Diesel price Hike: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್; ಡೀಸೆಲ್ ದರ 2 ರೂ. ಹೆಚ್ಚಳ!
Diesel price Hike: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಡೀಸೆಲ್ ದರ ಏರಿಕೆಯಾಗಿದೆ. ರಾಜ್ಯ ಸರ್ಕಾರ ಹೈಸ್ಪೀಡ್ ಡೀಸೆಲ್ ದರ ಹೆಚ್ಚಳ ಮಾಡಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯವಾಗಲಿದೆ. ಹೈಸ್ಪೀಡ್ ಡೀಸೆಲ್ ದರ 2-3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.


ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಗುಲಿದೆ. ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು (Diesel price hike) ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದು, ಇದರಿಂದ ಡೀಸೆಲ್ ದರ 2-3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು (ಏ.1) ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಹೈಸ್ಪೀಡ್ ಡೀಸೆಲ್ ಮೇಲೆ ಶೇ. 2.73 ರಷ್ಟು ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ ಬೆಂಗಳೂರಿನಲ್ಲಿ 88.99 ರೂ.ಗೆ ಹೈಸ್ಪೀಡ್ ಡೀಸೆಲ್ ಮಾರಾಟವಾಗುತ್ತಿದೆ. ತೆರಿಗೆ ಏರಿಕೆಯಿಂದ ಲೀಟರ್ ದರ 91.02 ರೂ.ಗೆ ಹೆಚ್ಚಳವಾಗಲಿದೆ. ಈ ಹಿಂದೆ 18.44% ಇದ್ದ ತೆರಿಗೆ ಸದ್ಯ 21.17% ಕ್ಕೆ ಏರಿಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆಯ ದರವು 2021ರ ನ.4ರ ಮೊದಲು ಶೇಕಡಾ 24 ರಷ್ಟು ಇತ್ತು. ಆಗ ಲೀಟರ್ನ ಮಾರಾಟದ ಬೆಲೆ 92.03 ರೂ. ಆಗಿತ್ತು. 15-06-2024ರ ಜೂನ್ 15ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ, ಡೀಸೆಲ್ ಮೇಲಿನ ತೆರಿಗೆಯ ದರವನ್ನು 18.44%ಕ್ಕೆ ಪರಿಷ್ಕರಿಸಿತ್ತು.
ಪರಿಸರ ಪ್ರಾಧಿಕಾರದ ಅನುಮೋದನೆಯ ನಂತರ, 01-04-2025ರ ಏಪ್ರಿಲ್ 1 ರಾಜ್ಯದಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆಯ ದರವನ್ನು ಶೇ. 21.17ಕ್ಕೆ ಏರಿಸಲಾಗಿದೆ. ಇದರಿಂದ ಪ್ರತೀ ಲೀಟರ್ಗೆ 2 ರೂಪಾಯಿ ರಷ್ಟು ಹೆಚ್ಚಳವಾಗಲಿದ್ದು, ಮಾರಾಟದ ಬೆಲೆ 91.02 ರೂ. ಆಗಲಿದೆ. ಆದಾಗ್ಯೂ, ಈ ಪರಿಷ್ಕರಣೆ ನಂತರ ರಾಜ್ಯದ ಮಾರಾಟದ ಬೆಲೆ ಪಕ್ಕದ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Laxmi Hebbalkar: ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಹಾಲಿನ ದರ 4 ರೂ. ಹೆಚ್ಚಳ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್ (KMF) ನಂದಿನಿ ಹಾಲಿನ ದರ ಲೀಟರ್ಗೆ 4 ರೂ. ಏರಿಕೆಗೆ ಅನುಮೋದನೆ ನೀಡಲಾಗಿತ್ತು. ಅದರಂತೆ ಪರಿಷ್ಕೃತ ದರ ಇಂದಿನಿಂದ (ಏ. 1) ಜಾರಿಯಾಗಿದೆ. ಈ ಹಿಂದೆ ಲೀಟರ್ ಪೊಟ್ಟಣದಲ್ಲಿ 50 ಮಿ.ಲೀ. ಹೆಚ್ಚುವರಿ ಹಾಲು ನೀಡಿ 2 ರೂ. ಏರಿಕೆ ಮಾಡಲಾಗಿತ್ತು, ಈಗ ಅದನ್ನು ಹಿಂಪಡೆಯಲಾಗಿದ್ದು, ಲೀಟರ್ ಹಾಲಿನ ಮೇಲೆ 4 ರೂ. ಏರಿಕೆಯಾಗಿದ್ದು, ಮೊಸರಿನ ದರವೂ 4 ರೂ. ಏರಿಕೆಯಾಗಿದೆ.
ಕೆಲ ದಿನಗಳ ಹಿಂದೆ ರಾಜ್ಯದ ರೈತರು ಕೆಎಂಎಫ್ ಮುಂದೆ ಹಾಲಿನ ದರ ಏರಿಸುವಂತೆ ಪ್ರತಿಭಟನೆ ನಡೆಸಿದ್ದರು. ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್ಗೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರತಿ ಲೀಟರ್ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಕಳಿಸಿತ್ತು.
ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದ ನಂದಿನಿ ಹಾಲಿನ ಬೆಲೆ ತುಂಬಾ ಕಡಿಮೆಯಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ.