು ಪರಿಶೀಲಿಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಹಾಲ್‌ನೊಳಗೆ ಯಾರು ಉಗುಳಿದ್ದು ಎನ್ನುವುದು ತಮ್ಮ ಅರಿವಿಗೆ ಬಂದಿದ್ದರೂ ಅವರಿಗಾಗುವ ಅವಮಾನ ತಪ್ಪಿಸಲು ಸಾವರ್ಜನಿಕವಾಗಿ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.



ಸ್ಪೀಕರ್‌ ಹೇಳಿದ್ದೇನು?

"ಇಂದು ಬೆಳಗ್ಗೆ ಶಾಸಕರೊಬ್ಬರು ಪಾನ್ ಮಸಾಲಾ ಸೇವಿಸಿ ವಿಧಾನಸಭೆಯ ಹಾಲ್‌ನಲ್ಲೇ ಉಗುಳಿದ್ದಾರೆ ಎಂದು ನನಗೆ ಮಾಹಿತಿ ಸಿಕ್ಕಿತು. ಆದ್ದರಿಂದ ನಾನು ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡೆ. ಯಾರು ಈ ಕೃತ್ಯ ಎಸಗಿದ್ದು ಎನ್ನುವುದನ್ನು ನಾನು ಸಿಸಿಟಿವಿ ಕ್ಯಾಮೆರಾದಲ್ಲಿ ನೋಡಿದ್ದೇನೆ. ಆದರೆ ನಾನು ಯಾರನ್ನೂ ಅವಮಾನಿಸಲು ಬಯಸುವುದಿಲ್ಲ. ಹೀಗಾಗಿ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಇದು ಇನ್ನು ಪುನರಾವರ್ತನೆಯಾಗಬಾರದು. ಅಸೆಂಬ್ಲಿಯನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ತಪ್ಪು ಎಸಗಿದವರು ಅವರಾಗಿ ಒಪ್ಪಿಕೊಳ್ಳಬೇಕುʼʼ ಎಂದು ಹೇಳಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯನ್ನೂ ಓದಿ: ಸತತ 11ನೇ ಬಾರಿ ಟಾಸ್‌ ಸೋತ ರೋಹಿತ್‌; ನೆಟ್ಟಿಗರಿಂದ ಟ್ರೋಲ್‌ಗಳ ಸುರಿಮಳೆ

ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಚಿಗೆಗೇಡಿನ ವರ್ತನೆ ತೋರಿದ ಶಾಸಕರ ಹೆಸರು ಬಹಿರಂಗಪಡಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳೇ ಹೀಗೆ ವರ್ತಿಸಿದರೆ ಜನ ಸಾಮಾನ್ಯರ ಪಾಡೇನು? ಎಂದು ಕೆಲವರು ಪ್ರಶ್ನಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತಾಗಿದೆ ಎಂದು ಇನ್ನು ಕೆಲವರು ಕಿಡಿ ಕಾರಿದ್ದಾರೆ.



ಯಾಕಾಗಿ ಶಾಸಕರ ಹೆಸರನ್ನು ಗುಟ್ಟಾಗಿ ಇಡಬೇಕು? ಅವರ ಹೆಸರನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ʼʼಉಗುಳಿದವರಿಂದಲೇ ಸ್ವಚ್ಛಗೊಳಿಸಿ ಮತ್ತು ಅದರ ವಿಡಿಯೊವನ್ನು ಬಹಿರಂಗಪಡಿಸಿʼʼ ಎಂದು ಒಬ್ಬರು ಹೇಳಿದ್ದಾರೆ. ʼʼಶಾಸಕನ ವಿರುದ್ಧ ಕಠಿಣ ಕ್ರಮ ಅಗತ್ಯʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಇದನ್ನು ಸ್ವಚ್ಛಗೊಳಿಸಿದ ಕಾರ್ಮಿಕನಿಗೆ ಮಾಮೂಲಿಗಿಂತ 10 ಪಟ್ಟು ಅಧಿಕ ಹಣ ನೀಡಬೇಕು. ಉಗುಳಿದ ಶಾಸಕನಿಂದಲೇ ಈ ಹಣವನ್ನು ವಸೂಲಿ ಮಾಡಬೇಕುʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಕೋಲಾಹಲವನ್ನೇ ಸೃಷ್ಟಿಸಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.