Vishwavani Special: ಫಲಿತಾಂಶ ಕುಸಿಯಲು ಗೊಂದಲವೇ ಕಾರಣ !
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ, ಕುಸಿತಕ್ಕೆ ‘ಪಾರದರ್ಶಕ’ ಪರೀಕ್ಷೆಗೆ ಕಾರಣವೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರಮಾಣದ ಕುಸಿತಕ್ಕೆ ಕಾರಣ ಕೊನೆ ಕ್ಷಣದ ಬದಲಾವಣೆಗಳೇ ಕಾರಣ ಎನ್ನುವುದು ಹಲವು ಉಪನ್ಯಾಸಕರ ಆರೋಪವಾಗಿದೆ.


ಮಾದರಿ ಪ್ರಶ್ನೆಪತ್ರಿಕೆಯಲ್ಲಿನ ಗೊಂದಲದ ವಿವಾದ
ಕಠಿಣ ಪ್ರಶ್ನೆಗಳನ್ನು ಹೆಚ್ಚಿಸಿದ್ದ ಇಲಾಖೆ
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ, ಕುಸಿತಕ್ಕೆ ‘ಪಾರದರ್ಶಕ’ ಪರೀಕ್ಷೆಗೆ ಕಾರಣವೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರಮಾಣದ ಕುಸಿತಕ್ಕೆ ಕಾರಣ ಕೊನೆ ಕ್ಷಣದ ಬದಲಾವಣೆಗಳೇ ಕಾರಣ ಎನ್ನುವುದು ಹಲವು ಉಪನ್ಯಾಸಕರ ಆರೋಪ ವಾಗಿದೆ. ಹೌದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಫಲಿತಾಂಶದಲ್ಲಿಕುಸಿತ ಕಂಡಿತ್ತು. ರಾಜ್ಯಾದ್ಯಂತ ವೆಬ್ ಕಾಸ್ಟಿಂಗ್ ಸೇರಿದಂತೆ ಪರೀಕ್ಷಾ ಅಕ್ರಮ ತಡೆಯಲು ತೆಗೆದುಕೊಂಡ ಕ್ರಮವೇ ಫಲಿತಾಂಶ ಕುಸಿಯಲು ಕಾರಣ. ಕಠಿಣ ಕ್ರಮದಿಂದ ಕಷ್ಟಪಟ್ಟು ಓದಿರುವ ವಿದ್ಯಾರ್ಥಿ ಗಳಿಗೆ ನ್ಯಾಯ ಕೊಡಿಸಲುಸಾಧ್ಯವಾಗಿದೆ ಎನ್ನುವ ಮಾತುಗಳನ್ನು ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ಸಚಿವರು ಹೇಳಿದ್ದರು.
ಆದರೆ ಈ ಪ್ರಮಾಣದಲ್ಲಿ ಫಲಿತಾಂಶ ಕುಸಿಯಲು ಮಾದರಿ ಪ್ರಶ್ನೆಯ ಬದಲಾವಣೆಯೇ ಪ್ರಮುಖ ಕಾರಣ ಎನ್ನುವುದು ಉಪನ್ಯಾಸಕ ವಾದವಾಗಿದೆ. ಕೇಂದ್ರ ಸರಕಾರದ ಪರಾಖ್ ಯೋಜನೆ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ನ ಕೆಲ ತೀರ್ಮಾನಗಳಿಗೆ ಅನುಸಾರವಾಗಿ ಮಾದರಿ ಪ್ರಶ್ನೆಪತ್ರಿಕೆಯ ಸ್ವರೂಪವನ್ನು ಬದಲಿಸಲಾಗಿದೆ. ಈ ಬದಲಾವಣೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಹಾಗೂ ಜನವರಿ-ಫೆಬ್ರವರಿ ತಿಂಗಳಲ್ಲಿ ಮಾಡಿದ್ದೇ ಈ ಎಲ್ಲ ಸಮಸ್ಯೆಗೆ ಕಾರಣ. ಬದಲಾವಣೆ ಮಾಡುವು ದಷ್ಟೇ ಅಲ್ಲದೇ, ಬದಲಾವಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡದಿರುವುದು ಇಂದಿನ ಈ ಫಲಿತಾಂಶಕ್ಕೆ ಕಾರಣ ಎನ್ನುವುದು ಹಲವರ ಆರೋಪವಾಗಿದೆ.
ಇದನ್ನೂ ಓದಿ: Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?
ನೂತನ ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಡುಗಡೆಗೊಳಿಸಿದ ‘ಈ ಮಾದರಿಯ ಪ್ರಶ್ನೆಗಳು ಮುಖ್ಯ ಪರೀಕ್ಷೆಯಲ್ಲಿ ಬಾರದಿರಬಹುದು’ ಎನ್ನುವ ಸಂದೇಶವನ್ನು ನೀಡಲಾಗಿತ್ತು. ಇದರೊಂದಿಗೆ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕಠಿಣ ಮಾದರಿಯ ಪ್ರಶ್ನೆಗಳನ್ನು ಶೇ.30ಕ್ಕೆ ಏರಿಸಲಾಗಿತ್ತು. ಆದರೆ ಮುಖ್ಯ ಪರೀಕ್ಷೆಯಲ್ಲಿ ಬಂದ ಪ್ರಶ್ನೆಪತ್ರಿಕೆಯಲ್ಲಿ ಈ ಬದಲಾವಣೆಗಳು ಬಂದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಈ ಎಲ್ಲಕ್ಕಿಂತ ಮುಖ್ಯವಾಗಿ ಬದಲಾಗಿರುವ ಮಾದರಿಯ ಬಗ್ಗೆ ಸ್ವತಃ ಮಂಡಳಿಗೆ ಸ್ಪಷ್ಟನೆ ಇರಲಿಲ್ಲ. ಸರಕಾರಿ ಕಾಲೇಜು ಉಪನ್ಯಾಸಕರಿಗೆ ನೀಡಿದ ತರಬೇತಿ ವೇಳೆ ಮೌಖಿಕವಾಗಿ ಮಾಹಿತಿ ನೀಡಲಾ ಗಿದೆಯೇ ಹೊರತು, ಅಧಿಕೃತ ಆದೇಶವನ್ನು ಮಾಡಿಲ್ಲ. ಇದರಿಂದ ಅನೇಕ ಉಪನ್ಯಾಸಕರು, ಪೋಷ ಕರು ಬದಲಾಗಿರುವ ಅಥವಾ ಅಭ್ಯಾಸಕ್ಕೆ ನೀಡಿರುವ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಮುಖ್ಯಪರೀಕ್ಷೆ ಯ ಪ್ರಶ್ನೆಪತ್ರಿಕೆಯ ವ್ಯತ್ಯಾಸ ಅರಿತಿಲ್ಲ. ಇದು ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಮೌಖಿಕ ಸೂಚನೆಯೇ ಗೊಂದಲಕ್ಕೆ ಕಾರಣ
ಮಾದರಿ ಪ್ರಶ್ನೆ ಪತ್ರಿಕೆಯಲ್ಲಿನ ಬದಲಾವಣೆ ಬಗ್ಗೆ ಮೌಲ್ಯಮಾಪನ ಮಂಡಳಿಯಿಂದ ಅಧಿಕೃತ ಆದೇಶ ಬಂದಿರಲಿಲ್ಲ. ಬದಲಿಗೆ ನಿರ್ದೇಶಕರು, ಸಂಪನ್ಮೂಲ ವ್ಯಕ್ತಿಗಳಿಗೆ ಮಾಹಿತಿ ನೀಡಿದ್ದರು. ತರಬೇತಿಯ ಸಮಯದಲ್ಲಿ ಸರಕಾರಿ ಉಪನ್ಯಾಸಕರಿಗೆ ಮಾತ್ರ ಈ ಸಂಪನ್ಮೂಲ ವ್ಯಕ್ತಿಗಳು ಸೂಚನೆ ನೀಡಿದ್ದರು. ಆದರೆ ಬದಲಾಗಿರುವ ಪದ್ಧತಿ ಹಾಗೂ ಕಠಿಣ ಪ್ರಮಾಣದಲ್ಲಿ ಏರಿಕೆ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರ ಗಮನಕ್ಕೆ ಬಂದಿರಲಿಲ್ಲ. ಆದ್ದರಿಂದ ಗೊಂದಲ ಸೃಷ್ಟಿಯಾಗಿದೆ.
ಹೆಚ್ಚಿದ ಸಿಇಟಿ ಒತ್ತಡ
ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದರೂ ಅನೇಕ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆದು, ಎಂಜಿನಿಯರಿಂಗ್ ಸೀಟು ಪಡೆಯಬೇಕು ಎನ್ನುವ ಇಚ್ಛೆ ಇರುವುದಿಲ್ಲ. ಆದರೆ ರಾಜ್ಯ ಸರಕಾರ ಈ ಬಾರಿ ಉಚಿತ ಸಿಇಟಿ ತರಬೇತಿಯ ನೀಡಲು ಮುಂದಾಗಿದ್ದು ಹಲವು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಸಿಇಟಿ ತರಬೇತಿಗಳು ಬೆ.9ರಿಂದ ಇರುತ್ತಿದ್ದವು. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸುವುದಕ್ಕೆ ಸಮಸ್ಯೆಯಾಯಿತು ಎನ್ನುವ ಮಾತುಗಳನ್ನು ಹಲವು ಉಪನ್ಯಾಸಕರು ಹೇಳಿದ್ದಾರೆ.
*
ಮಾದರಿ ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮುಖ್ಯ ಪರೀಕ್ಷೆಯಲ್ಲಿರುವ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿಯೇ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಬೇಕು. ಇದರೊಂದಿಗೆ ಈ ರೀತಿಯ ಸೂಕ್ಷ್ಮ ತೀರ್ಮಾನ ಗಳನ್ನು ಕೊನೆಕ್ಷಣದಲ್ಲಿ ತೆಗೆದುಕೊಳ್ಳುವುದಕ್ಕಿಂತ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ತೆಗೆದು ಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲ.
- ಪ್ರಕಾಶ್, ಖಾಸಗಿ ಶಾಲಾ ಉಪನ್ಯಾಸಕ