ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kunigal News: ನವಜಾತ ಶಿಶು ಮಾರಾಟ; ಅಂಗನವಾಡಿ ಕಾರ್ಯಕರ್ತೆ ಅಮಾನತು

Kunigal News: ಮಗುವಿನ ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವರದಿ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ. ಕುಣಿಗಲ್‌ ಆಸ್ಪತ್ರೆಯಲ್ಲಿ ಮಾಗಡಿಯ ಅವಿವಾಹಿತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆ ಮಗುವನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಮಾನತುಗೊಂಡಿದ್ದಾರೆ.

ನವಜಾತ ಶಿಶು ಮಾರಾಟ; ಅಂಗನವಾಡಿ ಕಾರ್ಯಕರ್ತೆ ಅಮಾನತು

Profile Prabhakara R Feb 26, 2025 3:33 PM

ಕುಣಿಗಲ್: ಅವಿವಾಹಿತ ಯುವತಿ ಜನ್ಮ ನೀಡಿದ್ದ ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಆರೋಪದ ಮೇಲೆ ತಾಲೂಕಿನ ಕೊತ್ತಗೆರೆ ಅಂಗನವಾಡಿ ಕಾರ್ಯಕರ್ತೆ ಜ್ಯೋತಿಯನ್ನು ಅಮಾನತುಗೊಳಿಸಲಾಗಿದೆ. ಕುಣಿಗಲ್‌ ಆಸ್ಪತ್ರೆಯಲ್ಲಿ (Kunigal News) ಮಾಗಡಿಯ ಅವಿವಾಹಿತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆ ಮಗುವಿನ ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಜ್ಯೋತಿ, ಮುಬಾರಕ್ ಎಂಬುವವರಿಗೆ 60 ಸಾವಿರಕ್ಕೆ ಮಾರಾಟ ಮಾಡಿಸಿದ್ದರು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವರದಿ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ಮೆಟ್ರೋದಲ್ಲಿ ಯುವತಿಗೆ ಬಾಡಿ ಶೇಮಿಂಗ್‌ ಮಾಡಿದ ಮಹಿಳೆ; ವಿಡಿಯೊ ವೈರಲ್

ಅವಿವಾಹಿತೆಗೆ ಜನಿಸಿದ ಮಗು 60 ಸಾವಿರಕ್ಕೆ ಮಾರಾಟ; ಅಂಗನವಾಡಿ ಕಾರ್ಯಕರ್ತೆ ಸೇರಿ ಐವರ ಬಂಧನ

ಕುಣಿಗಲ್: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ 60 ಸಾವಿರಕ್ಕೆ ನವಜಾತ ಶಿಶು ಮಾರಾಟಕ್ಕೆ (Child trafficking racket) ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಫೆ. 20ರಂದು ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ರಾಮನಗರ ಜಿಲ್ಲೆಯ ಮಾಗಡಿಯ 21 ವರ್ಷದ ಅವಿವಾಹಿತೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ, ಮಗುವನ್ನು ಕರೆದೊಯ್ಯಲು ನಿರಾಕರಿಸಿದ್ದಳು. ಆಕೆಯ ಪ್ರಿಯಕರ ಅಂಗನವಾಡಿ ಕಾರ್ಯಕರ್ತೆ ಮೂಲಕ ಮಗುವನ್ನು ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಕೂಡಲೇ ಯುವತಿಯ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.

ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಹಾಗೂ ಆಕೆಯ ಪ್ರಿಯಕರ ಶ್ರೀನಂದ ಎಂಬಾತ ಮಗುವನ್ನು ಮಾರಾಟ ಮಾಡೋಣ ಎಂದು ನಿರ್ಧರಿಸಿದ್ದರು. ಆದರಂತೆ ಶ್ರೀನಂದ ಮಾಗಡಿಯ ಜ್ಯೋತಿ ಎಂಬುವವರನ್ನು ಸಂಪರ್ಕಿಸಿ ನಡೆದ ವಿಚಾರವನ್ನು ತಿಳಿಸಿದ್ದ. ಬಳಿಕ ಮಾಗಡಿಯ ಜ್ಯೋತಿ ಕುಣಿಗಲ್‌ನ ಕೊತ್ತಗೆರೆ ಅಂಗನವಾಡಿ ಕಾರ್ಯಕರ್ತೆ ಎನ್.ಜ್ಯೋತಿಯನ್ನು ಶಿಶು ಮಾರಾಟಕ್ಕೆ ಸಂಪರ್ಕಿಸಿದ್ದಾರೆ. ನಂತರ ಎನ್‌.ಜ್ಯೋತಿ ಕೊತ್ತಗೆರೆಯ ಮುಭಾರಕ್ ಪಾಷಾನನ್ನು ಸಂಪರ್ಕಿಸಿ ಮಗುವನ್ನು 60 ಸಾವಿರಕ್ಕೆ ಮಾರಾಟ ಮಾಡಲು ಡೀಲ್ ಮಾಡಿಕೊಂಡಿದ್ದರು.

ಇತ್ತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯುವತಿ ಮನೆಗೆ ತೆರಳಿದ್ದ ವೇಳೆ ಹೆರಿಗೆ ವಿಚಾರವನ್ನು ಪಾಲಕರ ಮುಂದೆ ಬಾಯಿಬಿಟ್ಟಿದ್ದಾಳೆ. ಈ ವೇಳೆ ಸಿಟ್ಟಾದ ಪೋಷಕರು ಮಗುವನ್ನು ಮರಳಿ ಕರೆದುಕೊಂಡು ಬಾ ಎಂದು ತಿಳಿಸಿದ್ದಾರೆ. ಆದರೆ ಯುವತಿಗೆ ಮಾರಾಟ ಜಾಲದ ಬಗ್ಗೆ ಗೊತ್ತಿದ್ದ ಹಿನ್ನೆಲೆಯಲ್ಲಿ ಆಕೆ ಹಿಂದೇಟು ಹಾಕಿದ್ದಾಳೆ.

ಕೂಡಲೇ ಯುವತಿಯ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಹುಚ್ಚರಂಗಮ್ಮ ದೂರು ನೀಡಿದ್ದರು. ಅದರಂತೆ ಇದೀಗ ಕುಣಿಗಲ್ ಪೊಲೀಸರು ಮಗುವಿನ ತಾಯಿ, ಆಕೆಯ ಪ್ರಿಯಕರ ಶ್ರೀನಂದ, ಕುಣಿಗಲ್‌ನ ಅಂಗನವಾಡಿ ಕಾರ್ಯಕರ್ತೆ ಎನ್. ಜ್ಯೋತಿ, ಮುಭಾರಕ್ ಪಾಷಾ, ಮಾಗಡಿಯ ಜ್ಯೋತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Denotification case: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಎಚ್‌ಡಿಕೆಗೆ ಸಂಕಷ್ಟ; ಬಿ ರಿಪೋರ್ಟ್‌ ರದ್ದು ಆದೇಶ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ಇನ್ನು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದ್ದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.