ಸಂಸದ ಡಾ.ಕೆ.ಸುಧಾಕರ್ ಮಾನಸಿಕ ಅಸ್ವಸ್ಥರಾಗಿರಬೇಕು: ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ತಿರುಗೇಟು
ಕಾಮಾಲೆ ರೋಗ ಬಂದಿರುವವರಿಗೆ ಕಾಣೋದೆಲ್ಲ ಹಳದಿ ಎಂಬಂತೆ ಸಂಸದರು ಭ್ರಮೆಯಲ್ಲಿದ್ದಾರೆ. ಸಂಸದರಾಗಿ ಆಯ್ಕೆಯಾಗಿರುವುದು ತೃಪ್ತಿ ತಂದಿಲ್ಲ. ಜಿಲ್ಲೆಯ ಹಿಡಿತ ಕೈತಪ್ಪಿದೆ. ಬರುತ್ತಿದ್ದ ವರಮಾನ ಕೈತಪ್ಪಿದೆ

ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ : ಸಂಸದರು ಮಾನಸಿಕ ಆಸ್ವಸ್ಥರಾಗಿರಬೇಕು. ಇಲ್ಲವೇ ಕೊರೋನಾ ಸಂದರ್ಭದಲ್ಲಿ ದಿಲ್ಲಿಯಿಂದ ಬರುತ್ತಿದ್ದ ಆದಾಯ ಬರದೇ ಇರುವ ಕಾರಣಕ್ಕೆ ಈ ರೀತಿಯಾಗಿ ಹೇಳಿಕೆ ಕೊಟ್ಟಿರ ಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಂಸದ ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನಾಚರಣೆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣಗಳ ಮೇಲೆ ಹಣ ಲೂಟಿ ಮಾಡುತ್ತಿದ್ದ ಆದಾಯ ಕಡಿಮೆಯಾಗಿರುವ ಹಿನ್ನೆಲೆ ನೋವಿನಿಂದ ಮಾತನಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ: ಯಮನ ವೇಷಧಾರಿ ಮೂಲಕ ಜಾಗೃತಿ
ಇಲಾಖೆಗೊಬ್ಬ ಏಜೆಂಟರನ್ನು ನೇಮಿಸುವ ಸಂಸ್ಕೃತಿ ಈ ಹಿಂದಿನ ಅವಧಿಯಲ್ಲಿತ್ತು. ಸ್ವಂತ ಕಂಪನಿ ಗಳಿಗೆ ಪ್ಯಾಕೇಜ್ ಮಾಡಿಕೊಂಡು ಗುತ್ತಿಗೆ ತೆಗೆದುಕೊಂಡಿದ್ದರು. ನಮ್ಮ ಅವಧಿಯಲ್ಲಿ ಯಾರನ್ನೂ ನೇಮಿಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಕೇಳಬಹದು. ಕಾಮಾಲೆ ರೋಗ ಬಂದಿರುವವರಿಗೆ ಕಾಣೋದೆಲ್ಲ ಹಳದಿ ಎಂಬಂತೆ ಸಂಸದರು ಭ್ರಮೆಯಲ್ಲಿದ್ದಾರೆ. ಸಂಸದರಾಗಿ ಆಯ್ಕೆಯಾಗಿರುವುದು ತೃಪ್ತಿ ತಂದಿಲ್ಲ. ಜಿಲ್ಲೆಯ ಹಿಡಿತ ಕೈತಪ್ಪಿದೆ. ಬರುತ್ತಿದ್ದ ವರಮಾನ ಕೈತಪ್ಪಿದೆ. ಚಿಕ್ಕಬಳ್ಳಾಪುರ ಉತ್ಸವ ಮತ್ತು ಶಿವೋತ್ಸವಕ್ಕೆ ಎಷ್ಟು ವಸೂಲಿ ಆಯಿತು. ಜಿಪಂ, ತಾಪಂ ಚುನಾವಣೆಗಳಿಗೆ ಪೊಲೀ ಸ್ ಠಾಣೆಗಳಿಂದ ಎಲ್ಲೆಲ್ಲಿ ವಸೂಲಿ ಆಯಿತು. ಯಾವ್ಯಾವ ಗುತ್ತಿಗೆ ಕಾಮಗಾರಿಗಳಿಗೆ ಎಲ್ಲೆಲ್ಲಿ ವಸೂಲಿ ಆಯಿತು ಎಂಬ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಿದೆ ಎಂದು ಕಾಲೆಳೆದರು.
ನರ್ಸಿಂಗ್ ವರ್ಗಾವಣೆ, ಡೆಂಟಲ್ ವೈದ್ಯರ ನೇಮಕ, ವೈದ್ಯಕೀಯ ಆಸ್ಪತ್ರೆಗೆ ಅಸಿಸ್ಟೆಂಟ್ ಪ್ರೊಫೆಸರ್ ಗಳ ನೇಮಕಾತಿಯಲ್ಲಿ ಎಷ್ಟು ತಿಂಗಳ ಸಂಬಳ ನೇರವಾಗಿ ಕೇಳಿ ಪಡೆದಿರುವುದು. ಈ ರೀತಿಯ ಯಾವುದಾದರೂ ಉದಾಹರಣೆಗಳು ನಮ್ಮ ಇಲಾಖೆಯಲ್ಲಿ ನಡೆದಿದ್ದರೆ ನನ್ನ ಗಮನಕ್ಕೆ ತರಲಿ. ನಾವು ಆ ರೀತಿಯ ಸಂಸ್ಕೃತಿಯಲ್ಲಿ ಬೆಳೆದವರಲ್ಲ ಎಂದು ಹೇಳಿದರು.
ಸಹಕಾರಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಹಣ ದುರುಪಯೋಗ ಸರಿಯಲ್ಲ. ನಮ್ಮ ಸರಕಾರ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಈ ಹಿಂದಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ತಪ್ಪು ಹೇಳಿಕೆಯಿಂದ ಸಾಲ ಮರುಪಾವತಿಯಲ್ಲಿ ಲೋಪವಾಗಿ ಸಾಲ ನೀಡಲು ಆಗಿಲ್ಲ. ಈ ಬಗ್ಗೆ ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಬೇಕಿದೆ. ನಮ್ಮ ತಾಲೂಕಿನಲ್ಲಿ ಕೂಡ 10 ಕೋಟಿ ಅವ್ಯವಹಾರ ಆಗಿದೆ ಎಂದು ಬಗ್ಗೆ ಆರೋಪ ಕೇಳಿಬಂದಿದೆ. ತನಿಖೆ ಆಗಲಿ ನೋಡೋಣ ಎಂದರು.
ಗಣಿಗಾರಿಕೆ ವಿರುದ್ಧ ನನ್ನ ನಿಲುವು ದೃಢವಾಗಿದೆ. ಈ ಹಿಂದಿನ ಉಸ್ತುವಾರಿ ಸಚಿವರು ಸ್ವತಃ ಗಣಿಯ ಮಾಲಿಕರಾಗಿದ್ದಾರೆ.ಅದಕ್ಕಾಗಿಯೇ ಅವರ ಗಣಿಗಾರಿಕೆಯ ಅನಾಹುತಗಳ ಬಗ್ಗೆ ಮಾತನಾಡು ತ್ತಿಲ್ಲ. ಗಣಿ ಮಾಲಿಕರಿಂದ ಹಣವಸೂಲಿ ಯಾರು ಮಾಡಿದಾರೆಂದು ಸಂಸದರು ದೂರಿದ್ದಾರೋ ಅವರೇ ಅದಕ್ಕೆ ಉತ್ತರ ನೀಡಬೇಕು. ನನ್ನ ಬಗ್ಗೆ ಮಾತನಾಡಿದ್ದರೆ ಹೇಳಿ ಎಲ್ಲಿ ಬೇಕಾದರೂ ಚರ್ಚೆಗೆ ನಾನು ಸಿದ್ದ .ಶಾಸಕರ ಬಗ್ಗೆ ಮಾತನಾಡಿದರೆ ಅವರೇ ಉತ್ತರ ನೀಡುತ್ತಾರೆ ಎಂದರು.