RCB vs CSK: ಸೋತರೂ ಖುಷಿ ಇದೆ; ದರ್ಪದ ಮಾತುಗಳನ್ನಾಡಿದ ಗಾಯಕ್ವಾಡ್
RCB vs CSK: 50 ರನ್ ಅಂತರದ ಸೋಲನ್ನೂ ಕೂಡ ಸಣ್ಣ ಅಂತರದ ಸೋಲು ಎಂದ ಗಾಯಕ್ವಾಡ್ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಕಾರ ದೊಡ್ಡ ಅಂತರದ ಸೋಲು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.


ಚೆನ್ನೈ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ನಾಣ್ಣುಡಿಯಂತೆ, ಶುಕ್ರವಾರ ಐಪಿಎಲ್(IPL 2025) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಆರ್ಸಿಬಿ(RCB vs CSK) ವಿರುದ್ಧ ಹೀನಾಯ 50 ರನ್ ಸೋಲು ಕಂಡರೂ ನಾಯಕ ಋತುರಾಜ್ ಗಾಯಕ್ವಾಡ್(Ruturaj Gaikwad) ದರ್ಪದ ಮಾತುಗಳನ್ನಾಡಿದ್ದಾರೆ. ತಂಡ ಕೇವಲ 50 ರನ್ ಅಂತರದಿಂದ ಮಾತ್ರ ಸೋತಿದೆ. ಹೀಗಾಗಿ ಈ ಸೋಲಿನಿಂದ ಯಾವುದೇ ಬೇಸರವಿಲ್ಲ. ಖುಷಿ ಇದೆ ಎಂದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ಗಾಯಕ್ವಾಡ್, 'ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಕಳಪೆ ಫೀಲ್ಡಿಂಗ್ ನಮಗೆ ಬಹಳ ನಷ್ಟವನ್ನುಂಟು ಮಾಡಿತು. 170 ರನ್ಗಳನ್ನು ಬೆನ್ನಟ್ಟುವಾಗ, ಸ್ವಲ್ಪ ಹೆಚ್ಚು ಸಮಯವಿರುತ್ತದೆ, ಆದರೆ ಇಲ್ಲಿ ಹೆಚ್ಚುವರಿ 20 ರನ್ ಕೂಡ ಇದ್ದ ಕಾರಣ ಪವರ್ ಪ್ಲೇನಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಇಲ್ಲಿ ನಾವು ಎಡವಿದ್ದೇವೆ. ಆದರೂ ನಾವು ದೊಡ್ಡ ಅಂತರದಿಂದ ಸೋತಿಲ್ಲ, ಅದು ಕೇವಲ 50 ರನ್ಗಳು ಮಾತ್ರ' ಎಂದು ಹೇಳಿದರು.
ಇದನ್ನೂ ಓದಿ RCB vs CSK: 9ನೇ ಕ್ರಮಾಂಕದಲ್ಲಿ ಆಡಿದ ಧೋನಿ ವಿರುದ್ಧ ಭಾರೀ ಟೀಕೆ
'ಕ್ಷೇತ್ರ ರಕ್ಷಣೆಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕು. ಮುಂದಿನ ಪಂದ್ಯಕ್ಕೆ ಗುವಾಹಟಿಗೆ ದೀರ್ಘ ವಿಮಾನ ಪ್ರಯಾಣವಿದೆ. ಆದರೆ ನಾವು ಮಾನಸಿಕವಾಗಿ ಸುಧಾರಣೆ ಸಾಧಿಸಿ ಮತ್ತೆ ಗೆಲುವಿನ ಹಳಿ ಏರುತ್ತೇವೆ' ಎಂದರು.
50 ರನ್ ಅಂತರದ ಸೋಲನ್ನೂ ಕೂಡ ಸಣ್ಣ ಅಂತರದ ಸೋಲು ಎಂದ ಗಾಯಕ್ವಾಡ್ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರಕಾರ ದೊಡ್ಡ ಅಂತರದ ಸೋಲು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.
Ruturaj Gaikwad said, "still happy that we didn't lose by a big margin and at the end it was just 50 runs". pic.twitter.com/idCifCOZa7
— Mufaddal Vohra (@mufaddal_vohra) March 28, 2025
ಐಪಿಎಲ್ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದಿದ್ದ ಇನ್ಫೋಸಿಸ್ ಕಾರ್ಯಕ್ರಮವೊಂದರಲ್ಲಿ ಋತುರಾಜ್ ಗಾಯಕ್ವಾಡ್ ಪಾಲೊಂಡಿದ್ದರು. ಈ ವೇಳೆ ಅವರು ಒಂದೆರಡು ಮಾತುಗಳನ್ನಾಡಲು ಮುಂದಾದಾಗ ಮೈಕ್ ಕೈ ಕೊಟ್ಟಿತು. ಮೈಕ್ ಸರಿಯಾದ ಬಳಿಕ ಮಾತು ಮುಂದುವರಿಸಿದ್ದ ಗಾಯಕ್ವಾಡ್ ಬಹುಶಃ ಆರ್ಸಿಬಿ ಅಭಿಮಾನಿಗಳು ಮೈಕ್ ಆಫ್ ಮಾಡಿರಬೇಕು ಎಂದು ಆರ್ಸಿಬಿ ಅಭಿಮಾನಿಗಳನ್ನು ಗೇಲಿ ಮಾಡಿದ್ದರು.