Roopa Gururaj Column: ಭಾಗವತ ಕಥೆಗಳನ್ನು ಏಕೆ ಓದಬೇಕು ?
ಒಂದು ವೇಳೆ ತಾಯಿ ಪಾರ್ವತಿ ಹೂಗುಟ್ಟದಿದ್ದರೆ ಪರಮೇಶ್ವರನು ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ ಎಂದುಕೊಂಡು ಪಾರ್ವತಿಯಂತೆ ಗಿಳಿಯೂ ಸಹ ಶಿವನು ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ ಮಧ್ಯಮಧ್ಯ ಹೂ ಗುಟ್ಟುತ್ತಿತ್ತು. ಶಿವನು ಅಮರಕತೆಯನ್ನು ಹೇಳಿ ಮುಗಿಸಿದನು ಅವನಿಗೆ ಪರಮಾನಂದವಾಗಿತ್ತು.


ಒಂದೊಳ್ಳೆ ಮಾತು
ಒಮ್ಮೆ ಪರಮೇಶ್ವರನು ಪಾರ್ವತಿಗೆ ಅಮರಕತೆಯನ್ನು ಹೇಳುತ್ತೇನೆಂದು ಅಮರನಾಥ ಗುಹೆಗೆ ಕರೆದುಕೊಂಡು ಬಂದನು. ಈ ಕಥೆಯನ್ನು ಶ್ರದ್ಧೆಯಿಂದ ಕೇಳಿದರೆ ಪ್ರತಿಯೊಬ್ಬರೂ ಅಮರರಾಗುತ್ತಾರೆ. ಆದ್ದರಿಂದ ನಾನು ಕಣ್ಣು ಮುಚ್ಚಿ ಮೈ ಮರೆತು ಕಥೆಯನ್ನು ಹೇಳಲು ತೊಡಗುವೆ. ನೀನು ಬರೀ ಹ್ಞೂ ಗುಟ್ಟು ತ್ತಿದ್ದರೆ ಸಾಕು. ನೀನು ಕೇಳುತ್ತಿರುವೆ ಎಂಬುದರ ಮೇಲೆ ನಾನು ಕಥೆಯನ್ನು ಆರಂಭಿಸುತ್ತೇನೆ ಎಂದು ಕಥೆ ಹೇಳಲು ಆರಂಭ ಮಾಡುವ ಮೊದಲು ತನ್ನ ಡಮರುಗವನ್ನು ಎಲ್ಲೆಡೆಯೂ ಶಬ್ದ ಆವರಿಸುವಂತೆ ಜೋರಾಗಿ ಬಾರಿಸ ಪ್ರಾಣಿ ಪಕ್ಷಿಗಳನ್ನೆಲ್ಲ ದೂರ ಕಳಿಸಿಬಿಟ್ಟನು. ಶಿವನು ಧ್ಯಾನ ಸ್ಥಿತಿಯಲ್ಲಿರುವಂತೆ ಕಣ್ಣು ಮುಚ್ಚಿ ಅಮರ ಕಥೆಯನ್ನು ಹೇಳಲು ಆರಂಭಿಸಿದನು. ಪಾರ್ವತಿಯೂ ಮಧ್ಯ ಮಧ್ಯ ಹ್ಞೂ, ಎಂದು ಹೂ ಗುಟ್ಟುತ್ತಿದ್ದಳು.
ಆದರೆ ಸ್ವಲ್ಪ ಹೊತ್ತಿನಲ್ಲಿ ಅವಳಿಗೆ ತೂಕಡಿಕೆ ಬಂದು ನಿದ್ರೆ ಬಂದಿತು. ಶಿವನು ಬಾರಿಸಿದ ಡಮರುಗದ ಶಬ್ದಕ್ಕೆ ಅಲ್ಲಿರುವ ಎಲ್ಲಾ ಖಗ ಮೃಗಗಳೆಲ್ಲ ಓಡಿ ಹೋಗಿದ್ದವು ಆದರೆ ಒಂದು ಮರದ ಪೊಟರೆಯಲ್ಲಿ ಇನ್ನೂ ಕಣ್ಣು ಬಿಡದ ಗಿಳಿ ಮರಿಯಿತ್ತು. ಅದು ಶಿವನು ಹೇಳುತ್ತಿದ್ದ ಅಮರ ಕತೆಯನ್ನು ಕೇಳುತ್ತಿತ್ತು.
ಇದನ್ನೂ ಓದಿ: Roopa Gururaj Column: ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !
ಒಂದು ವೇಳೆ ತಾಯಿ ಪಾರ್ವತಿ ಹೂಗುಟ್ಟದಿದ್ದರೆ ಪರಮೇಶ್ವರನು ಕಥೆ ಹೇಳುವುದನ್ನು ನಿಲ್ಲಿಸಿ ಬಿಡುತ್ತಾನೆ ಎಂದುಕೊಂಡು ಪಾರ್ವತಿಯಂತೆ ಗಿಳಿಯೂ ಸಹ ಶಿವನು ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ ಮಧ್ಯಮಧ್ಯ ಹೂ ಗುಟ್ಟುತ್ತಿತ್ತು. ಶಿವನು ಅಮರಕತೆಯನ್ನು ಹೇಳಿ ಮುಗಿಸಿದನು ಅವನಿಗೆ ಪರಮಾನಂದವಾಗಿತ್ತು.
ಕಣ್ಣು ಬಿಟ್ಟ ಮೇಲೆ ಶಿವನಿಗೆ, ಪಾರ್ವತಿ ತನ್ನ ಅಮರಕತೆಯನ್ನು ಕೇಳದೆ ಪೊಟರೆಯಲ್ಲಿದ್ದ ಗಿಳಿಮರಿ ಕೇಳಿದೆ ಎಂದು ಮನದಟ್ಟಾಯಿತು. ಕೋಪದಿಂದ ಗಿಳಿಯನ್ನು ಸಂಹರಿಸಲು ಬೆನ್ನಟ್ಟಿ ಹೋದನು. ಆಗ ಬದರಿನಾಥದಲ್ಲಿ ವ್ಯಾಸ ಮಹರ್ಷಿಗಳ ಪತ್ನಿ, ಸ್ನಾನ ಮಾಡಿ ಕೂದಲು ಒಣಗಿಸಲು ಆಶ್ರಮದ ಹೊರಗಡೆ ಬಿಸಿಲಿಗೆ ತಲೆ ಕೂದಲನ್ನು ಹರವಿ ನಿಂತಿದ್ದಳು; ಅವಳಿಗೆ ಆಕಳಿಕೆ ಬಂದು ಆಕಳಿಸಲು ಜೋರಾಗಿ ಬಾಯಿ ಕಳೆದಳು. ಹಾರಿ ಬರುತ್ತಿದ್ದ ಪುಟ್ಟ ಗಿಳಿ ಮರಿ ಅವಳ ಬಾಯಿಯೊಳಗೆ ಹೋಗಿ ಹೊಟ್ಟೆ ಸೇರಿತು. ಅಲ್ಲಿಗೆ ಬಂದ ಪರಮೇಶ್ವರ ‘ಈಗ ತಾನೆ ಹಾರಿ ಬಂದ ಒಂದು ಪುಟ್ಟ ಗಿಳಿ ಮರಿ ನಿಮ್ಮ ಗರ್ಭವನ್ನು ಸೇರಿದೆ. ಅದನ್ನು ಹೊರಗೆ ಕಳಿಸಿ’ ಎಂದನು.
ಯಾಕೆ ಕಳಿಸಬೇಕು ಎಂದಳು.
ಶಿವನು ಈ ಗಿಳಿ ಮರಿಯು ನಾನು ಪಾರ್ವತಿಗೆ ಹೇಳುತ್ತಿದ್ದ ಅಮರಕತೆಯನ್ನು ಅಡಗಿ ಕೊಂಡು ಕದ್ದು ಕೇಳಿದೆ ಅದಕ್ಕಾಗಿ ಹೊರಗೆ ಕಳಿಸಿ ಎಂದನು. ಋಷಿ ಪತ್ನಿ ಹೇಳಿದಳು ಅದು ಅಮರಕತೆಯನ್ನು ಕೇಳಿದುದರಿಂದ ಅಮರವಾಗಿದೆ. ನೀವು ಅದನ್ನು ಕೊಂದರೆ ಅಮರಕ ತೆಯ ಪಾವಿತ್ರ್ಯತೆ ಹೊರಟು ಹೋಗುವುದಿಲ್ಲವೇ ಎಂದು ಕೇಳಿದಾಗ ಪರಮೇಶ್ವರನು ಹಾಗೆ ಹೊರಟು ಹೋದನು.
ಈ ಗಿಳಿ ಮರಿಯು ತಾಯಿಯ ಗರ್ಭದಲ್ಲಿ ಸೇರಿ 12 ವರ್ಷಗಳ ಕಾಲವಾದರೂ ತಾಯಿಯ ಹೊಟ್ಟೆಯಿಂದ ಹೊರಗೆ ಬಂದಿರಲಿಲ್ಲ. ಇದನ್ನು ಕಂಡ ವ್ಯಾಸ ಮಹರ್ಷಿಗಳು ಮಗು ಹೊರಗೆ ಬಾ ಎಂದು ಹೇಳಿದರು. ಆಗ ಗಿಳಿಮರಿಯು ಇಲ್ಲ ನಾನು ಹೊರಗೆ ಬಂದರೆ ಭೂ ಲೋಕದ ಮಾಯೆಯಲ್ಲಿ ಸಿಲುಕಿ ಕೊಳ್ಳುವೆ ಎಂದಿತು.
ವ್ಯಾಸರು ಹೇಳಿದರು ಹಾಗೆಲ್ಲ ಗರ್ಭದೊಳಗೆ ಎಷ್ಟು ದಿನವಾದರೂ ಇರಲು ಸಾಧ್ಯವಿಲ್ಲ ಹೊರಗೆ ಬಾ ಎಂದರು. ಅವರ ಮಾತಿಗೆ ಕಟ್ಟು ಬಿದ್ದು ಜನ್ಮ ತಳೆದ ಮಗುವಿನ ಮುಖ ಗಿಳಿಯ ಹಾಗೆ ಇದ್ದಿದ್ದರಿಂದ ಶುಖ ದೇವ ಎಂದು ಹೆಸರಿಟ್ಟರು. ಅವರು ಅಮರ ಕಥೆಯನ್ನು ಕೇಳಿದ್ದರಿಂದ ಅಮರರಾದರು ಮತ್ತು ಎಲ್ಲವನ್ನು ತ್ಯಜಿಸಿ ಹೊರಟುಬಿಟ್ಟರು.
ಮುಂದೆ ಪಾಂಡವರ ವಂಶದ ಪರೀಕ್ಷಿತ ಮಹಾರಾಜನಿಗೆ ಬಂದ ಶಾಪದಿಂದ ಮುಕ್ತಿ ಗೊಳಿಸಲು ಶುಖಮನಿಗಳು ಬಂದು ಭಾಗವತ ಕಥೆಯನ್ನು ಹೇಳಿ ಪರೀಕ್ಷಿತನಿಗೆ ಮುಕ್ತಿ ದೊರೆಯುವಂತೆ ಮಾಡಿದರು. ಆದ್ದರಿಂದ ಭೂಲೋಕದಲ್ಲಿ ಹುಟ್ಟುವ ಪ್ರತಿಯೊಬ್ಬರೂ ಒಂದಲ್ಲ ಒಂದು ಸಾರಿಯಾದರೂ ಭಾಗವತದ ಕತೆಯನ್ನು ಕೇಳಿದರೆ ಮಾಡಿರುವ ಪಾಪ ಕಾರ್ಯಗಳೆಲ್ಲವೂ ನಶಿಸಿ ಭಗವಂತನ ಸಾನಿಧ್ಯವನ್ನು ಸೇರುತ್ತಾರೆ ಎನ್ನುವ ಪ್ರತೀತಿ ಇದೆ.