Murder Conspiracy: ರಾಜೇಂದ್ರ ಕೊಲೆ ಯತ್ನ ಪ್ರಕರಣ; ಆರೋಪಿ ಗುಂಡನ ಪ್ರೇಯಸಿ ಪೊಲೀಸರ ವಶಕ್ಕೆ
Murder Conspiracy: ರಾಜೇಂದ್ರ ನೀಡಿದ ದೂರು ಆಧರಿಸಿ ಪುಷ್ಪಾ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಗುಂಡನ ಲವರ್ ಯಶೋಧಾಳನ್ನು ಖಾಕಿ ವಶಕ್ಕೆ ಪಡೆದುಕೊಂಡಿದೆ. ರಾಜೇಂದ್ರ ರಾಜಣ್ಣ ಅವರ ಹತ್ಯೆಗೆ ಸಂಚು ರೂಪಿಸಿದ ಸಂಬಂಧ ಸ್ಫೋಟಕ ಆಡಿಯೊ ಸೋಮವಾರ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಂಎಲ್ಸಿ ರಾಜೇಂದ್ರ ರಾಜಣ್ಣ

ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ಹನಿಟ್ರಾಪ್ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಅವರ ಪುತ್ರ ರಾಜೇಂದ್ರ ಕೊಲೆ ಯತ್ನ ಕೇಸ್ (Murder Conspiracy) ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಗುಂಡನ ಲವರ್ ಯಶೋಧಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಂದ್ರ ಅವರ ಕೊಲೆ ಸುಪಾರಿಗೆ ಸಂಬಂಧಿಸಿದಂತೆ ಆಡಿಯೊವೊಂದು ವೈರಲ್ ಆಗಿತ್ತು. ಇದಕ್ಕೂ ಮೊದಲು ಇದೇ ಆಡಿಯೊ ಆಧರಿಸಿ ರಾಜೇಂದ್ರ ಅವರು ತುಮಕೂರು ಎಸ್ಪಿಯವರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಪುಷ್ಪಾ ಸೇರಿ ಮೂವರನ್ನು ಬಂಧಿಸಿದ್ದರು. ಇದೀಗ ಗುಂಡನ ಲವರ್ ಯಶೋಧಾಳನ್ನು ಖಾಕಿ ವಶಕ್ಕೆ ಪಡೆದುಕೊಂಡಿದೆ.
ಕೊಲೆ ಸಂಚು ಕುರಿತ ಸ್ಫೋಟಕ ಆಡಿಯೊ ವೈರಲ್
ಸಚಿವ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ (MLC Rajendra) ಹತ್ಯೆಗೆ ಸಂಚು ರೂಪಿಸಿದ ಸಂಬಂಧ ಸ್ಫೋಟಕ ಆಡಿಯೊ ಸೋಮವಾರ ವೈರಲ್ ಆಗಿತ್ತು. ರಾಜೇಂದ್ರ ಹತ್ಯೆಗೆ ಸುಪಾರಿ ಬಗ್ಗೆ ವೈರಲ್ ಆಗಿರುವ ಆಡಿಯೊದಲ್ಲಿ ಮಹಿಳೆ ಮಾತನಾಡಿದ್ದಾಳೆ.
ಡಿಸೆಂಬರ್ನಲ್ಲಿ ಪುಷ್ಪ ಹಾಗೂ ರಾಕಿ ಎನ್ನುವವರ ನಡುವೆ ನಡೆದ ಸಂಭಾಷಣೆಯ ಈ ಆಡಿಯೊದಲ್ಲಿದೆ. ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್ ಬಗ್ಗೆ ಮಹಿಳೆ ಪುಷ್ಪ ವಿವರಿಸಿದ್ದಾಳೆ. ರಾಜೇಂದ್ರರನ್ನು ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪರಿಚಯಸ್ಥಳಾಗಿದ್ದ ಪುಷ್ಪಾಳಿಗೆ ಆರೋಪಿ ಜೈಪುರ ಸೋಮ ಹೇಳಿಕೊಂಡಿದ್ದ. ಆ ಬಳಿಕ ಸುಪಾರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹಿಳೆ ಕಲೆಹಾಕಿದ್ದಳು.
ಸೋಮನ ಜತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದ ಪುಷ್ಪ, ಬಳಿಕ ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರರಿಗೆ ತಿಳಿಸಲು ಪ್ಲ್ಯಾನ್ ಮಾಡಿದ್ದಳು. ರಾಜೇಂದ್ರಗೆ ವಿಚಾರ ಮುಟ್ಟಿಸಲು ರಾಕಿ ಎನ್ನುವ ಹುಡುಗನನ್ನು ಮಹಿಳೆ ಬಳಸಿಕೊಂಡಿದ್ದಳು. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನು ಮೊಬೈಲ್ನಲ್ಲಿ ರಾಕಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರಗೆ ಈ ಆಡಿಯೊ ತಲುಪಿತ್ತು. ಆಡಿಯೋ ಕೇಳಿ ಶಾಕ್ ಆಗಿದ್ದ ರಾಜೇಂದ್ರ, ತನ್ನ ಹತ್ಯೆಗೆ ಸಂಚು ನಡೆದಿದೆ ಎಂದು ದೂರು ದಾಖಲಿಸಿದ್ದರು.
ಇದೀಗ ಇದೇ ಆಡಿಯೋ ಬೆನ್ನತ್ತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಡಿಯೋದಲ್ಲಿ ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಹೆಸರು ಉಲ್ಲೇಖವಾಗಿದೆ. ಐವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುಷ್ಪ ಬಳಿ ಎಲ್ಲಾ ಮಾಹಿತಿ ಪಡೆದುಕೊಂಡಿದ್ದ ರಾಕಿ
ರಾಜೇಂದ್ರ ಮಗಳ ಬರ್ತ್ಡೇ ಡೆಕೋರೇಷನ್ಗೆ ಹೋಗಿದ್ದ ಜೈಪುರದ ಇಬ್ಬರು ಹುಡುಗರನ್ನು ಆರೋಪಿ ಸೋಮ ಕಳುಹಿಸಿದ್ದ ವಿಚಾರ ಆಡಿಯೊದಲ್ಲಿ ತಿಳಿದುಬಂದಿದೆ. ನವೆಂಬರ್ನಲ್ಲಿ ರಾಜೇಂದ್ರ ಹಿರಿಯ ಮಗಳ ಹುಟ್ಟುಹಬ್ಬ ನಡೆದಿತ್ತು. ಸೋಮನಿಗೆ 5 ಲಕ್ಷ ಹಣ ಬಂದಿರುವುದು ಸತ್ಯ ಎಂದು ಪುಷ್ಪ ಹೇಳಿದ್ದಾಳೆ.
ಪೊಲೀಸರು ಕರೆದುಕೊಂಡು ಹೋಗಿ ತನಿಖೆ ಮಾಡಿದರೆ ಎಲ್ಲಾ ಗೊತ್ತಾಗುತ್ತದೆ. ರಾಜೆಂದ್ರ ಅವರ ಮುಂದೆ ನಾನೇ ಹೇಳುವೆ. ನನ್ನ ಕರೆದುಕೊಂಡು ಹೋಗು ಎಂದು ರಾಕಿ ಬಳಿ ಪುಷ್ಪ ಹೇಳಿದ್ದಾಳೆ. ಇನ್ನು ಜೈಪುರದ ಮತ್ತೊಬ್ಬ ರೌಡಿಶೀಟರ್ ಪ್ರಸ್ಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿಕೆ ನೀಡಿದ್ದಾನೆ. ಇದರ ಬಗ್ಗೆ ಪ್ರಸ್ಸಿ ಅಣ್ಣನ ಬಳಿಯೂ ನಾನೆ ಹೋಗಿ ಎಲ್ಲವನ್ನೂ ಹೇಳ್ತೀನಿ ಎಂದು ಆಡಿಯೊದಲ್ಲಿ ಪುಷ್ಪ ಹೇಳಿದ್ದಾಳೆ.
ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನು ಸೋಮ ಕರೆಸಿಕೊಳ್ಳುತ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನು ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಯಾನ್ ಮಾಡಿದ್ದಾನೆ. ಅವನ್ನು ಕರೆಸಿ ನೆಟ್ವರ್ಕ್ ಇಲ್ದೇ ಇರೋ ಜಾಗದಲ್ಲಿ ಇಡೋಕೆ ಮನೆ ಮಾಡ್ತಿದ್ದಾನೆ ಎಂದು ಆಡಿಯೋದಲ್ಲಿ ಪುಷ್ಪ ಮಾಹಿತಿ ನೀಡಿದ್ದಾಳೆ.
ಈ ಸುದ್ದಿಯನ್ನೂ ಓದಿ | MLC Rajendra Rajanna: ಕೊಲೆ ಯತ್ನ; ಪೆನ್ಡ್ರೈವ್ ಸಮೇತ ದೂರು ನೀಡಿದ ರಾಜೇಂದ್ರ, ತನಿಖೆಗೆ ತಂಡ ರಚನೆ
ಇನ್ನು ಮಿನಿಸ್ಟ್ರು ಮಕ್ಕಳನ್ನು ಹೀಗೆ ಮಾಡೋದು ಅಷ್ಟು ಸುಲಭವಲ್ಲ ಎಂದಿರುವ ಪುಷ್ಪ, ದೊಡ್ಡವರಿಗೆ ಹೊಡೆದುಬಿಟ್ಟು ತುಮಕೂರಿಗೆ ಡಾನ್ ಆಗಿಬಿಡನಾ ಅಂತಾನಾ ಸೋಮ ಪ್ಲ್ಯಾನ್ ಮಾಡಿದ್ದಾನೆ. ಅವರು ಶಿರಾ ಗೇಟ್ನ ಒಂದು ತೋಟದಲ್ಲಿ ಜಾಸ್ತಿ ಇರ್ತಾರೆ ಎಂದು ಪುಷ್ಪ ಹೇಳಿರುವುದು ಆಡಿಯೊದಲ್ಲಿದೆ.